ರಾಯಚೂರು: ಬೆಲೆ ಕುಸಿತ, ಹೆದ್ದಾರಿಯಲ್ಲಿ ಹತ್ತಿ ಸುರಿದು ಪ್ರತಿಭಟನೆ

By Kannadaprabha NewsFirst Published Jan 31, 2023, 10:30 PM IST
Highlights

ಹತ್ತಿ ಬೆಲೆ ಕುರಿತು ಜಿಲ್ಲಾಧಿಕಾರಿಗಳು ಸಭೆ ನಡೆಸಿ 16 ದಿನಗಳ ಕಳೆದರೂ ಹತ್ತಿ ಬೆಲೆ ಮಾತ್ರ ಏರಿಕೆಯಾಗಿಲ್ಲ. ಹತ್ತಿಗೆ ಬೆಲೆ ಏರಿಕೆ ಕುರಿತು ನಡೆಸಿದ ಸಭೆಯಿಂದ ಯಾವುದೇ ಪ್ರಯೋಜನವಾಗಿಲ್ಲ. ವ್ಯಾಪಾರಸ್ಥರು ಗುಣಮಟ್ಟದ ಹತ್ತಿ ಪ್ರತಿ ಕ್ವಿಂಟಲ್‌ಗೆ ರು.9,500ನಂತೆ ರೈತರಿಂದ ಖರೀದಿಸಬೇಕು. 

ರಾಯಚೂರು(ಜ.31):  ಹತ್ತಿ ಬೆಲೆ ಕುಸಿತ ನಿಯಂತ್ರಣ, ಖರೀದಿ ಕೇಂದ್ರ, ಹತ್ತಿ ಮಿಲ್‌ಗಳಲ್ಲಿ ರೈತರಿಗೆ ಷರತ್ತುಗಳನ್ನು ವಿಧಿಸದೇ ಹತ್ತಿ ಖರೀದಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಂಚಾರ ತಡೆ ನಡೆಸಿ ಪ್ರತಿಭಟಿಸುತ್ತಿದ್ದವರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ ಘಟನೆ ಸೋಮವಾರ ನಡೆಯಿತು.

ಸ್ಥಳೀಯ ಸಾಥ್‌ಮೈಲ್‌ ಕ್ರಾಸ್‌ನಲ್ಲಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ(ಎಐಕೆಕೆಎಂಎಸ್‌)ಜಿಲ್ಲಾ ಸಮಿತಿ ನೇತೃತ್ವದಲ್ಲಿ ರಾಜ್ಯ ಹೆದ್ದಾರಿಯಲ್ಲಿ ಹತ್ತಿ ಬೆಳೆಯನ್ನು ಸುರಿದು ರಸ್ತೆ ಮೇಲೆ ಕುಳಿತುಕೊಂಡು ಪ್ರತಿಭಟನೆ ನಡೆಸಲಾಯಿತು. ಇದರಿಂದಾಗಿ ಸುಮಾರು ಒಂದೂವರೆ ತಾಸು ವಾಹನ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತು. ಪ್ರಯಾಣಿಕರು, ಸಾರ್ವಜನಿಕರು ತೀವ್ರ ಸಮಸ್ಯೆಯನ್ನು ಅನುಭವಿಸುವ ಪರಿಸ್ಥಿತಿ ಉಂಟಾಯಿತು.

ರಾಯಚೂರಿನಿಂದ ಸಿದ್ದರಾಮಯ್ಯ ಸ್ಪರ್ಧಿಸಿದರೆ 2 ಎಕರೆ ಹೊಲ ಗಿಫ್ಟ್‌: ಗ್ರಾ.ಪಂ. ಸದಸ್ಯನ ಆಹ್ವಾನ

ಪ್ರತಿಭಟನಾ ಸ್ಥಳಕ್ಕೆ ಎಪಿಎಂಸಿ ಕಾರ್ಯದರ್ಶಿ ಆದಪ್ಪಗೌಡ ಹಾಗೂ ತಹಸೀಲ್ದಾರ್‌ ರಾಜಶೇಖರ ಆಗಮಿಸಿ ಪ್ರತಿಭಟನಾನಿರತರಿಂದ ಮನವಿ ಸ್ವೀಕರಿಸಿದರು. ಹತ್ತಿ ಬೆಲೆ ಕುಸಿತಕ್ಕೆ ಸಂಬಂಧಿಸಿದಂತೆ ಡಿಸಿ ಸಭೆಯನ್ನು ನಡೆಸಿ ಅಗತ್ಯ ಸೂಚನೆಗಳನ್ನು ಜಾರಿಗೊಳಿಸುವುದಾಗಿ ಹೇಳಿದ್ದರು. ಆದರೆ, ಇದುವರೆಗೂ ಅವುಗಳು ಜಾರಿಗೊಳಿಸಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಯವರೆ ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕು ಎಂದು ಪಟ್ಟು ಹಿಡಿದರು. ಈ ವೇಳೆ ಪೊಲೀಸರು ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದು ವಾಹನದಲ್ಲಿ ಕರೆದುಕೊಂಡು ಹೋಗಿ ಬಿಡುಗಡೆ ಮಾಡಿದರು.

