
ಬೆಂಗಳೂರು(ಜೂ.25): ಹೃದಯಾಘಾತದಿಂದಾಗಿ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ‘5 ರುಪಾಯಿ ವೈದ್ಯ’ರೆಂದು ಖ್ಯಾತಿ ಹೊಂದಿರುವ ಮಂಡ್ಯದ ಡಾ. ಶಂಕರೇಗೌಡ ಸಂಪೂರ್ಣ ಚೇತರಿಸಿಕೊಂಡು ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಯಾದರು.
ಈ ವೇಳೆ ಮಾತನಾಡಿದ ಡಾ. ಶಂಕರೇಗೌಡ, ಒಂದು ತಿಂಗಳ ಹಿಂದೆ ಹೃದಯದಲ್ಲಿ ರಕ್ತದ ನಾಳಗಳು ಬ್ಲಾಕ್ ಆಗಿದ್ದ ಕಾರಣ ಹೃದಯಾಘಾತ ಸಂಭವಿಸಿತ್ತು. ಕೂಡಲೇ ಮೈಸೂರಿನಲ್ಲಿರುವ ಆಸ್ಪತ್ರೆಗೆ ದಾಖಲಾದೆ. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ವರ್ಗಾವಣೆ ಮಾಡಿದರು. ಇಲ್ಲಿನ ಚಿಕಿತ್ಸಾ ವಿಧಾನದಿಂದ ನನ್ನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಡಾ. ವಿವೇಕ್ ಜವಳಿ ಅವರ ತಂಡ ವಿಶೇಷ ಕಾಳಜಿ ವಹಿಸಿ ನನಗೆ ಚಿಕಿತ್ಸೆ ನೀಡಿದೆ. ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಆರೈಕೆ ಮಾಡಿದ ವೈದ್ಯ ಸಿಬ್ಬಂದಿ, ಚೇತರಿಕೆಗೆ ಹಾರೈಸಿದ ಜನರಿಗೆ ಧನ್ಯವಾದಗಳು ಎಂದರು.
ಮಂಡ್ಯದ ಖ್ಯಾತ ಐದು ರೂಪಾಯಿ ಡಾಕ್ಟರ್ ಶಂಕರೇಗೌಡರಿಗೆ ಹೃದಯಾಘಾತ
ಕಳೆದ 42 ವರ್ಷದಿಂದ ಮಂಡ್ಯದಲ್ಲಿ ಅತ್ಯಂತ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುತ್ತಾ ಬಂದಿದ್ದು, ನನಗೆ ಆತ್ಮತೃಪ್ತಿ ನೀಡಿದೆ. ಸದ್ಯ ನಾನು ಸಂಪೂರ್ಣವಾಗಿ ಗುಣವಾಗಿದ್ದು, ಮುಂದೆಯೂ ಈ ವೃತ್ತಿ ಮುಂದುವರೆಸಿಕೊಂಡು ಹೋಗಲಿದ್ದೇನೆ. ವೈದ್ಯರ ಸಲಹೆ ಮೇರೆಗೆ 6 ವಾರಗಳು ವಿಶ್ರಾಂತಿ ಪಡೆದು ಬಳಿಕ, ಹಿಂದಿನಂತೆ 5 ರುಪಾಯಿ ಚಿಕಿತ್ಸೆ ಮುಂದುವರೆಸುವೆ ಎಂದು ತಿಳಿಸಿದರು. ಈ ವೇಳೆ ಚಿಕಿತ್ಸೆ ನೀಡಿದ ಆಸ್ಪತ್ರೆಯ ಹೃದಯ ತಜ್ಞ ಡಾ. ವಿವೇಕ್ ಜವಳಿ ಉಪಸ್ಥಿತರಿದ್ದರು.