ಮಳೆ ಕಲಿಸಿದ ಪಾಠಕ್ಕೆ ಬೆಳೆ ವಿಮೆ ನೋಂದಣಿ ಹೆಚ್ಚಳ!

By Kannadaprabha NewsFirst Published Oct 4, 2022, 6:25 AM IST
Highlights

ಒಂದೂವರೆ ತಿಂಗಳ ಹಿಂದೆ ಬಿದ್ದ ಭಾರೀ ಮಳೆಯಿಂದ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ, ತೋಟಗಾರಿಕೆ ಹಾಗೂ ವಾಣಿಜ್ಯ ಬೆಳೆಗಳನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಗುರಿಯಾದ ರೈತರು ಇದೀಗ ಮಳೆ ಕಲಿಸಿದ ಪಾಠದಿಂದ ಎಚ್ಚೆತ್ತಿಕೊಂಡು ಬೆಳೆ ವಿಮೆ ನೊಂದಣಿಗೆ ಮುಗಿಬಿದ್ದಿದ್ದಾರೆ.

ಕಾಗತಿ ನಾಗರಾಜಪ್ಪ

ಚಿಕ್ಕಬಳ್ಳಾಪುರ (ಅ.04):  ಜಿಲ್ಲೆಯಲ್ಲಿ ಒಂದೂವರೆ ತಿಂಗಳ ಹಿಂದೆ ಬಿದ್ದ ಭಾರೀ ಮಳೆಯಿಂದ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ, ತೋಟಗಾರಿಕೆ ಹಾಗೂ ವಾಣಿಜ್ಯ ಬೆಳೆಗಳನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಗುರಿಯಾದ ರೈತರು ಇದೀಗ ಮಳೆ ಕಲಿಸಿದ ಪಾಠದಿಂದ ಎಚ್ಚೆತ್ತಿಕೊಂಡು ಬೆಳೆ ವಿಮೆ ನೊಂದಣಿಗೆ ಮುಗಿಬಿದ್ದಿದ್ದಾರೆ.

ಪ್ರತಿ ವರ್ಷ ಬೆಳೆ ವಿಮೆ ನೋಂದಣಿಯಲ್ಲಿ ನಿರೀಕ್ಷಿತ ಗುರಿ ತಲುಪದ ಜಿಲ್ಲೆಯಲ್ಲಿ ಈ ಬಾರಿ ಬೆಳೆ ವಿಮೆ ನೋಂದಣಿಗೆ ಜಿಲ್ಲೆಯ ರೈತರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದು, ಇಲ್ಲಿಯವರೆಗೂ 2022-23ನೇ ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಬರೋಬ್ಬರಿ 39,835 ರೈತರು ಬೆಳೆ (Crop) ವಿಮೆಗೆ ನೋಂದಾಯಿಸಿಕೊಂಡಿದ್ದಾರೆ.

ಗೌರಿಬಿದನೂರು ಪ್ರಥಮ:   ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ಯಡಿ ಒಟ್ಟು 37.866 ಮಂದಿ ಹಾಗೂ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಒಟ್ಟು 1971 ಮಂದಿ ಸೇರಿ ಒಟ್ಟು 39,837 ಮಂದಿ ಇಲ್ಲಿಯವರೆಗೂ ಬೆಳೆ ವಿಮೆಗೆ ನೋಂದಣಿ ಮಾಡಿಸಲಾಗಿದೆ. ಇದು ಜಿಲ್ಲೆಯ ರೈತರು (Farmers) ಹಾಗೂ ಕೃಷಿ ಪ್ರದೇಶಕ್ಕೆ ಹೋಲಿಸಿದರೆ ಕಡಿಮೆ. ಆದರೂ ಹಿಂದಿನ ವರ್ಷಗಳ ಬೆಳೆ ವಿಮೆ ನೊಂದಣಿ ಅಂಕಿ, ಅಂಶ ನೋಡಿದರೆ ಈ ವರ್ಷ ಹೆಚ್ಚಿನ ರೈತರು ಬೆಳೆ ವಿಮೆ ನೋಂದಣಿಗೆ ಆಸಕ್ತಿ ತೋರಿದ್ದು ಕೃಷಿ ಅಧಿಕಾರಿಗಳಲ್ಲಿ ಸಂತಸ ಮೂಡಿಸಿದೆ.

