Chikkaballapur: ಟೊಮೆಟೊ ಬೆಲೆ ಕುಸಿತದಿಂದ ಕಂಗಾಲಾದ ಬೆಳೆಗಾರರು

By Kannadaprabha NewsFirst Published May 12, 2023, 1:31 PM IST
Highlights

ಟೊಮೆಟೊ ಫಸಲಿಗೆ ಸೂಕ್ತ ಬೆಲೆ ಸಿಗದೇ ಇರುವುದರಿಂದ ತಾಲೂಕಿನ ಹಲವಾರ ಟೊಮೆಟೊ ಬೆಳೆಗಾರರು ತೋಟಗಳಲ್ಲಿಯೇ ಬಿಟ್ಟಕಾರಣ ಟೊಮೆಟೊ ಫಸಲು ಕೊಳೆಯುತ್ತಿದೆ. ತಾಲೂಕಿನಲಿ ಅಲೂಗಡ್ಡೆ ಬಿಟ್ಟರೆ ಟೊಮೆಟೊ ಮುಖ್ಯ ವಾಣಿಜ್ಯ ಬೆಳೆ. 

ಮುಳಬಾಗಿಲು (ಮೇ.12): ಟೊಮೆಟೊ ಫಸಲಿಗೆ ಸೂಕ್ತ ಬೆಲೆ ಸಿಗದೇ ಇರುವುದರಿಂದ ತಾಲೂಕಿನ ಹಲವಾರ ಟೊಮೆಟೊ ಬೆಳೆಗಾರರು ತೋಟಗಳಲ್ಲಿಯೇ ಬಿಟ್ಟ ಕಾರಣ ಟೊಮೆಟೊ ಫಸಲು ಕೊಳೆಯುತ್ತಿದೆ. ತಾಲೂಕಿನಲಿ ಅಲೂಗಡ್ಡೆ ಬಿಟ್ಟರೆ ಟೊಮೆಟೊ ಮುಖ್ಯ ವಾಣಿಜ್ಯ ಬೆಳೆ. ತಾಲೂಕಿನಲ್ಲಿ ಸುಮಾರು ಎಂಟು ಸಾವಿರಕ್ಕೂ ಹೆಚ್ಚು ಹೆಕ್ಟೆರ್‌ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗುತ್ತಿದೆ. ಕಸಬಾ ಹೋಬಳಿ ಎನ್‌.ವಡ್ಡಹಳ್ಳಿ ಅರ್‌ಎಂಸಿ ಟೊಮೆಟೊ ಮಾರುಕಟ್ಟೆಯಲ್ಲಿ 15 ಕೆಜಿಯ ಒಂದು ಬಾಕ್ಸ್‌ ಕೇವಲ 40ರಿಂದ 50 ರು. ಗೆ ಮಾರಾಟವಾಗುತ್ತಿದೆ. ರೈತರು ತಮ್ಮ ತೋಟದಿಂದ ಮಾರುಕಟ್ಟೆಗೆ ತರುವ ಕೂಲಿಯೂ ಸಿಗುತ್ತಿಲ್ಲ. 

ಆದ್ದರಿಂದ ರೈತರು ಟೊಮೆಟೊವನ್ನು ಗಿಡದಿಂದ ಕೀಳದೆ ತೋಟದಲ್ಲಿಯೇ ಬಿಟ್ಟಿದ್ದಾರೆ. ತಾಲೂಕಿನ ಎನ್‌. ವಡ್ಡಹಳ್ಳಿ ಎಪಿಎಂಸಿ ಉಪ ಮಾರುಕಟ್ಟೆಗೆ ತಮಿಳುನಾಡಿನ ಚೆನ್ನೈನಲ್ಲಿ ಹೆಚ್ಚಿನ ಬೇಡಿಕೆ ಇದೆ. ಸಾಮಾನ್ಯವಾಗಿ ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ. ಹಾಗಾಗೀ ಈ ಋುತುಮಾನದಲ್ಲಿ ಹೆಚ್ಚು ಟೊಮೆಟೊ ಬೆಳೆಯುವುದು ವಾಡಿಕೆ. ಆದರೆ ಈ ವರ್ಷ ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಲ್ಲಿ ಟೊಮೆಟೊ ಬೆಲೆ ಕೇವಲ 40ರಿಂದ 50 ರು. ಗಳಿಗೆ ಇಳಿದಿರುವುದು ಟೊಮೆಟೊ ಬೆಳೆಗಾರರನ್ನು ಕಂಗಾಲಾಗಿಸಿದೆ.

