ಚನ್ನಪಟ್ಟಣ: ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ, ತಂದೆ-ಮಗ ಸಾವು

By Kannadaprabha NewsFirst Published Nov 14, 2023, 10:42 PM IST
Highlights

ನಿಯಂತ್ರಣ ಕಳೆದುಕೊಂಡ ಬಸ್ ತಿಟ್ಟಮಾರನಹಳ್ಳಿ ಕೆರೆ ಏರಿಗೆ ಅಳವಡಿಸಿದ್ದ ತಡೆಗೋಡೆಗೆ ಡಿಕ್ಕಿ ಹೊಡೆದು ಎದುರಗಡೆ ಬಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಬಸ್‌ನಲ್ಲಿ ಸುಮಾರು ೩೦ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಅದೃಷ್ಟವಶಾತ್ ಯಾರಿಗೂ ಅಪಾಯ ಸಂಭವಿಸಿಲ್ಲ. 

ಚನ್ನಪಟ್ಟಣ(ನ.14): ಸಾರಿಗೆ ಬಸ್ ಸ್ಟಿಯರಿಂಗ್ ರಾಡಿನ ಬೋಲ್ಟ್ ತುಂಡಾಗಿ ಬಸ್ ನಿಯಂತ್ರಣ ತಪ್ಪಿ, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಂದೆ-ಮಗ ಇಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ತಿಟ್ಟಮಾರನಹಳ್ಳಿ ಏರಿಯ ಮೇಲೆ ಸೋಮವಾರ ಬೆಳ್ಳಂಬೆಳಗ್ಗೆ ನಡೆದಿದೆ. ತಾಲೂಕಿನ ಕೋಟಮಾರನಹಳ್ಳಿ ಗ್ರಾಮದ ಸಿದ್ದಯ್ಯ (೬೫) ಮತ್ತು ಅವರ ಪುತ್ರ ಅರುಣ್ (೨೬) ಮೃತ ದುರ್ದೈವಿಗಳು.

ಚನ್ನಪಟ್ಟಣ ನಗರದಿಂದ ಭೈರನಾಯಕನಹಳ್ಳಿ ಗ್ರಾಮಕ್ಕೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಸ್ಟಿಯರಿಂಗ್ ರಾಡಿನ ಬೋಲ್ಟ್ ತುಂಡಾಗಿ, ಅದಕ್ಕೆ ಅಳವಡಿಸಿದ ಪಿನ್‌ ಕಳಚಿ ಬಿದ್ದಿದ್ದರಿಂದ ತಿಟ್ಟಮಾರನಹಳ್ಳಿ ಏರಿ ಮೇಲೆ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಎಡಭಾಗದಲ್ಲಿ ಚಲಿಸುತ್ತಿದ್ದ ಬಸ್ ಏಕಾಏಕಿ ಬಲಭಾಗದಲ್ಲಿರುವ ಕೆರೆಯ ಕಡೆಗೆ ತಿರುಗಿದೆ. ಎದುರಿನಿಂದ ಚನ್ನಪಟ್ಟಣ ನಗರಕ್ಕೆ ಬರುತ್ತಿದ್ದ ಕೋಟಮಾರನಹಳ್ಳಿ ಗ್ರಾಮದ ಸಿದ್ದಯ್ಯ (೬೫) ಮತ್ತು ಅವರ ಪುತ್ರ ಅರುಣ್ (೨೮) ಇದ್ದ ಸ್ಕೂಟರ್‌ಗೆ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸಿದ್ದಯ್ಯ ಸ್ಥಳದಲ್ಲೇ ಮೃತಪಟ್ಟರೆ, ಅವರ ಮಗ ಅರುಣ್ ಕುಮಾರ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಧಾರವಾಡ: ಕ್ರೂಸರ್ ವಾಹನಕ್ಕೆ ಬೈಕ್ ಡಿಕ್ಕಿ, ದುಡಿಮೆ ಮುಗಿಸಿ ಮರಳಿ ಮನೆಗೆ ತೆರಳುತ್ತಿದ್ದ ಮೂವರು ಮಸಣಕ್ಕೆ..!

ನಿಯಂತ್ರಣ ಕಳೆದುಕೊಂಡ ಬಸ್ ತಿಟ್ಟಮಾರನಹಳ್ಳಿ ಕೆರೆ ಏರಿಗೆ ಅಳವಡಿಸಿದ್ದ ತಡೆಗೋಡೆಗೆ ಡಿಕ್ಕಿ ಹೊಡೆದು ಎದುರಗಡೆ ಬಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಬಸ್‌ನಲ್ಲಿ ಸುಮಾರು ೩೦ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಅದೃಷ್ಟವಶಾತ್ ಯಾರಿಗೂ ಅಪಾಯ ಸಂಭವಿಸಿಲ್ಲ. ತಡೆಗೋಡೆಗೆ ಬಸ್ ಡಿಕ್ಕಿ ಹೊಡೆದು ಪಥ ಬದಲಿಸದಿದ್ದರೆ, ಬಸ್ ಕೆರೆಗೆ ಬಿದ್ದು, ಹೆಚ್ಚಿನ ಅನಾಹುತವಾಗುವ ಸಂಭವವಿತ್ತು.

ಅಪಘಾತದಲ್ಲಿ ಮೃತರಾದವರ ಮರಣೋತ್ತರ ನಡೆಸಿದ ನಂತರ ಮೃತ ದೇಹಗಳನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಗ್ರಾಮಾಂತರ ಪೊಲೀಸರು ವಾಹನಗಳನ್ನು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿದ್ದಾರೆ.

click me!