ಮೀನುಗಾರಿಕೆಗೆ ಅವಕಾಶ ಇದ್ರೂ, ಮೀನುಗಾರರಿಗಿಲ್ಲ ಆಸಕ್ತಿ..!

By Kannadaprabha NewsFirst Published May 10, 2020, 7:43 AM IST
Highlights

ಲಾಕ್‌ಡೌನ್‌ ಸಡಿಲಿಸಿ ಜಿಲ್ಲಾಡಳಿತ ಯಾಂತ್ರೀಕೃತ ಮೀನುಗಾರಿಕೆಗೆ ಅವಕಾಶ ನೀಡಿದ್ದರೂ ಮೀನುಗಾರರು ಕಡಲಿಗಿಳಿಯುವುದಕ್ಕೆ ಆಸಕ್ತಿ ತೋರಿಸುತ್ತಿಲ್ಲ, ಕಾರಣ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತ ಹಾಕಿರುವ ನಿರ್ಬಂಧಗಳು.

ಮಂಗಳೂರು(ಮೇ 10): ಲಾಕ್‌ಡೌನ್‌ ಸಡಿಲಿಸಿ ಜಿಲ್ಲಾಡಳಿತ ಯಾಂತ್ರೀಕೃತ ಮೀನುಗಾರಿಕೆಗೆ ಅವಕಾಶ ನೀಡಿದ್ದರೂ ಮೀನುಗಾರರು ಕಡಲಿಗಿಳಿಯುವುದಕ್ಕೆ ಆಸಕ್ತಿ ತೋರಿಸುತ್ತಿಲ್ಲ, ಕಾರಣ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತ ಹಾಕಿರುವ ನಿರ್ಬಂಧಗಳು.

ಆರಂಭದಲ್ಲಿ ಕೇವಲ 30 ಬೋಟುಗಳಷ್ಟೇ ಮೀನುಗಾರಿಕೆಗೆ ತೆರಳಬೇಕು ಎಂದು ಜಿಲ್ಲಾಡಳಿತ ಹೇಳಿತ್ತು. ಆದರೆ ಸುಮಾರು 5000ಕ್ಕೂ ಅಧಿಕ ಬೋಟುಗಳಿರುವಾಗ 30 ಬೋಟುಗಳನ್ನು ಆಯ್ಕೆ ಮಾಡುವುದು ಹೇಗೆ ಎಂಬ ಪ್ರಶ್ನೆ ಹುಟ್ಟಿಕೊಂಡಿತು. ಕೊನೆಗೆ 100 ಬೋಟುಗಳಿಗೆ ಜಿಲ್ಲಾಡಳಿತ ಅನುಮತಿ ನೀಡಿದೆ. ಆದರೆ ಬೋಟುಗಳಲ್ಲಿ ಕೆಲಸ ಮಾಡುವ ಹೊರ ಜಿಲ್ಲೆ- ರಾಜ್ಯದ ಕಾರ್ಮಿಕರು ಅವರವರ ಊರಿಗೆ ಹೋಗಿದ್ದಾರೆ, ಇಲ್ಲಿನ ಬೋಟುಗಳಲ್ಲಿ ಕೆಲಸ ಮಾಡುವ ಉತ್ತರಕನ್ನಡ ಜಿಲ್ಲೆಯ ಮೀನುಗಾರರು ಕೂಡ ಇನ್ನೂ ಹಿಂದಕ್ಕೆ ಬಂದಿಲ್ಲ.

