'ರೈತರ ಹತ್ಯೆಗೈದ ಕೇಂದ್ರ ಸರ್ಕಾರಕ್ಕೆ ತಕ್ಕ ಪಾಠ'

By Kannadaprabha NewsFirst Published Oct 7, 2021, 3:36 PM IST
Highlights

*  ಕೇಂದ್ರ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ರೈತ ಸಮುದಾಯ ಸಿದ್ಧ
*  ರೈತ ಕುಲಕ್ಕೆ ಮರಣ ಶಾಸನವಾದ ಕೃಷಿ ಮಸೂದೆ ಕೈಬಿಡುವಂತೆ ಆಗ್ರಹಿಸಿ ಪ್ರತಿಭಟನೆ
*  ರೈತರ ಸಾವಿಗೆ ಕಾರಣರಾದ ಕೇಂದ್ರ ಸಚಿವ ಅಜಯಕುಮಾರ ಮಿಶಾ ಥೇಣಿ  
 

ರೋಣ(ಅ.07):  ಕೃಷಿ ಮಸೂದೆ ವಿರೋಧಿಸಿ ಉತ್ತರಪ್ರದೇಶದ(Uttara Pradesh) ಲಖಿಂಪುರ ಖೇರಿಯಲ್ಲಿ ರೈತ ಚಳವಳಿಕಾರರ ಮೇಲೆ ಕಾರು ಹರಿಸಿ ನಾಲ್ವರ ಹತ್ಯೆಗೆ ಕಾರಣವಾದ ಕೇಂದ್ರ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ರೈತ ಸಮುದಾಯ ಸಿದ್ಧವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹೇಳಿದೆ.

ಈ ಘಟನೆಗೆ ಕಾರಣರಾದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯಕುಮಾರ ಮಿಶಾ ಥೇಣಿ ಅವರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿ ತಹಸೀಲ್ದಾರ್‌ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದೆ.

'ರೈತರ ಕೊಂದ ಸರ್ಕಾರದ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆ'

ಈ ವೇಳೆ ಮಾತನಾಡಿದ ರೈತ ಸಂಘ ಜಿಲ್ಲಾಧ್ಯಕ್ಷ ಮುತ್ತಣಗೌಡ ಚೌಡರಡ್ಡಿ, ರೈತ ಕುಲಕ್ಕೆ ಮರಣ ಶಾಸನವಾದ ಕೃಷಿ ಮಸೂದೆಯನ್ನು ಕೂಡಲೇ ಕೈಬಿಡುವಂತೆ ಆಗ್ರಹಿಸಿ ರೈತರು(Farmers) ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದಾರೆ. ಇವರ ಮೇಲೆ ಉದ್ದೇಶ ಪೂರ್ವಕವಾಗಿಯೇ ಕಾರು ಹರಿಸುವ ಮೂಲಕ ಹತ್ಯೆ ಮಾಡಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವ ಅಜಯ ಮಿಶ್ರಾ ಥೇಣಿ ಅವರನ್ನು ಸಚಿವ ಸಂಪುಟದಿಂದ ಕೈಬಿಡದಿದ್ದರೆ ದೇಶಾದ್ಯಂತ ಬೀದಿಗಿಳಿದು ಉಗ್ರ ಹೋರಾಟ ನಡೆಸಲಾಗುವುದು ಎಂದು ಇದೇ ಸಂಘಟನೆ ಹೇಳಿದೆ. ಪ್ರತಿಭಟನೆಯಲ್ಲಿ ರೈತ ಸಂಘ ಮಹಿಳಾ ಘಟಕ ರಾಜ್ಯ ಉಪಾಧ್ಯಕ್ಷೆ ಲೀಲಾವತಿ ಚಿತ್ರಗಾರ, ರೈತ ಸಂಘ ಜಿಲ್ಲಾ ಕಾರ್ಯದರ್ಶಿ ಮಾದೇಗೌಡ ಪಾಟೀಲ, ತಾಲೂಕು ಅಧ್ಯಕ್ಷ ಸಂಗಣ್ಣ ದಂಡಿನ, ಕಾರ್ಯಾಧ್ಯಕ್ಷ ದೊಡ್ಡಬಸಪ್ಪ ನವಲಗುಂದ, ಉಪಾಧ್ಯಕ್ಷ ರುದ್ರಯ್ಯ ಸಾಲಿಮಠ, ರಾಮಣ್ಣ ಸೂಡಿ, ಗುರುಮೂರ್ತೆಪ್ಪ ಕುರಡಗಿ, ಯಲ್ಲಪ್ಪ ಶಿಸ್ತಗಾರ, ಬಸವರಾಜ ಜಕ್ಕಲಿ, ಅಶೋಕ ಪವಾಡಶೆಟ್ಟಿಸೇರಿದಂತೆ ಇತರರು ಇದ್ದರು.
 

click me!