ರಾಜ್ಯದ ಇತಿಹಾಸದಲ್ಲೇ ಈ ಸಲ ದಾಖಲೆ 73.19% ಅತ್ಯಧಿಕ ಮತದಾನ

ತಾಲೂಕಿನ ದುಗ್ಗಸಂದ್ರ ಹೋಬಳಿ, ಕೊಲದೇವಿ, ಹರಪನಾಯಕನಹಳ್ಳಿ, ಬ್ಯೆರಕೂರು ಹೋಬಳಿ ನಂಗಲಿ, ಆವಣಿ. ತಿಮ್ಮರಾವುತನಹಳ್ಳಿ, ಹೆಬ್ಬಣಿ ಮುಂತಾದ ಕಡೆ ಎಲ್ಲಿ ನೋಡಿದರೂ ಕಟಾವಾಗದೇ ಟೊಮೆಟೊ ಹಣ್ಣು ತೋಟಗಳಲ್ಲಿಯೇ ಬಾಕಿಯಾಗಿರುವ ದೃಶ್ಯ ಕಂಡುಬರುತ್ತಿದೆ. ಲಕ್ಷಾಂತರ ರುಪಾಯಿ ಖರ್ಚು ಮಾಡಿ ಬೆಳೆದ ಬೆಳೆ ಕಣ್ಣು ಮುಂದೆಯೇ ನಾಶವಾಗುತ್ತಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ.

ಲಾಭಕ್ಕಿಂತ ನಷ್ಟವೇ ಹೆಚ್ಚು: ಎನ್‌.ವಡ್ಡಹಳ್ಳಿ ಎಪಿಎಂಸಿ ಟೊಮೆಟೊ ಉಪ ಮಾರುಕಟ್ಟೆಗೆ ರೈತರು ತೋಟಗಳಿಂದ ಒಂದು ಬಾಕ್ಸ್‌ ಟೊಮೆಟೊ ಸಾಗಿಸಲು ಸುಮಾರು ಮೂವತ್ತು ರು. ವೆಚ್ಚ ತಗುಲುತ್ತದೆ. ತೋಟದಲ್ಲಿ ಹಣ್ಣು ಕೀಳಲು ಪುರುಷರಿಗೆ ಐದು ನೂರು ಮತ್ತು ಮಹಿಳೆಯರಿಗೆ ಮೂನ್ನೂರು ರು. ಕೂಲಿ ಕೊಡಬೇಕು. ಹೀಗಾಗಿ ಬೆಲೆ ಇಲ್ಲದಂತಹ ಸ್ಥಿತಿಯಲ್ಲಿ ಟೊಮೆಟೊ ಕಿತ್ತರೆ ರೈತರು ಕೂಲಿ ಹಣ ಕೈಯಿಂದಲೇ ಭರಿಸಬೇಕಾಗುತ್ತದೆ. ಹೀಗಾಗಿ ಲಾಭಕ್ಕಿಂತಲೂ ನಷ್ಟಹೆಚ್ಚಾಗುತ್ತಿರುವುದರಿಂದ ಟೊಮೆಟೊ ಫಸಲು ತೋಟದಲ್ಲಿಯೇ ಉಳಿದಿದೆ.

ಹೈಕಮಾಂಡ್‌ ನನಗೆ ಸಿಎಂ ಸ್ಥಾನ ನೀಡಿದರೆ ತಿರಸ್ಕರಿಸಲಾರೆ: ಡಾ.ಜಿ.ಪರಮೇಶ್ವರ್‌

ಈ ಬಗ್ಗೆ ರೈತ ಸಂಘದ ಮುಖಂಡ ಕೆ.ನಾರಾಯಣಗೌಡ ಮಾತನಾಡಿ, ಬೆಲೆ ಕುಸಿದಾಗ ಅಥವಾ ದೂರದ ರಾಜ್ಯಗಳಿಗೆ ಟೊಮೆಟೊ ರಪ್ತು ಮಾಡಲು ತಾಲೂಕಿನಲ್ಲಿ ಶೀತಲ ಸಂಗ್ರಹ ಕೇಂದ್ರ ಪ್ರಾರಂಭಿಸಿದರೆ ಸ್ವಲ್ಪ ಮಟ್ಟಿಗಾದರೂ ರ್ಯೆತರಿಗೆ ಅನುಕೂಲವಾಗುತ್ತದೆ. ಆದ್ದರಿಂದ ಅದಷ್ಟುಬೇಗ ತಾಲೂಕಿನಲ್ಲಿ ಶೀಥಲ ಕೇಂದ್ರ ಪ್ರಾರಂಭಿಸಲು ಒತ್ತಾಯಿಸಿದ್ದಾರೆ. ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರಿಗೆ ಸರ್ಕಾರ ಕನಿಷ್ಟ ಬೆಂಬಲ ಬೆಲೆ ಘೋಷಿಸಿದರೆ ಬೆಲೆ ಕುಸಿತದಿಂದ ಕಂಗಾಲಾದ ರೈತರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಟೊಮೆಟೊ ಬೆಳೆಗಾರ ಯಲವಹಳ್ಳಿ ಪ್ರಭಾಕರ್‌.

click me!