ಕೊಪ್ಪಳ ವಿಮಾನ ನಿಲ್ದಾಣ ಭೂಸ್ವಾಧೀನಕ್ಕೆ ರೈತರ ವಿರೋಧ

By Kannadaprabha NewsFirst Published Jun 4, 2022, 8:32 AM IST
Highlights

*  ವದಗನಾಳ ರೈತರಿಂದ ಸಾಂಕೇತಿಕ ಪ್ರತಿಭಟನೆ
*  ಭೂಮಿ ಫಲವತ್ತಾಗಿದೆ ಮತ್ತು ರೈತರ ಬದುಕಿಗೆ ಆಸರೆಯಾಗಿದೆ
*  ವಿಮಾನ ನಿಲ್ದಾಣ ಕುಕನಪಳ್ಳಿ, ಡನಕನಕಲ್‌ ಬಳಿ ನಿರ್ಮಾಣವಾಗಲಿ

ಕೊಪ್ಪಳ(ಜೂ.04): ನಮ್ಮೂರು ಸೀಮಾ ವ್ಯಾಪ್ತಿಯಲ್ಲಿ ಫಲವತ್ತಾದ ಭೂಮಿ ಇದ್ದು, ರೈತರ ಬದುಕಿಗೆ ಆಸರೆಯಾಗಿದೆ. ಆದ್ದರಿಂದ ಈ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡದಂತೆ ವದಗನಹಾಳ, ಹಲಿಗೇರಿ, ಲಕಮಾಪುರ ರೈತರು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ, ನಂತರ ಮನವಿಯನ್ನು ಸಲ್ಲಿಸಿದರು.

ನಮ್ಮ ಗ್ರಾಮಗಳ ವ್ಯಾಪ್ತಿಯಲ್ಲಿ ಭೂಮಿ ಫಲವತ್ತಾಗಿದೆ ಮತ್ತು ರೈತರ ಬದುಕಿಗೆ ಆಸರೆಯಾಗಿದೆ. ಇದಕ್ಕಿಂತ ಮಿಗಿಲಾಗಿ ಈ ಪ್ರದೇಶದಲ್ಲಿ ನವಿಲು, ಜಿಂಕೆ ಸೇರಿದಂತೆ ಅಪಾರ ಪ್ರಮಾಣದ ಪ್ರಾಣಿ ಸಂಪತ್ತು ಇದ್ದು, ಇವುಗಳಿಗೂ ತೊಂದರೆಯಾಗುತ್ತದೆ. ಆದ್ದರಿಂದ ಸರ್ಕಾರ ಬೇರೆಡೆ ವಿಮಾನ ನಿಲ್ದಾಣವನ್ನು ಸ್ಥಾಪಿಸುವಂತೆ ಆಗ್ರಹಿಸಿದ್ದಾರೆ.

ಗ್ರಾಪಂ ಸದಸ್ಯ ತಿಮ್ಮನಗೌಡ ಆರ್‌.ಜಿ. ಮುಕ್ಕನಗೌಡ ಪೊಲೀಸಪಾಟೀಲ್‌, ಸಿದ್ದಪ್ಪ ಗುಡಿಹಿಂದ್ಲ, ಡಿ.ಎಚ್‌. ಪೂಜಾರ, ಹುಚ್ಚಪ್ಪ ನಿಂಗಪ್ಪ ಶ್ಯಾನಭೋಗ, ಗದಿಗೆಪ್ಪ ಬಿಸರಳ್ಳಿ, ಬಾಳನಗೌಡ ಪೊಲೀಸಪಾಟೀಲ್‌, ಸಕ್ರಗೌಡ ಮಾಲಿಪಾಟೀಲ್‌ ಮೊದಲಾದವರು ಇದ್ದರು.

ಕೊಪ್ಪಳ ವಿಮಾನ ನಿಲ್ದಾಣ: ಅಭಿವೃದ್ಧಿಗೆ ಏರ್‌ಪೋರ್ಟ್ ಪೂರಕ

ವಿಮಾನ ನಿಲ್ದಾಣ ಕುಕನಪಳ್ಳಿ, ಡನಕನಕಲ್‌ ಬಳಿ ನಿರ್ಮಾಣವಾಗಲಿ

ಗಂಗಾವತಿ: ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಯೋಜನೆಯನ್ನು ರೂಪಿಸಿರುವ ಸರ್ಕಾರ ಜಿಲ್ಲೆಯ ಕುಕನಪಳ್ಳಿ ಅಥವಾ ಡನಕನಕಲ್‌ ಬಳಿ ನಿರ್ಮಾಣವಾಗಬೇಕು. ಬೇರೆಡೆ ನಿರ್ಮಾಣವಾದರೆ ಹೋರಾಟ ಅನಿವಾರ್ಯ ಎಂದು ವಿಧಾನಪರಿಷತ್‌ ಮಾಜಿ ಸದಸ್ಯ ಎಚ್‌.ಆರ್‌. ಶ್ರೀನಾಥ ಎಚ್ಚರಿಸಿದ್ದಾರೆ.

ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿ, ಈಗಾಗಲೇ ಸರ್ಕಾರ ವಿಮಾನ ನಿಲ್ದಾಣ ಸ್ಥಾಪನೆ ಬಗ್ಗೆ ಪ್ರಕ್ರಿಯೆ ನಡೆಸಿದೆ. ಆದರೆ ಜಿಲ್ಲೆಯ ಸಚಿವರು ಯಲಬುರ್ಗಾ ತಾಲೂಕಿನ ತಳಕಲ್‌ ಅಥವಾ ಕುಕನೂರು ಬಳಿ ಸ್ಥಾಪನೆಗೆ ಮುಂದಾಗಿದ್ದಾರೆಂಬ ಮಾಹಿತಿ ಬಂದಿದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲಕ್ಕಿಂತ ಅನಾನುಕೂಲತೆ ಹೆಚ್ಚಾಗುತ್ತದೆ ಎಂದು ತಿಳಿಸಿದ್ದಾರೆ.

ಕುಕನಪಳ್ಳಿ ಅಥಾವ ಡನಕನಕಲ್‌ ಬಳಿ ಸ್ಥಾಪನೆ ಮಾಡಿದರೆ ಕುಷ್ಟಗಿ, ಗಂಗಾವತಿ, ಕನಕಗಿರಿ ಕೊಪ್ಪಳಕ್ಕೂ 25 ಕಿಮೀ ಅಂತರವಾಗುತ್ತದೆ. ಅಲ್ಲದೆ ಐತಿಹಾಸಿಕ ಸ್ಥಳಗಳು ಸಹ ಸಮೀಪವಾಗುತವೆ ಎಂದರು.
 

click me!