'ಮೋದಿ ವಿರುದ್ಧ ಮಾತನಾಡಿದರೆ ಕೊಲೆ ಬೆದರಿಕೆಗಳು ಬರುತ್ತಿವೆ'

By Kannadaprabha NewsFirst Published Feb 10, 2021, 3:28 PM IST
Highlights

ನರೇಂದ್ರ ಮೋದಿಯವರೇ ಸ್ವತಃ ಕಾರ್ಪೋರೇಟ್‌ ಕಂಪನಿಗಳ ಪರಾವಲಂಬಿಗಳಾಗಿದ್ದಾರೆ| ರೈತರನ್ನು ಕುರಿತು ಹಗುರವಾಗಿ ಮಾತನಾಡಿದ ಪ್ರಧಾನಿ ಮೋದಿ ಕ್ಷಮೆಯಾಚಿಸಬೇಕು| ಟೀಕಿಸುವವರಿಗೆಲ್ಲ ಕೊಲೆ ಬೆದರಿಕೆ ಹಾಕುವುದು ಸರಿಯಲ್ಲ: ಬಿ.ಆರ್‌. ಪಾಟೀಲ್‌| 

ಕಲಬುರಗಿ(ಫೆ.10): ರಾಜ್ಯಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೈತರನ್ನು ಅಪಮಾನ ಮಾಡುವಂತೆ ಮಾತಾಡಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿದ್ದವರು ರೈತರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದು ಅವರಿಗೆ ಶೋಭೆ ತರುವುದಿಲ್ಲ ಎಂದು ಮಾಜಿ ಶಾಸಕ ಬಿ.ಆರ್‌. ಪಾಟೀಲ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಅವರು, ಮಂಗಳವಾರ ಪತ್ರಿಕಾಭವನದಲ್ಲಿ ಸಂಯುಕ್ತ ರೈತ ಹೋರಾಟ ಸಮಿತಿಯ ನೇತೃತ್ವದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿ ಮಾತನಾಡಿ, ಕೃಷಿ ಮಸೂದೆಗಳನ್ನು ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ಹೋರಾಟದ ಬಗ್ಗೆ ಆಂದೋಲನ ಜೀವಿಗಳು, ಪರಾವಲಂಬಿಗಳು ಎನ್ನುವ ಮೋದಿ ಹೇಳಿಕೆ ಅಪಮಾನಕರವಾಗಿದೆ. ನರೇಂದ್ರ ಮೋದಿಯವರೇ ಸ್ವತಃ ಕಾರ್ಪೋರೇಟ್‌ ಕಂಪನಿಗಳ ಪರಾವಲಂಬಿಗಳಾಗಿದ್ದಾರೆ. ರೈತರನ್ನು ಕುರಿತು ಹಗುರವಾಗಿ ಮಾತನಾಡಿದ ಪ್ರಧಾನಿ ಮೋದಿಯವರು ಕ್ಷಮೆಯಾಚಿಸಬೇಕಂದು ಆಗ್ರಹಿಸಿದರು.

ಕಲಬುರಗಿ ಮಂದಿ ಕೈತಪ್ಪಿದ ಏಮ್ಸ್‌: ಕಲ್ಯಾಣ ಕರ್ನಾಟಕಕ್ಕೆ ಮತ್ತೆ ದೋಖಾ..!

ಕಳೆದ 70 ದಿನಗಳಿಂದ ದೇಶದಲ್ಲಿ ಹೋರಾಟ ನಡೆಯುತ್ತಿದೆ. ಇಲ್ಲಿಯವರೆಗೆ 24 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 216 ರೈತರು ಸಾವನ್ನಪ್ಪಿದ್ದಾರೆ. ಆದರೆ, ಕೇಂದ್ರ ಸರ್ಕಾರವು ಕೇವಲ 4 ಜನ ಮೃತಪಟ್ಟಿದ್ದಾರೆಂದು ಹೇಳಿಕೆ ನೀಡಿದ್ದು ಖಂಡನೀಯ. ದೇಶಾದ್ಯಂತ ರೈತರು ಮಾಡುತ್ತಿರುವ ಪ್ರತಿಭಟನೆಯಿಂದಾಗಿ ಬಿಜೆಪಿಯವರಿಗೆ ಭಯವಾಗುತ್ತಿದೆ ಎಂದರು.

ಮೋದಿ ವಿರುದ್ಧ ಯಾರು ಮಾತನಾಡಿದರೆ ಅವರಿಗೆ ಕೊಲೆ ಬೆದರಿಕೆಗಳು ಬರುತ್ತಿವೆ. ಮೋದಿ ವಿರುದ್ಧ ಮಾತನಾಡಿದ್ದಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೊಲೆ ಬೆದರಿಕೆ ಬರುತ್ತಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಂದೋಲನಗಳು, ಟೀಕೆಗಳು ಸಾಮಾನ್ಯ. ಟೀಕಿಸುವವರಿಗೆಲ್ಲ ಕೊಲೆ ಬೆದರಿಕೆ ಹಾಕುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಜನ ಪ್ರಧಾನಿ ಮೋದಿ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಹೇಶ ಎಸ್‌.ಬಿ, ಪ್ರಭುದೇವ ಯಳಸಂಗಿ, ಶೌಕತ್‌ ಅಲಿ ಆಲೂರ, ಉಮಾಪತಿ ಪಾಟೀಲ್‌ ಇದ್ದರು.
 

click me!