* ತಂದೆ ಸಾವಿನ ಸುದ್ದಿ ಕೇಳಿ ಮಗನಿಗೆ ಹೃದಯಾಘಾತ
* ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದ ಘಟನೆ
* ಲಿಂಗರಾಜನ ಪತ್ನಿ ಗರ್ಭಿಣಿ
ಲಕ್ಷ್ಮೇಶ್ವರ(ಮೇ.23): ಮಹಾಮಾರಿ ಕೊರೋನಾಗೆ ತಂದೆ ಮತ್ತು ಮಗ ಯಾದ ಹೃದಯ ವಿದ್ರಾವಕ ಘಟನೆ ಶನಿವಾರ ಬೆಳಗ್ಗೆ ಪಟ್ಟಣದ ಬಾಪೂಜಿ ಐಟಿಐ ಕಾಲೇಜಿನ ಹತ್ತಿರದಲ್ಲಿ ನಡೆದಿದೆ.
ಮೂಲತಃ ರಾಣಿಬೆನ್ನೂರಿನವರಾದ ಶಂಕರಗೌಡ ಅವಟೆ (63) ಹಾಗೂ ಮಗ ಲಿಂಗರಾಜ ಅವಟೆ (34) ಕೊರೋನಾ ಸೋಂಕಿಗೆ ಬಲಿಯಾಗಿರುವ ದುರ್ದೈವಿಗಳು. ತಂದೆ ಬೆಳಗ್ಗೆ 6.30ಕ್ಕೆ ಮೃತರಾಗಿದ್ದರೆ, ಮಗ ನಂತರ ಬೆಳಗ್ಗೆ 10.30ಕ್ಕೆ ಮೃತರಾಗಿದ್ದಾರೆ.
ಕಳೆದ 6-7 ದಿನಗಳ ಹಿಂದೆ ಶಂಕರಗೌಡ ಅವರ ಮನೆಯ ಎಲ್ಲ 6 ಮಂದಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಶುಕ್ರವಾರ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ತಂದೆ ಮತ್ತು ಮಗನನ್ನು ದಾಖಲಿಸಲಾಗಿತ್ತು. ಆದರೆ, ಶನಿವಾರ ಬೆಳಗ್ಗೆ ಶಂಕರಗೌಡ ಚಿಕಿತ್ಸೆ ಫಲಿಸದೆ ನಿಧನರಾದರು. ನಂತರ ವಿಷಯ ತಿಳಿದ ಮಗ ಲಿಂಗರಾಜ ಕೂಡಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ವೈದ್ಯಕೀಯ ಸೌಲಭ್ಯ ಕೊರತೆ ನೀಗಿಸಲು ಕ್ರಮ: ಸಚಿವ ಸುಧಾಕರ
ಲಿಂಗರಾಜನ ಪತ್ನಿ ಗರ್ಭಿಣಿ:
ಕಳೆದ ವರ್ಷವಷ್ಟೇ ಲಿಂಗರಾಜನ ಮದುವೆಯಾಗಿದೆ. ಮೃತನ ಪತ್ನಿ 6 ತಿಂಗಳ ಗರ್ಭಿಣಿ. ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಡ ಮೃತರಾಗಿರುವ ವಿಷಯ ಅವರಿಗೆ ತಿಳಿಸಿಲ್ಲ. ಗಂಡನ ಮುಖವನ್ನು ಕೊನೆಯ ಬಾರಿಯೂ ನೋಡಲಾಗದ ಸ್ಥಿತಿಯನ್ನು ಕೊರೋನಾ ಸೋಂಕು ತಂದಿಟ್ಟಿದೆ. ತಂದೆ ಮತ್ತು ಮಗ ಮೃತಪಟ್ಟಿರುವ ವಿಷಯ ತಿಳಿದು ಪಟ್ಟಣದ ಜನತೆ ಕಂಬನಿ ಮಿಡಿದಿದ್ದಾರೆ. ಅಂತ್ಯ ಸಂಸ್ಕಾರವನ್ನು ಲಕ್ಷ್ಮೇಶ್ವರ ಪಟ್ಟಣದ ರುದ್ರಭೂಮಿಯಲ್ಲಿ ಕೋವಿಡ್ ನಿಯಮದಂತೆ ಮಾಡಲಾಯಿತು.