ಎಂಟಿಬಿ ಮಿನಿಸ್ಟರ್ ಪೋಸ್ಟ್ : ಅಲ್ಲಿಂದಲೂ ಬಂತು ಸ್ಟ್ರಾಂಗ್ ಬುಲಾವ್

By Kannadaprabha NewsFirst Published Nov 30, 2020, 2:50 PM IST
Highlights

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಲು ಪ್ರಮುಖ ಪಾತ್ರ ವಹಿಸಿರುವವರಲ್ಲಿ ಒಬ್ಬರಾದ ಎಂಟಿಬಿ ನಾಗರಾಜ್ ಅವರಿಗೆ ಸಚಿವ ಸ್ಥಾನಕ್ಕಾಗಿ ಸ್ಟ್ರಾಂಗ್ ಬುಲಾವ್ ಬಂದಿದೆ. 

ಹೊಸಕೋಟೆ (ನ.30):  ರಾಜ್ಯದ ಅಭಿವೃದ್ಧಿ ದೃಷ್ಠಿಯಿಂದ ಕಾಂಗ್ರೆಸ್‌ನಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಬಿಜೆಪಿಗೆ ಅಧಿಕಾರಕ್ಕೆ ಬರಲು ತ್ಯಾಗ ಮಾಡಿದ ಎಂಟಿಬಿ ನಾಗರಾಜ್‌ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಈಶ್ವರಾನಂದಪುರಿ ಸ್ವಾಮೀಜಿ ಒತ್ತಾಯಿಸಿದರು.

ಬಾಗಲಕೋಟೆಯಲ್ಲಿ ನಡೆದ ಕರ್ನಾಟಕ ಕುರುಬರ ಎಸ್‌ಟಿ ಹೋರಾಟ ಸಮಿತಿ, ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠ, ಕರ್ನಾಟಕ ಕುರುಬರ ಸಂಘದ ಸಂಯುಕ್ತಾಶ್ರಯದಲ್ಲಿ ಎಸ್‌ಟಿ ಮೀಸಲಾತಿಗಾಗಿ ನಡೆದ ಸಮಾವೇಶದಲ್ಲಿ ಒತ್ತಾಯಿಸಿದ್ದಾರೆ.

ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳು ಉತ್ತಮ, ಜನಪರ ಆಡಳಿತ ನೀಡುತ್ತಿದೆ. ಆದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಆಗುವಲ್ಲಿ ಕುರುಬರ ಸಮುದಾಯದ ಶಾಸಕರ ತ್ಯಾಗ ಹೆಚ್ಚಿದೆ. ಪ್ರಮುಖವಾಗಿ ಎಂಟಿಬಿ ನಾಗರಾಜ್‌ ಅವರು ತಮ್ಮ ಮಂತ್ರಿ ಸ್ಥಾನವನ್ನೆ ತ್ಯಾಗ ಮಾಡಿ ಬಂದಿರುವುದು ಮರೆಯುವಂತಿಲ್ಲ. ಆದ್ದರಿಂದ ವಿಳಂಬ ನೀತಿ ಅನುಸರಿಸದೆ ಕೇಂದ್ರದ ಹೈಕಮಾಂಡ್‌ ಹಾಗೂ ಬಿ.ಎಸ್‌. ಯಡಿಯೂರಪ್ಪ ಅವರು ಮಂತ್ರಿ ಸ್ಥಾನ ನೀಡುವ ಸಮುದಾಯವನ್ನು ಗೌರವಿಸುವ ಕೆಲಸ ಮಾಡಬೇಕು ಎಂದರು.

ಚಾಲೇಂಜ್ ಹಾಕಿದ ಸಾಹುಕಾರ್ : ನನ್ನ ರಾಜೀನಾಮೆ ಖಚಿತ ಎಂದ ರಮೇಶ್ ಜಾರಕಿಹೊಳಿ ...