ಹತ್ತಿ ಬೆಲೆ ಕುರಿತು ಜಿಲ್ಲಾಧಿಕಾರಿಗಳು ಸಭೆ ನಡೆಸಿ 16 ದಿನಗಳ ಕಳೆದರೂ ಹತ್ತಿ ಬೆಲೆ ಮಾತ್ರ ಏರಿಕೆಯಾಗಿಲ್ಲ. ಹತ್ತಿಗೆ ಬೆಲೆ ಏರಿಕೆ ಕುರಿತು ನಡೆಸಿದ ಸಭೆಯಿಂದ ಯಾವುದೇ ಪ್ರಯೋಜನವಾಗಿಲ್ಲ. ವ್ಯಾಪಾರಸ್ಥರು ಗುಣಮಟ್ಟದ ಹತ್ತಿ ಪ್ರತಿ ಕ್ವಿಂಟಲ್‌ಗೆ ರು.9,500ನಂತೆ ರೈತರಿಂದ ಖರೀದಿಸಬೇಕು. ಅನಗತ್ಯ ಸೂಟ್‌ ತೆಗೆಯಬಾರದು, ಎಪಿಎಂಸಿಯಲ್ಲಿ ಬೆಲೆ ನಿಗದಿ ಆದ ಮೇಲೆ ಮಿಲ್‌ಗಳಲ್ಲಿ ಹತ್ತಿ ಬೆಲೆ ದರ ಕಡಿಮೆ ಮಾಡಬಾರದು ಎಂದು ಆಕ್ಷೇಪಿಸಿದರು. ಗಂಡು ಬೀಜ, ಹೆಣ್ಣು ಬೀಜಗಳನ್ನು ಬೇರೆ ಬೇರೆ ಹಣ್ಣ ಮಾಡಲು ಅಧಿಕಾರಿಗಳಿಗೆ ಶಿಫಾರಸ್ಸು ಮಾಡಬೇಕು, ಈ ವರ್ಷ ಇಳುವರಿ ಕಡಿಮೆಯಾಗಿರುವ ಬಗ್ಗೆ ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಕಾವಲುಗಾರನಾಗಿ ಸೇವೆ: ಎಚ್‌.ಡಿ.ಕುಮಾರಸ್ವಾಮಿ

ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಅಧಿಕಾರಿಗಳು ಬೆಲೆ ಏರಿಕೆ ಮಾಡುವುದು ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಆದರೆ, ಮೊದಲನೆ ಬಾರಿ ಬೆಲೆ ನಿಗದಿ ಪಡಿಸಿದ ಮೇಲೆ ಮಿಲ್‌ಗಳಲ್ಲಿ 300 ರಿಂದ 400 ಕಡಿತ ಮಾಡುವುದನ್ನು ತಡಿಯುತ್ತೇವೆ. ಹತ್ತಿ ಬೆಂಬಲ ಬೆಲೆಯನ್ನು ಹೆಚ್ಚಿಸಲು ನಮ್ಮ ಇಲಾಖೆಯಿಂದ ಪತ್ರ ಬರೆಯುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಘಟನೆ ಮುಖಂಡರಾದ ವಿ.ನಾಗಮ್ಮಳ್‌, ಮಲ್ಲನಗೌಡ ಅಂಚೆಸುಗುರು, ಎಸ್‌.ಎಸ್‌ ವೀರೇಶ್‌, ಮಹೇಶ್‌ ಸಿ, ಕಾರ್ತಿಕ್‌ ಸಿಂಧೆ, ತಾಯಪ್ಪ ಹೊಸೂರು, ಶೇಖರಪ್ಪ ಹೊಸೂರು, ಮನೋಹರೆಡ್ಡಿ ದಿನ್ನಿ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರು ಇದ್ದರು.

click me!