
ಗಂಗಾವತಿ (ಏ.29): ಅಕ್ರಮ ಪಡಿತರ ಅಕ್ಕಿ ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅರೋಪಿಗಳಿಗೆ ಮೂರು ವರ್ಷ ಸೆರೆಮನೆವಾಸ ಮತ್ತು ಪ್ರತಿಯೊಬ್ಬರಿಗೆ 10 ಸಾವಿರ ದಂಡವನ್ನು ಇಲ್ಲಿಯ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಲಯ ತೀರ್ಪು ನೀಡಿದೆ.
ನಗರದ ಮಹಾವೀರ ವೃತ್ತದ ಸಮೀಪವಿರುವ ಚಿನಿವಾಲರ ಆಸ್ಪತ್ರೆಯ ಹಿಂಭಾಗದಲ್ಲಿ ಅರೋಪಿಗಳಾದ ಮೆಹೆಬೂಬುಪಾಷ, ಹುಸೇನ್, ಖಲಂದರ್ ಎನ್ನುವರು ಏ.29.2021 ರಲ್ಲಿ ಬೇಲೋರೂ ವಾಹನ ಮತ್ತು ಲಾರಿಯಲ್ಲಿ ಆಕ್ರಮವಾಗಿ 155 ಚೀಲಗಳಲ್ಲಿ 70 ಕ್ವಿಂಟಲ್ ಪಡಿತರ ಅಕ್ಕಿಯನ್ನು ತುಂಬುತ್ತಿರುವ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿ ವಶ ಪಡಿಸಿಕೊಂಡಿದ್ದರು.
ಈ ಪ್ರಕರಣಕ್ಕೆ ಸಂಬಂದಿಸಿದಂತೆ ತನಿಖಾದಿಕಾರಿಯಾಗಿದ್ದ ಎಎಸ್ ಐ ಸಿದ್ದರಾಮಯ್ಯ ಅವರು ನ್ಯಾಯಲಯಕ್ಕೆ ದೋಷರೋಪಣಾ ಪಟ್ಟಿ ನೀಡಿದ್ದರು. ಬುಧವಾರ ನಡೆದ ವಿಚಾರಣೆಯಲ್ಲಿ ಅಕ್ರಮ ಅಕ್ಕಿ ಸಂಗ್ರಹ ಕುರಿತು ಸಾಬೀತು ಆಗಿದ್ದರಿಂದ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಲಯದ ನ್ಯಾಯಧೀಶರಾಗಿರುವ ನಾಗೇಶ ಪಾಟೀಲ್ ಅವರು ಮೂರು ವರ್ಷ ಸೆರೆಮನೆವಾಸ ಮತ್ತು ಪ್ರತಿ ಅರೋಪಿಗಳು 10 ಸಾವಿರ ರು ದಂಡ ನೀಡುವಂತೆ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ನಿರಂಜನಸ್ವಾಮಿ ಹಿರೇಮಠ ಅವರು ವಾದ ಮಂಡಿಸಿದ್ದರು. ಈ ತನಿಖೆಯಲ್ಲಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಅಕ್ಬರ್, ಭೀಮಣ್ಣ, ಭೀಮೇಶ, ಯಲ್ಲರೆಡ್ಡಿ ಇವರು ನ್ಯಾಯಲಯಕ್ಕೆ ಸಾಕ್ಷಿಗಳನ್ನು ಹಾಜರುಪಡಿಸಿದ್ದರು.