ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರಿಗೆ ಇಮ್ಮಡಿ ಪುಲಕೇಶಿ ಮಾದರಿ ಕಿರೀಟ

By Kannadaprabha NewsFirst Published Mar 26, 2023, 5:35 AM IST
Highlights

ನಗರದಲ್ಲಿ ಭಾನುವಾರ ನಡೆಯುವ ಪಂಚರತ್ನ ರಥಯಾತ್ರೆಯ ಸಮಾರೋಪದಲ್ಲಿ ಪಾಲ್ಗೊಳ್ಳುತ್ತಿರುವ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರಿಗೆ ಸಮರ್ಪಿಸಲು ದಕ್ಷಿಣಪಥೇಶ್ವರ ಇಮ್ಮಡಿ ಪುಲಕೇಶಿಯ ಕಿರೀಟ ಮಾದರಿಯನ್ನು ತಯಾರಿಸಲಾಗಿದೆ.

  ಮೈಸೂರು :  ನಗರದಲ್ಲಿ ಭಾನುವಾರ ನಡೆಯುವ ಪಂಚರತ್ನ ರಥಯಾತ್ರೆಯ ಸಮಾರೋಪದಲ್ಲಿ ಪಾಲ್ಗೊಳ್ಳುತ್ತಿರುವ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರಿಗೆ ಸಮರ್ಪಿಸಲು ದಕ್ಷಿಣಪಥೇಶ್ವರ ಇಮ್ಮಡಿ ಪುಲಕೇಶಿಯ ಕಿರೀಟ ಮಾದರಿಯನ್ನು ತಯಾರಿಸಲಾಗಿದೆ.

ಅಖಂಡ ಭಾರತವನ್ನು ಆಳ್ವಿಕೆ ಮಾಡಿದ ಕರ್ನಾಟಕದ ಮಣ್ಣಿನ ಮಕ್ಕಳೆಂದರೆ ಅದು ಇಮ್ಮಡಿ ಪುಲಕೇಶಿ ಹಾಗೂ ಎಚ್‌.ಡಿ. ದೇವೇಗೌಡರವರು. ಇವರಿಬ್ಬರಿಗೂ ಸಾಮ್ಯತೆ ಇರುವುದರಿಂದ ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ವ್‌ ಅಧ್ಯಕ್ಷ ಬೀಡನಹಳ್ಳಿ ಸತೀಶ್‌ಗೌಡ ಅವರ ಪರಿಕಲ್ಪನೆಯೊಂದಿಗೆ ಕಲಾವಿದ ನಂದನ್‌ ಅವರ ಕಸೂತಿಯಲ್ಲಿ ಈ ಕಿರೀಟ ಸಿದ್ಧಗೊಂಡಿದೆ ಎಂದು ಸಂಸ್ಥೆ ತಿಳಿಸಿದೆ. ರೈತರ ಮೂಲ ನೇಗಿಲ ಪ್ರತಿಮೆಯನ್ನು ರೈತ ನಾಯಕ ಎನಿಸಿರುವ ದೇವೇಗೌಡರಿಗೆ ಸಮರ್ಪಿಸಲು ಅವರ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಈ ವೇಳೆ ಯುವ ಮುಖಂಡ ಅಭಿಷೇಕ್‌ ಗೌಡ ಜೊತೆ ಇದ್ದರು.

ಇಂದು ಸಮಾರೋಪ

ಮೈಸೂರು(ಮಾ.26):  ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್‌ ಆಯೋಜಿಸಿದ್ದ ಪಂಚರತ್ನ ರಥಯಾತ್ರೆಯ ಇಂದು(ಭಾನುವಾರ) ಸಂಜೆ 4.30ಕ್ಕೆ ನಗರದ ಹೊರ ವಲಯದಲ್ಲಿನ ಉತ್ತನಹಳ್ಳಿ ಸಮೀಪ ನಡೆಯಲಿದೆ.

ಮೂರು ತಿಂಗಳಿನಿಂದ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ರಥಯಾತ್ರೆಯ ಸಂಪನ್ನವು ಚಾಮುಂಡೇಶ್ವರಿ ಮತ್ತು ಉತ್ತನಹಳ್ಳಿ ತ್ರಿಪುರಸುಂದರಿ ದೇವಿಯ ಸನ್ನಿಧಿಯಲ್ಲಿ ನಡೆಯಲಿದೆ. ಪೂರ್ವ ನಿಗದಿಯಂತೆ ಸಂಜೆ 4.30ರ ನಂತರ ಕಾರ್ಯಕ್ರಮ ನಡೆಯಲಿದ್ದು. ಪಕ್ಷದ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಈ ಸಮಾವೇಶದಲ್ಲಿ ಪಾಲ್ಗೊಳ್ಳುವರು. ಇದಲ್ಲದೇ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಸೇರಿದಂತೆ ಹಲವಾರು ಮುಖಂಡರು, ಶಾಸಕರು, ಮಾಜಿ ಶಾಸಕರು ಭಾಗವಹಿಸುವರು.