ಕಳೆದ ವರ್ಷ 13,243 ಮಂದಿ ಅಷ್ಟೇ ಬೆಳೆ ವಿಮೆಗೆ ನೋಂದಣಿ ಮಾಡಿದ್ದರು. ಆದರೆ ಈ ಬಾರಿ ಅದರ 3 ಪಟ್ಟು ನೋಂದಣಿಯಲ್ಲಿ ಹೆಚ್ಚಳ ಕಂಡಿದೆ. ನೋಂದಣಿ ಕಾರ್ಯಕ್ಕೆ ಇದೇ ರೀತಿ ರೈತರು ಸ್ಪಂದಿಸಿದರೆ ಈ ವರ್ಷ ಬೆಳೆ ವಿಮೆ ನೊಂದಣಿ ಆಗುವ ರೈತರ ಸಂಖ್ಯೆ 50 ಸಾವಿರ ಗಡಿ ದಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಸದ್ಯ ಗೌರಿಬಿದನೂರು ತಾಲೂಕಿನಲ್ಲಿ 14,477 ಮಂದಿ ನೋಂದಾಯಿಸಿ ಮೊದಲ ಸ್ಥಾನದಲ್ಲಿ ಇದ್ದರೆ ಚಿಕ್ಕಬಳ್ಳಾಪುರದಲ್ಲಿ ಬರೀ 2,842 ಮಂದಿ ನೋಂದಾಯಿಸಿ ಕೊನೆ ಸ್ಥಾನದಲ್ಲಿದೆ.

1,500 ಹೆಕ್ಟೇರ್‌ ಬೆಳೆ ನಾಶ

ಜಿಲ್ಲೆಯಲ್ಲಿ ಇತ್ತೀಚೆಗೆ ಬಿದ್ದ ಭಾರೀ ಮಳೆ ಒಂದಡೆ ಸಾರ್ವಜನಿಕ ಆಸ್ತಿ, ಪಾಸ್ತಿಗಳಿಗೆ ಹಾನಿ ಉಂಟು ಮಾಡಿದ್ದರೆ ಬಹುತೇಕ ರೈತರ ಕೃಷಿ, ತೋಟಗಾರಿಕಾ ಬೆಳೆಗಳನ್ನು ನಾಶಪಡಿಸಿದೆ. ಜಿಲ್ಲೆಯ ಒಂದರಲ್ಲಿಯೆ ಮಳೆಗೆ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಸೇರಿ ಸರಿ ಸುಮಾರು 1,500 ಹೆಕ್ಟೇರ್‌ಗೂ ಅಧಿಕ ಬೆಳೆ ಮಳೆಗೆ ನೆಲ ಕಚ್ಚಿದ ಇದರ ಪರಿಣಾಮ ಇದೀಗ ಜಿಲ್ಲೆಯಲ್ಲಿ ಮಳೆಯಿಂದ ಪಾಠ ಕಲಿತಿರುವ ರೈತರು ಬೆಳೆ ವಿಮೆಗೆ ಹೆಚ್ಚು ಮುಗಿ ಬೀಳುವ ಮೂಲಕ ಬೆಳೆಗೆ ಆರ್ಥಿಕ ಭದ್ರತೆ ಒದಗಿಸಲು ಆಸಕ್ತಿ ವಹಿಸಿದ್ದಾರೆ.

 

ತಾಲೂಕು ನೋಂದಣಿದಾರರ ಸಂಖ್ಯೆ

ಬಾಗೇಪಲ್ಲಿ 10,517

ಚಿಕ್ಕಬಳ್ಳಾಪುರ 2,842

ಚಿಂತಾಮಣಿ 3,531

ಗೌರಿಬಿದನೂರು 14,477

ಗುಡಿಬಂಡೆ 4,415

ಶಿಡ್ಲಘಟ್ಟ 4,055

  • ಜಿಲ್ಲೆಯಲ್ಲಿ ಒಂದೂವರೆ ತಿಂಗಳ ಹಿಂದೆ ಬಿದ್ದ ಭಾರೀ ಮಳೆ
  • ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ, ತೋಟಗಾರಿಕೆ ಹಾಗೂ ವಾಣಿಜ್ಯ ಬೆಳೆಗಳನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟ
  • ಮಳೆ ಕಲಿಸಿದ ಪಾಠಕ್ಕೆ ಬೆಳೆ ವಿಮೆ ನೋಂದಣಿ ಹೆಚ್ಚಳ!
  • ರೈತರು ಇದೀಗ ಮಳೆ ಕಲಿಸಿದ ಪಾಠದಿಂದ ಎಚ್ಚೆತ್ತಿಕೊಂಡು ಬೆಳೆ ವಿಮೆ ನೊಂದಣಿಗೆ ಮುಗಿಬಿದ್ದಿದ್ದಾರೆ.
  • ಹಿಂದಿನ ವರ್ಷಗಳಿಗೆ ಹೋಲಿಸಿದರೆ ಹೆಚ್ಚು ನೋಂದಣಿ
  • ಗೌರಿಬಿದನೂರು ಪ್ರಥಮ, ಚಿಕ್ಕಬಳ್ಳಾಪುರ ಕೊನೆ

 

click me!