Uttara Kannada| 15 ದಿನದಲ್ಲಿ ನಾಲ್ಕು ಹಸು ಚಿರತೆಗೆ ಬಲಿ, ಆತಂಕದಲ್ಲಿ ಜನತೆ

By Kannadaprabha NewsFirst Published Oct 10, 2021, 10:46 AM IST
Highlights

*   ಚಿರತೆ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ
*  ಶಿವಳ್ಳಿ, ದಾನಂದಿ ಭಾಗದಲ್ಲಿ ಜಾನುವಾರುಗಳ ಮೇಲೆ ದಾಳಿ
*  ಮೂರು ಚಿರತೆಗಳು ಒಟ್ಟಿಗೆ ಇರುವುದನ್ನು ನೋಡಿದ ಗ್ರಾಮಸ್ಥರು
 

ಶಿರಸಿ(ಅ.10):  ತಾಲೂಕಿನ ಶಿವಳ್ಳಿ, ದಾನಂದಿ ಭಾಗದಲ್ಲಿ ಚಿರತೆ(Leopard) ಹಾವಳಿ ಹೆಚ್ಚಾಗಿದೆ. ಜಾನುವಾರುಗಳ(Livestock) ಮೇಲೆ ನಿರಂತರ ದಾಳಿ ನಡೆಯುತ್ತಿರುವುದರಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ(Forest Department) ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಿದೆ.

ಬನವಾಸಿ ಅರಣ್ಯ ವ್ಯಾಪ್ತಿಯ ಬಿಸಲಕೊಪ್ಪ, ಎಕ್ಕಂಬಿ, ಶಿವಳ್ಳಿ ಭಾಗದಲ್ಲಿ ಸಮೃದ್ಧ ಅರಣ್ಯ ಪ್ರದೇಶ, ಸಾಗುವಾನಿ ನೆಡುತೋಪು ಹೆಚ್ಚಿದ್ದು ಪ್ರಾಣಿಗಳ ಓಡಾಟಕ್ಕೆ ಅನುಕೂಲವಾಗಿದೆ. ಹದಿನೈದು ದಿನಗಳಲ್ಲಿ ಬೊಪ್ಪನಳ್ಳಿ, ದಾನಂದಿ ಭಾಗದಲ್ಲಿ ನಾಲ್ಕು ಹಸುಗಳನ್ನು(Cow) ಚಿರತೆ ಬಲಿ ಪಡೆದಿದೆ. ಈ ಪೈಕಿ ಎರಡು ಕರು ಮತ್ತು ಎರಡು ದೊಡ್ಡ ಆಕಳು ಸೇರಿವೆ. ಜಾನುವಾರುಗಳ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆ ಆಯ್ದ ಜಾಗಗಳನ್ನು ಗುರುತಿಸಿ ಬೋನ್‌ಗಳನ್ನು ಇರಿಸಿದೆ. ಅರಣ್ಯ ರಕ್ಷಕರು ಗಸ್ತು ತಿರುಗಲು ಆರಂಭಿಸಿದ್ದಾರೆ.

ಕೊನೆಗೂ ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಧಾರವಾಡ ಮಂದಿ..!

ಚಳಿಗಾಲದ ಆರಂಭದ ಅವಧಿಯಲ್ಲಿ ಈ ಭಾಗದಲ್ಲಿ ಚಿರತೆ ಓಡಾಟ ಹೆಚ್ಚುತ್ತಿತ್ತು. ಈ ಬಾರಿ ಅವಧಿಗೆ ಮುನ್ನವೇ ಚಿರತೆ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಜನರ ಆತಂಕ ದೂರ ಮಾಡಲು ಚಿರತೆ ಸೆರೆಗೆ ಪ್ರಯತ್ನಿಸುತ್ತಿದ್ದೇವೆ ಎನ್ನುತ್ತಾರೆ ಬನವಾಸಿ ವಲಯಾರಣ್ಯಾಧಿಕಾರಿ ಉಷಾ ಕಬ್ಬೇರ.

ದಾನಂದಿ, ಶಿವಳ್ಳಿ, ಬೊಪ್ಪನಳ್ಳಿ, ಸಂಬಯ್ಯನಜಡ್ಡಿ, ಗೇರಮನೆ ಸುತ್ತಮುತ್ತ ಚಿರತೆ ಹದಿನೈದು ದಿನಗಳಿಂದ ನಿರಂತರವಾಗಿ ಓಡಾಡುತ್ತಿದೆ. ಈಚೆಗೆ ಮೂರು ಚಿರತೆಗಳು ಒಟ್ಟಿಗೆ ಇರುವುದನ್ನು ನೋಡಿದ್ದೇವೆ ಎನ್ನುತ್ತಾರೆ ಸ್ಥಳೀಯರು. ಇಲ್ಲಿ ವಿದ್ಯಾರ್ಥಿಗಳು ಪ್ರತಿ ದಿನ ಬೆಟ್ಟ-ಗುಡ್ಡ ಹತ್ತಿ ಶಾಲೆಗೆ ಹೋಗುತ್ತಿದ್ದಾರೆ. ಅವರಿಗೂ ಆತಂಕ ಕಾಡುತ್ತಿದೆ. ದಸರಾ ರಜೆ ಆರಂಭವಾಗಿದ್ದರಿಂದ ವಿದ್ಯಾರ್ಥಿಗಳ ಆತಂಕ ತಾತ್ಕಾಲಿಕ ದೂರವಾಗಿದೆ. ಆದರೆ, ಶಾಲೆ ಆರಂಭವಾಗುವ ಒಳಗೆ ಚಿರತೆಗಳನ್ನು ಹಿಡಿದು ಬೇರೆಡೆ ಬಿಡಬೇಕು ಎಂಬುದು ಸ್ಥಳೀಯರ ಅಭಿಪ್ರಾಯ. ಎಕ್ಕಂಬಿ, ಬಿಸಲಕೊಪ್ಪ ಭಾಗದಲ್ಲಿ ಚಿರತೆಗಳಿರಲ್ಲ. ಬೇರೆಡೆ ಹಿಡಿದ ಚಿರತೆಯನ್ನು ಇಲ್ಲಿ ತಂದು ಬಿಟ್ಟಿರಬಹುದಾದ ಸಾಧ್ಯತೆ ಇದೆ ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.
 

click me!