ಕೊಟ್ಯಂತರ ರು. ಅವ್ಯವಹಾರ: ಬಿಬಿಎಂಪಿ ಎಂಜಿನಿಯರ್‌ ಸೆರೆ

By Kannadaprabha NewsFirst Published Dec 3, 2019, 7:43 AM IST
Highlights

ಹಣಕಾಸು ಅವ್ಯವಹಾರ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಇಂಜಿನಿಯರ್ ಓರ್ವರನ್ನು ಅರೆಸ್ಟ್ ಮಾಡಲಾಗಿದೆ 

ಬೆಂಗಳೂರು[ಡಿ.03]:  ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್‌) ಪ್ರಕರಣ ಸಂಬಂಧ ಬಿಬಿಎಂಪಿಯ ಸಹಾಯಕ ಎಂಜಿನಿಯರ್‌ ಎಂ.ಎನ್‌.ದೇವರಾಜ್‌ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿದೆ.

ಮಹದೇವಪುರ ವಯದ ಟಿಡಿಆರ್‌ ವಿಭಾಗದ ಹಿಂದಿನ ಸಹಾಯಕ ಎಂಜಿನಿಯರ್‌ ಆಗಿದ್ದ ಎಂ.ಎನ್‌.ದೇವರಾಜ್‌ ನಡೆಸಿರುವ ಅಕ್ರಮಗಳ ಕುರಿತು ತನಿಖೆ ಮುಂದುವರಿದಿದೆ. ಟಿಡಿಆರ್‌ ವಿತರಣೆಯಲ್ಲಿ ಅಕ್ರಮ ಎಸಗಿ ಬಿಬಿಎಂಪಿಗೆ ಕೋಟ್ಯಂತರ ರುಪಾಯಿ ನಷ್ಟಮಾಡಿದ್ದಾರೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಟಿ.ಸಿ.ಪಾಳ್ಯ ಮುಖ್ಯರಸ್ತೆ ಮತ್ತು ವಾರಣಾಸಿ ಮುಖ್ಯ ರಸ್ತೆ ಅಗಲೀಕರಣಗೊಳಿಸುವ ವಿಚಾರ ಸಂಬಂಧ ಬಿಬಿಎಂಪಿ ಅಧಿಕಾರಿ, ಖಾಸಗಿ ವ್ಯಕ್ತಿಗಳು ಟಿಡಿಆರ್‌ನಲ್ಲಿ ಭಾಗಿಯಾಗಿದ್ದರು. ಸರ್ಕಾರಿ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಖಾಸಗಿ ವ್ಯಕ್ತಿಗಳ ಜತೆ ಶಾಮೀಲಾಗಿ ಬಿಬಿಎಂಪಿ ರಸ್ತೆ ಅಗಲೀಕರಣಕ್ಕೆ ವಶಪಡಿಸಿಕೊಳ್ಳಲಾದ ನಿವೇಶನ ಮತ್ತು ಕಟ್ಟಡಗಳ ಜಾಗಕ್ಕಿಂತ ಹೆಚ್ಚಿನ ಜಾಗಕ್ಕೆ ಬೆಲೆ ನಿಗದಿ ಮಾಡಿ ಭೂ ಪರಿವರ್ತನಾ ಆದೇಶವನ್ನು ಮರೆಮಾಚಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೌದೇನಹಳ್ಳಿ ಗ್ರಾಮ ಸರ್ವೇ ನಂ.7ಕ್ಕೆ ಸಂಬಂಧಪಟ್ಟಂತೆ ಅರ್ಜಿದಾರರಾದ ಆನೆಮ್ಮ ಅವರ ಹೆಸರಲ್ಲಿ ಆರ್‌ಟಿಸಿ ಹೊಂದಿದ್ದು, ಗೂಡ್ಸ್‌ ಹೋಮ್ಸ್‌ ವೆಂಚ​ರ್‍ಸ್ ಕಂಪನಿಯ ಪಾಲುದಾರರ ಎಂ.ವಿ.ಗೋಪಿ, ವೆಂಕಟೇಶ್‌, ವಿ.ಗಜೇಂದ್ರ ಮತ್ತು ಎಂ.ಕೆ.ರೋಚನ್‌ ಅವರು ಆನೆಮ್ಮ ಮತ್ತು ಅವರ ಮಕ್ಕಳ ಜತೆ ಒಡಂಬಡಿಕೆ ಮಾಡಿಕೊಂಡಿದ್ದರು. ಬಳಿಕ ಲೇಔಟ್‌ ಮಾಡಿ ನಿವೇಶನಗಳನ್ನು ಮತ್ತು 2.8 ಎಕರೆ ಜಾಗವನ್ನು ಸೈಯದ್‌ ಪೈಯಾಜ್‌ ಅವರಿಗೆ ಮಾರಾಟ ಮಾಡಿರುವ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮರೆಮಾಚಲಾಗಿದೆ. ಆನೆಮ್ಮ ಕಡೆಯಿಂದ ಮಹದೇವಪುರ ವಲಯದ ಬಿಬಿಎಂಪಿ ಕಚೇರಿಯ ಟಿಡಿಆರ್‌ ವಿಭಾಗದಲ್ಲಿ ಟಿಡಿಆರ್‌ ಅರ್ಜಿ ಸಲ್ಲಿಸಿದ್ದರು. ಅಧಿಕಾರಿಗಳು, ಖಾಸಗಿ ವ್ಯಕ್ತಿಗಳು ಒಳಸಂಚು ರೂಪಿಸಿ ನಕಲು ದಾಖಲೆ ಸೃಷ್ಟಿಸಿ ತಪ್ಪು ವರದಿಗಳನ್ನು ತಯಾರಿಸಲಾಗಿದೆ ಎಂದಿದ್ದಾರೆ.

click me!