ರೈಲ್ವೆ ಇಲಾಖೆಯ ಉದ್ಯೋಗಾವಕಾಶ ಪಡೆಯಿರಿ: ಕೇಂದ್ರ ಸಚಿವ ವಿ.ಸೋಮಣ್ಣ

By Kannadaprabha NewsFirst Published Sep 28, 2024, 6:29 PM IST
Highlights

ರೈಲ್ವೆ ಇಲಾಖೆಯಲ್ಲಿ 46 ಸಾವಿರ ಹುದ್ದೆಗಳಿಗೆ ಆಹ್ವಾನಿಸಲಾಗಿದೆ. ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶವಿರುವುದರಿಂದ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಈ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಉದ್ಯೋಗ ಪಡೆಯುವಂತೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ತುಮಕೂರು (ಸೆ.28): ರೈಲ್ವೆ ಇಲಾಖೆಯಲ್ಲಿ 46 ಸಾವಿರ ಹುದ್ದೆಗಳಿಗೆ ಆಹ್ವಾನಿಸಲಾಗಿದೆ. ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶವಿರುವುದರಿಂದ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಈ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಉದ್ಯೋಗ ಪಡೆಯುವಂತೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು. ನಗರದ ಹನುಮಂತಪುರದ ಕೊಲ್ಲಾಪುರದಮ್ಮ ಸಮುದಾಯ  ಭವನದಲ್ಲಿ ತಿಗಳ ಸಮಾಜದವರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಸಚಿವ ವಿ.ಸೋಮಣ್ಣ, ತಿಗಳ ಸಮುದಾಯಕ್ಕೂ ತಮಗೂ ಅವಿನಾಭಾವ ಸಂಬಂಧವಿದೆ. 45 ವರ್ಷಗಳ ಹಿಂದೆ ತಾವು ಬೆಂಗಳೂರಿಗೆ ಬಂದಾಗ ಆಶ್ರಯ ನೀಡಿದವರು ತಿಗಳ ಸಮಾಜದವರು, ಸ್ವಾಭಿಮಾನ, ಸಂಸ್ಕಾರಕ್ಕೆ ತಿಗಳ ಸಮಾಜ ಮತ್ತೊಂದು ಹೆಸರು ಎಂದರು.

ಶ್ರಮಜೀವಿ ತಿಗಳ ಸಮಾಜದವರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಲು ಆದ್ಯತೆ ನೀಡಬೇಕು, ರೈಲ್ವೆ ಇಲಾಖೆಯ ಉದ್ಯೋಗ ಅವಕಾಶವನ್ನು ಮಕ್ಕಳು ಪಡೆಯಲು ಪ್ರೇರೇಪಿಸಬೇಕು. ಭಾರತ ಸರ್ಕಾರದಿಂದ ದೊರೆಯಬಹುದಾದ ಅನುಕೂಲಗಳನ್ನು ಸಮಾಜಕ್ಕೆ ಒದಗಿಸಲು ತಾವು ಬದ್ಧ ಎಂದು ಹೇಳಿದರು. ಮಾಜಿ ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ತಿಗಳರು ಜಮೀನು ನಂಬಿ ಬದುಕುತ್ತಿರುವವರು. ಮೋಸ, ಕಪಟ, ವಂಚನೆಯಿಲ್ಲದ ಸುಸಂಸ್ಕೃತ ಸಮಾಜ ಎಂದು ಹೇಳಿ, ಸಚಿವ ಸೋಮಣ್ಣನವರು ಉತ್ತಮ ಕೆಲಸ ಮಾಡುತ್ತಾರೆ. ನಿಮ್ಮ ಸಹಕಾರ ಅವರಿಗೆ ಶಕ್ತಿ ತುಂಬಬೇಕು ಎಂದರು.

Latest Videos

ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಎಷ್ಟೇ ಒತ್ತಡ ಬಂದರೂ ಸೋಮಣ್ಣನವರನ್ನೇ ಬೆಂಬಲಿಸಿದ ತಿಗಳ ಸಮಾಜದ ಸಹಕಾರವನ್ನು ಶ್ಲಾಘಿಸಿ, ಸಮಾಜದ ಅಭಿವೃದ್ಧಿಗೆ ತಾವು ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದರು. ಗ್ರಾಮಾಂತರ ಕ್ಷೇತ್ರ ಶಾಸಕ ಬಿ.ಸುರೇಶ್ ಗೌಡರು, ಸಚಿವ ಸೋಮಣ್ಣನವರು ಅಧಿಕಾರ ಸ್ವೀಕರಿಸಿದ ಮೂರೇ ತಿಂಗಳಲ್ಲಿ ರೈಲ್ವೆ ಇಲಾಖೆಯಲ್ಲಿ ಅಭಿವೃದ್ಧಿಯ ಕ್ರಾಂತಿಯನ್ನೇ ಮಾಡಿದ್ದಾರೆ. ಇನ್ನಷ್ಟು ಕೆಲಸ ಮಾಡಿ ತುಮಕೂರು ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿ ಮಾಡುತ್ತಾರೆ. ಸೋಮಣ್ಣರಂತಹ ಕೆಲಸಗಾರ ನಾಯಕರು ಈ ರಾಜ್ಯದ ಮುಖ್ಯಮಂತ್ರಿಯಾದರೆ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

ರಾಜ್ಯದಲ್ಲಿ 2127 ಪೌರ ಕಾರ್ಮಿಕರ ಕೆಲಸ ಕಾಯಂ: ಸಚಿವ ರಹೀಂಖಾನ್

ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಮುಖಂಡರಾದ ಟಿ.ಎಲ್.ಕುಂಭಯ್ಯ, ಯಜಮಾನರುಗಳಾದ ಹನುಮಂತರಾಜು, ಗಂಗಹನುಮಯ್ಯ, ದಾಸೇಗೌಡ, ಕುಮಾರಣ್ಣ, ಶಿವಕುಮಾರ್, ಜೆಡಿಎಸ್ ಮುಖಂಡ ಗುಬ್ಬಿ ನಾಗರಾಜು, ಬಿಜೆಪಿ ಮುಖಂಡ ದಿಲೀಪ್‌ಕುಮಾರ್, ಮುಖಂಡರಾದ ಯೋಗಾನಂದಕುಮಾರ್, ಕೃಷ್ಣಪ್ಪ, ಕುಂಭಯ್ಯ, ಕುಂಭಿನರಸಯ್ಯ, ದಾಂಡೇಲಿ ಗಂಗಣ್ಣ, ನಗರ ಪಾಲಿಕೆ ಮಾಜಿ ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ಮಾಜಿ ಸದಸ್ಯರಾದ ಎ.ನರಸಿಂಹಮೂರ್ತಿ, ಟಿ.ಹೆಚ್.ಜಯರಾಂ, ಟಿ.ಜಿ.ನರಸಿಂಹರಾಜು, ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಮುಖಂಡರಾದ ಜಹಂಗೀರ್ ರವೀಶ್, ಲಕ್ಷ್ಮೀಶ್, ಧನಿಯಾಕುಮಾರ್, ಆಂಜನೇಯ, ವಿಜಯ್‌ಗೌಡ ಮೊದಲಾದವರು ಭಾಗವಹಿಸಿದ್ದರು.

click me!