ಕೋಲಾರ, ವರುಣ ಎರಡೂ ಕಡೆ ಸಿದ್ದರಾಮಯ್ಯ ಸ್ಪರ್ಧೆ: ಪುತ್ರ ಯತೀಂದ್ರ

ರಥಯಾತ್ರೆಯ ಸಮಾರೋಪದ ಹಿನ್ನೆಲೆಯಲ್ಲಿ ನಗರದ ಶ್ರೀರಾಂಪುರ ಬಳಿಯಿಂದ ಆಯೋಜಿಸಿದ್ದ ರೋಡ್‌ ಶೋ ಅನಿವಾರ್ಯ ಕಾರಣಗಳಿಂದ ರದ್ದುಪಡಿಸಿದ್ದು, ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಮೆರವಣಿಗೆಯಲ್ಲಿ ಬರುವರು. ನವೆಂಬರ್‌ನಿಂದ ರಾಜ್ಯದ ಬಹುತೇಕ ಎಲ್ಲಾ ಕ್ಷೇತ್ರಗಳನ್ನು ಸಂಪರ್ಕಿಸಿರುವ ಎಚ್‌.ಡಿ. ಕುಮಾರಸ್ವಾಮಿ ಅವರು ಆಡಳಿತಾರೂಢ ಬಿಜೆಪಿ ಮತ್ತು ಅಧಿಕೃತ ವಿರೋಧಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದರು. ವಿವಿಧ ಬಗೆಯ ಹಾರಗಳ ಮೂಲಕವೇ ಈ ರಥಯಾತ್ರೆ ಪ್ರಚಾರದಲ್ಲಿತ್ತು. ಈಗ ಮೈಸೂರಿನಲ್ಲಿ ಲಕ್ಷಾಂತರ ಮಂದಿಯನ್ನು ಸೇರಿಸುವ ಮೂಲಕ ತನ್ನ ಭದ್ರಕೋಟೆಯಾದ ಹಳೆಯ ಮೈಸೂರು ಭಾಗದಲ್ಲಿ ಜೆಡಿಎಸ್‌ ಶಕ್ತಿಪ್ರದರ್ಶನಕ್ಕೆ ಮುಂದಾಗಿದೆ.
ಒಂದು ಕಾಲಕ್ಕೆ ಜೆಡಿಎಸ್‌ ಭದ್ರಕೋಟೆಯಾಗಿದ್ದ ಮೈಸೂರಿನಲ್ಲಿ ನಡು ನಡುವೆ ಕಾಂಗ್ರೆಸ್‌ ಚಿಗುರೊಡೆಯಿತು. ಆದರೆ ಮತ್ತೆ ಈ ಬಾರಿ ಹೆಚ್ಚು ಸ್ಥಾನಗಳನ್ನು ಹಳೇ ಮೈಸೂರು ಭಾಗದಲ್ಲಿ ಪಡೆಯಬೇಕು ಎಂಬು ಉತ್ಸಾಹದಲ್ಲಿ ಪಕ್ಷದ ವರಿಷ್ಠರಿದ್ದಾರೆ. ಈ ಎಲ್ಲಾ ಕಾರಣಗಳಿಂದ ಈ ಪಂಚರತ್ನ ರಥಯಾತ್ರೆಯ ಸಮಾರೋಪವು ಪ್ರಾಮುಖ್ಯತೆ ಪಡೆದಿದೆ.

ಲಕ್ಷಾಂತರ ಮಂದಿಯನ್ನು ಸೇರಿಸುವ ಉದ್ದೇಶದಿಂದ ನಗರದ ಹೊರ ವಲಯದಲ್ಲಿ ಕಾರ್ಯಕ್ರಮ ನಿಗದಿಪಡಿಸಲಾಗಿದೆ. ಈ ಹಿಂದೆ ಮಹಾರಾಜ ಕಾಲೇಜು ಮೈದಾನ ಅಥವಾ ಇಲವಾಲ ಸಮೀಪ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು. ಆದರೆ ಈಗ ನಡೆಯುತ್ತಿರುವ ಸಮಾರೋಪದ ಸ್ಥಳ ಹೊಸದು. ಜೊತೆಗೆ ಸಮೀಪದಲ್ಲಿಯೇ ಚಾಮುಂಡೇಶ್ವರಿ ಬೆಟ್ಟಮತ್ತು ಉತ್ತನಹಳ್ಳಿ ತ್ರಿಪುರಸುಂದರಿ ದೇವಸ್ಥಾನ ಇರುವುದು ಇಲ್ಲಿನ ವಿಶೇಷ. ಅಲ್ಲದೆ ಸಂಜೆ ವೇಳೆ ಕಾರ್ಯಕ್ರಮ ಆಯೋಜಿಸಿರುವುದೂ ಕೂಡ ಶಾಸೊತ್ರೕಕ್ತವಾಗಿ ಎನ್ನಲಾಗಿದೆ.

click me!