ಉತ್ತರ ಭಾರತದ ಅಧಿಕಾರಿಗಳ ದರ್ಪಕ್ಕೆ ನಂದೀಶ್‌ ಬಲಿ: ಎಚ್‌.ಡಿ.ಕುಮಾರಸ್ವಾಮಿ

By Kannadaprabha NewsFirst Published Oct 29, 2022, 8:00 AM IST
Highlights

ಇನ್‌ಸ್ಪೆಕ್ಟರ್‌ ನಂದೀಶ್‌ ಸಾವು ಉ.ಭಾರತದ ಅಧಿಕಾರಿಗಳ ದರ್ಪದ ಕಗ್ಗೊಲೆ: ಇನ್‌ಸ್ಪೆಕ್ಟರ್‌ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ: ಮಾಜಿ ಮುಖ್ಯಮಂತ್ರಿ ಎಚ್‌ಡಿಕೆ

ಬೆಂಗಳೂರು(ಅ.29):  ನಗರದ ಕೆ.ಆರ್‌.ಪುರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ನಂದೀಶ್‌ ಮಾನಸಿಕವಾಗಿ ನೊಂದು ಹೃದಯಾಘಾತದಿಂದ ಮೃತಪಟ್ಟ ಘಟನೆ ಮತ್ತು ಅವರ ಸಾವಿಗೆ ಕಾರಣವಾದ ಅಂಶಗಳ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಬೇಕು ಎಂದು ಸರ್ಕಾರವನ್ನು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಶುಕ್ರವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇದು ಉತ್ತರ ಭಾರತದ ಅಧಿಕಾರಿಗಳ ದರ್ಪದಿಂದ ಮತ್ತು ಸರ್ಕಾರದಿಂದಲೇ ಆಗಿರುವ ಕಗ್ಗೊಲೆಯೇ ಹೊರತು ಬರೀ ಹೃದಯಾಘಾತ ಅಲ್ಲ. ಈ ಬಗ್ಗೆ ಉತ್ತರ ಮಟ್ಟದ ತನಿಖೆಯಾಗಲೇಬೇಕು. ಈ ಸಾವಿಗೆ ಬಿಜೆಪಿ ಹೈಕಮಾಂಡ್‌ ಕೃಪಾಕಟಾಕ್ಷ ಇರುವ, ಅದರಲ್ಲಿಯೂ ಉತ್ತರ ಭಾರತ ಮೂಲದ ಹಿರಿಯ ಅಧಿಕಾರಿಗಳ ಉದ್ಧತಟನ, ಕಿರುಕುಳ, ಸರ್ಕಾರದ ನಡವಳಿಕೆ, ಕಾಸಿಗಾಗಿ ಹುದ್ದೆ ಕೊಡುತ್ತಿರುವುದೇ ಕಾರಣ ಎಂದು ಆರೋಪಿಸಿದರು.

ಅಮಾನತ್ತಾಗಿದ್ದ ಪೊಲೀಸ್‌ ಇನ್ಸ್‌ಪೆಕ್ಟರ್‌ ತೀವ್ರ ಹೃದಯಾಘಾತದಿಂದ ಸಾವು

ರಾಜ್ಯದಲ್ಲಿ ಒಂದು ದುರ್ಘಟನೆ ನಡೆದಿದೆ. ಪೊಲೀಸ್‌ ಅಧಿಕಾರಿಯೊಬ್ಬರು ಹೃದಯಾಘಾತದಿಂದ ತೀರಿಕೊಂಡರು. ಅಧಿಕಾರಿ ನಂದೀಶ್‌ ಅವರು ಹೃದಯಾಘಾತಕ್ಕೆ ಬಲಿಯಾಗಲು ಕಾರಣ ಏನು ಎನ್ನುವುದು ನನ್ನ ಪ್ರಶ್ನೆ. ಅವರು ಮಾನಸಿಕ ಒತ್ತಡಕ್ಕೊಳಗಾಗಿ ಹೀಗೆ ಆಗಿದೆ ಎಂಬುದಾಗಿ ಅವರ ಧರ್ಮಪತ್ನಿ ಹೇಳಿದ್ದಾರೆ. ಕೆಲಸ ಬೇಡ ಪತಿಯನ್ನು ತಂದುಕೊಡಿ ಎಂದು ಕಣ್ಣೀರು ಹಾಕಿದ್ದಾರೆ. ಇದಕ್ಕೆ ಸರ್ಕಾರ ಉತ್ತರ ಕೊಡಬೇಕು. ಕೆ.ಆರ್‌.ಪುರ ಭಾಗದಲ್ಲಿ ಯಾವುದೋ ಒಂದು ಪಬ್‌ ಇವರ ವ್ಯಾಪ್ತಿಯಲ್ಲಿತ್ತು. ಬೆಳಗಿನ ಜಾವದವರೆಗೆ ಅದು ತೆಗೆದಿತ್ತು. ಇದಕ್ಕೆ ಈ ಪೊಲೀಸ್‌ ಸಹಕಾರವಿತ್ತೆಂದು ನಂದೀಶ್‌ ಅವರನ್ನು ಸಸ್ಪೆಂಡ್‌ ಮಾಡಿದ್ದಾರಂತೆ. ಸರ್ಕಾರ ಮಧ್ಯರಾತ್ರಿ ಒಂದು ಗಂಟೆಯವರೆಗೆ ರೆಸ್ಟೋರೆಂಟ್‌ ತೆರೆಯುವ ಅವಕಾಶ ಕೊಟ್ಟಿದೆ. ಆ ಪಬ್‌ ಎಷ್ಟೊತ್ತು ತೆಗೆದಿತ್ತು. ಅಲ್ಲಿ ಯಾರಿದ್ದರು? ರಾಜಕಾರಣಿ ಬೆಂಬಲಿಗರು ಎಷ್ಟುಜನ ಅಲ್ಲಿ ಇದ್ದರು? ಪೊಲೀಸ್‌ ಅಧಿಕಾರಿಗಳು ಕೂಡ ಡಾನ್ಸ್‌ ಮಾಡಿದ್ದಾರೆ ಎಂದು ರಿಪೋರ್ಚ್‌ ಇದೆ. ಇದರ ಬಗ್ಗೆ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
 

click me!