ಸಮುದಾಯದಿಂದ ಅಹವಾಲು:

ಬೆಟ್ಟಗುಡ್ಡ ಕಾಡು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ವಾಸ್ತವ್ಯ ಹೂಡಿರುವ ನಮಗೆ ಆರ್ಥಿಕ ನೆರವು ನೀಡಬೇಕು. ಅರಣ್ಯದಲ್ಲಿ ಕುರಿ ಮೇಯಿಸಲು ಅನುಮತಿ ನೀಡಬೇಕು. ಕುರಿಗಳ್ಳರ ಹಾವಳಿಯಿಂದ ರಕ್ಷಣೆ ಸಿಗಬೇಕು. ಕುರಿ ಸತ್ತರೆ ಮೊದಲು 5 ಸಾವಿರ ಪರಿಹಾರ ನೀಡುತ್ತಿದ್ದರು. ಆದರೆ ಈಗ ಸರ್ಕಾರ ಅದನ್ನು ನಿಲ್ಲಿಸಿದೆ. ಅದನ್ನು ಮುಂದುವರೆಸಬೇಕು. ಕುರಿಕ್ಯಾಂಪ್‌ಗಳಲ್ಲಿ ಸ್ಥಳೀಯ ವೈದ್ಯರಿಂದ ಔಷದೋಪಾಚಾರ ವ್ಯವಸ್ಥೆ ಕಲ್ಪಿಸಬೇಕು. ಎಂಬಿತ್ಯಾದಿ ಮನವಿಯನ್ನು ಎಂಎಲ್ಸಿ ಎಂಟಿಬಿ ನಾಗರಾಜ್‌ಗೆ ಸಮುದಾಯದ ಮುಖಂಡರು ಸಲ್ಲಿಸಿದರು. ಮನವಿ ಸ್ವೀಕರಿಸಿ ಸರ್ಕಾರದ ಗಮನಕ್ಕೆ ಸವಲತ್ತು ಒದಗಿಸುವ ಭರವಸೆ ನೀಡಿದರು.

ಸಚಿವ ಈಶ್ವರಪ್ಪ, ಸಮುದಾಯದ ಮುಖಂಡರಾದ ರೇವಣ್ಣ, ವಿರುಪಾಕ್ಷಪ್ಪ, ಅನಂತರಾಮಯ್ಯ, ಪುಟ್ಟಸ್ವಾಮಿ ಇದ್ದರು.

ಕುರುಬ ಸಮಾಜದ ನಿಗಮ ಸ್ಥಾಪಿಸಿ

ಸರ್ಕಾರ ಎಲ್ಲ ವರ್ಗದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವುದು ಪ್ರಶಂಸನೀಯ. ಹಾಗೆಯೇ ರಾಜ್ಯದಲ್ಲಿ 60 ಲಕ್ಷಕ್ಕೂ ಹೆಚ್ಚಾಗಿರುವ ಕುರುಬ ಸಮುದಾಯದ ಅಭಿವೃದ್ಧಿಗೆ ಕುರುಬರ ಸಮುದಾಯದ ಅಭಿವೃದ್ಧಿಗೆ ನಿಗಮ ಸ್ಥಾಪನೆಗೆ ಇಚ್ಛಾಶಕ್ತಿ ತೋರಬೇಕು. ಇತರೆಲ್ಲಾ ಸಮುದಾಯಕ್ಕೆ ಸವಲತ್ತುಗಳು ಲಭ್ಯವಾಗುತ್ತಿದೆ. ಅಂತೆಯೇ ಸರ್ಕಾರ ಕೂಡಲೇ ಕುರುಬ ಸಮುದಾಯವನ್ನು ಎಸ್‌ಟಿ ಮೀಸಲಾತಿಗೆ ಸೇರ್ಪಡೆ ಮಾಡಬೇಕು ಎಂದು ಎಂಎಲ್ಸಿ ಎಂಟಿಬಿ ನಾಗರಾಜ್‌ ಸರ್ಕಾರವನ್ನು ಒತ್ತಾಯಿಸಿದರು.

click me!