
ಗಂಗಾವತಿ (ಆ.09): ಜನಿಸಿದ ಕೇವಲ ಐದು ದಿನಗಳಲ್ಲೇ ಆಧಾರ್ ಕಾರ್ಡ್ ನೋಂದಣಿ ಮಾಡಿಸಿಕೊಂಡ ಕಿರಿಯ ಮಗುವೆಂಬ ಹೆಗ್ಗಳಿಕೆಗೆ ಗಂಗಾವತಿ ತಾಲೂಕಿನ ಶ್ರೀರಾಮನಗರದ ಅಂಚುರಿ ರೇಯಾಂಕ ತ್ರಿನಯನಿ ಪಾತ್ರಳಾಗಿದ್ದಾಳೆ. ಈ ಸಾಧನೆಯನ್ನು ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆ ಗುರುತಿಸಿ, ವಿಶ್ವ ದಾಖಲೆ ಪದಕ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶ್ರೀರಾಮನಗರದ ನಿವಾಸಿಗಳಾದ ಡಾ. ಎ. ಪವನಕುಮಾರ ಹಾಗೂ ಡಾ. ವರಲಕ್ಷ್ಮೀಪಾಲ ದಂಪತಿಯ ಪುತ್ರಿಯಾದ ಅಂಚುರಿ ರೇಯಾಂಕ ತ್ರಿನಯನಿ, 2026ರ ಮೇ 1ರಂದು ಗಂಗಾವತಿಯ ವಿವೇಕಾನಂದ ಆಸ್ಪತ್ರೆಯಲ್ಲಿ ಜನಿಸಿದ್ದಾಳೆ. ಮಗು ಜನಿಸಿದ ತಕ್ಷಣವೇ ಪೋಷಕರು ಜನನ ನೋಂದಣಿ ಹಾಗೂ ಆಧಾರ್ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಮೇ 6ರಂದು, ಅಂದರೆ ಜನಿಸಿದ ಐದನೇ ದಿನವೇ ಮಗುವಿನ ಹೆಸರಿನಲ್ಲಿ ಆಧಾರ್ ನೋಂದಣಿ ಮಾಡಿಸಿದ್ದಾರೆ ಎಂದು ತಿಳಿಸಲಾಗಿದೆ.
ಐದು ದಿನದಲ್ಲೇ ಆಧಾರ್ ನೋಂದಣಿ
ಸಾಮಾನ್ಯವಾಗಿ ಮಗುವಿನ ಜನನದ ಬಳಿಕ ಅಗತ್ಯ ದಾಖಲೆಗಳ ಪ್ರಕ್ರಿಯೆ ಪೂರ್ಣಗೊಳಿಸಲು ಸಮಯ ಬೇಕಾಗುತ್ತದೆ. ಆದರೆ ಡಾ. ಪವನಕುಮಾರ ಹಾಗೂ ಡಾ. ವರಲಕ್ಷ್ಮೀಪಾಲ ದಂಪತಿಗಳು ತಮ್ಮ ಮಗುವಿನ ಆಧಾರ್ ನೋಂದಣಿ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿದ್ದಾರೆ. ಇದರೊಂದಿಗೆ ಜನಿಸಿದ ಕೇವಲ ಐದು ದಿನಗಳಲ್ಲೇ ಆಧಾರ್ ನೋಂದಣಿ ಮಾಡಿಸಿಕೊಂಡ ಅತ್ಯಂತ ಕಿರಿಯ ಮಗುವೆಂಬ ದಾಖಲೆಯನ್ನು ತ್ರಿನಯನಿ ನಿರ್ಮಿಸಿದ್ದಾಳೆ ಎಂದು ಕುಟುಂಬದ ಪರವಾಗಿ ತಿಳಿಸಲಾಗಿದೆ.
ಈ ವಿಶಿಷ್ಟ ಸಾಧನೆಯನ್ನು ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆ ಅಧಿಕೃತವಾಗಿ ಗುರುತಿಸಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. ಸಂಸ್ಥೆಯ ವತಿಯಿಂದ ವಿಶ್ವ ದಾಖಲೆ ಪದಕ ಹಾಗೂ ಪ್ರಮಾಣಪತ್ರ ನೀಡಿ ಮಗುವನ್ನು ಗೌರವಿಸಲಾಗಿದೆ. ಈ ಕುರಿತು ಶ್ರೀರಾಮನಗರದ ಜಿ. ರಾಮಕೃಷ್ಣ ಅವರು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಸದ್ಯ ಗಂಗಾವತಿಯ ವೈದ್ಯ ದಂಪತಿಯ ಪುತ್ರಿ ಜನಿಸಿದ ಐದೇ ದಿನಗಳಲ್ಲಿ ಆಧಾರ್ ನೋಂದಣಿ ಮಾಡಿಸಿಕೊಂಡಿರುವುದು ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ಸಂತಸಕ್ಕೆ ಕಾರಣವಾಗಿದೆ.