ಕಾರ್ಕಳದ ವೈದ್ಯನಿಗೆ ಅಮೆರಿಕದಲ್ಲಿ ಸೇವಾ ಗೌರವ

ಜೊತೆಗೆ ಬಂದರಿನಲ್ಲಿ ಮೀನು ಹರಾಜು ಹಾಕುವಂತಿಲ್ಲ, ಬಂದರಿನಲ್ಲಿ ಸಾವಿರಾರು ಮಂದಿ ಸೇರುವಂತಿಲ್ಲ, ಬೋಟುಗಳಿಂದ ಮೀನನ್ನು ಬಂದರಿನಲ್ಲಿ ಖಾಲಿ ಮಾಡಿ ಹೊರಗೆ ಸಾಗಿಸಿ ಮಾರಾಟ ಮಾಡಬೇಕು. ಇಲ್ಲಿ ಮಧ್ಯವರ್ತಿಗಳಿಂದಾಗಿ ಮೀನುಗಾರರಿಗೆ ಸೂಕ್ತ ಬೆಲೆ ಸಿಗುವುದಿಲ್ಲ ಎಂಬ ಆತಂಕದಲ್ಲಿ ಬೋಟು ಮಾಲೀಕರು ಮೀನುಗಾರಿಕೆಗೆ ಮೀನಮೇಷ ಎಣಿಸುತಿದ್ದಾರೆ. ಮೇ 30ಕ್ಕೆ ಈ ಮೀನುಗಾರಿಕಾ ಋುತು ಮುಗಿದು, 2 ತಿಂಗಳು ಮಾನ್ಸೂನ್‌ ಮೀನುಗಾರಿಕೆ ನಿಷೇಧ ಕೂಡ ಆರಂಭವಾಗುತ್ತದೆ. ಆದ್ದರಿಂದ ಅಲ್ಲಿವರೆಗೆ ಕೇವಲ ಒಮ್ಮೆ ಸಮುದ್ರಕ್ಕೆ ಹೋಗಿ ಮೀನುಗಾರಿಕೆ ನಡೆಸಿ ಹಿಂದಕ್ಕೆ ಬರಬಹುದಾಗಿದೆ, ನಂತರ ಪುನಃ ಮೀನುಗಾರಿಕೆಯನ್ನು ನಿಲ್ಲಿಸಲೇಬೇಕಾಗಿದೆ. ಇದು ಕೂಡ ಬೋಟು ಮಾಲೀಕರ ನಿರಾಸಕ್ತಿಗೆ ಕಾರಣವಾಗಿದೆ.

ಪಾಸ್ ಇಲ್ಲ, ಮಾಸ್ಕ್ ಇಲ್ಲ, ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಬಿಜೆಪಿ ನಾಯಕ ಮೇಲೆ ಕೇಸ್!

ಮುಪ್ಪಟ್ಟು ಬೆಲೆ ಮಾರಾಟ: ಈಗ ಸಣ್ಣ ನಾಡದೋಣಿಗಳಲ್ಲಿ ಮೀನುಗಾರಿಕೆ ನಡೆಯುತ್ತಿದೆ, ಹರಾಜಿನ ಪ್ರಕ್ರಿಯೆ ಇಲ್ಲದೆ ಮಧ್ಯವರ್ತಿಗಳು ಅದನ್ನು ಖರೀದಿಸಿ ಮಾರುಕಟ್ಟೆಯಲ್ಲಿ ದುಪ್ಪಟ್ಟು ಮುಪ್ಪಟ್ಟು ಬೆಲೆಗೆ ಮಾರುತ್ತಿದ್ದಾರೆ. ಒಂದೆಡೆ ಲಾಕ್‌ಡೌನ್‌ನಿಂದಾಗಿ ಬಡ- ಕೆಳಮಧ್ಯಮ ವರ್ಗದವರು ಉದ್ಯೋಗ ಸಂಪಾದನೆ ಇಲ್ಲದೇ ಒಪ್ಪೊತ್ತಿನ ಊಟಕ್ಕೂ ಕಷ್ಟಪಡುತ್ತಿರುವಾಗ, ಮೀನು - ಮಾಂಸಪ್ರಿಯರು ಮಾತ್ರ ಎಷ್ಟೇ ಬೆಲೆಯಾದರೂ ಖರೀದಿಸಿ ಸಡಗರಪಡುತ್ತಿದ್ದಾರೆ.

click me!