ನಾಡಿಗೆ ಹೊಂದಿಕೊಳ್ಳುತ್ತಿರುವ ಈಶ್ವರ ಆನೆ ಸೇಫ್‌?

By Kannadaprabha NewsFirst Published Sep 20, 2019, 10:52 AM IST
Highlights

ದುಬಾರೆ ಆನೆ ಶಿಬಿರದಿಂದ ನಾಡಿಗೆ ಬಂದಿದ್ದ ಆನೆ ಈಶ್ವರ ಆರಂಭದಲ್ಲಿ ಹೆಚ್ಚು ಪುಂಡಾಟ ನಡೆಸಿದ್ದು, ಇತ್ತೀಚಿನ ದಿನಗಳಲ್ಲಿ ಸಂಪೂರ್ಣ ಹೊಂದಿಕೊಂಡಿದೆ. 

ಮೈಸೂರು [ಸೆ.20]:  ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಆಗಮಿಸಿರುವ 49 ವರ್ಷದ ಈಶ್ವರ ಆನೆಯು ಸದ್ಯ ನಾಡಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದೆ.

ಪ್ರತಿ ದಿನ ಬೆಳಗ್ಗೆ-ಸಂಜೆ ನಡಿಗೆ ತಾಲೀಮು ವೇಳೆ ಈಶ್ವರ ಆನೆಯು ಗಾಬರಿಗೊಂಡಿದ್ದು, ಮಾವುತರು ಮತ್ತು ಕಾವಾಡಿಗಳು ನಿಯಂತ್ರಿಸಿದ್ದರು. ಇದನ್ನು ಗಮನಿಸಿದ ಸಾರ್ವಜನಿಕರು ದೂರಿದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಆತಂಕ ವ್ಯಕ್ತಪಡಿಸಿ ವಾಪಸ್‌ ಕಾಡಿಗೆ ಕಳುಹಿಸಲು ತಿಳಿಸಿದ್ದರು. ಅದರಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸಹ ವಾಪಸ್‌ ಕಳುಹಿಸುವುದಾಗಿ ಹೇಳಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ, ಪ್ರತಿ ದಿನ ತಾಲೀಮಿನಲ್ಲಿ ಈಶ್ವರ ಆನೆಯು ಭಾಗವಹಿಸುತ್ತಿದ್ದು, ಮೊದಲಿಗಿಂತ ಈಗ ಧೈರ್ಯವಾಗಿ ನಡಿಗೆ ತಾಲೀಮಿನಲ್ಲಿ ಭಾಗವಹಿಸುತ್ತಿದೆ. ಕುಶಾಲು ತೋಪು ಸಿಡಿಸುವ ತಾಲೀಮಿನಲ್ಲಿ ಜಗ್ಗದ ನಿಲ್ಲುವ ಮೂಲಕ ಭರವಸೆ ಮೂಡಿಸಿರುವ ಈಶ್ವರ ಆನೆಗೆ ಮೇಲೆ ಒಂದು ದಿನ ಮರಳು ಮೂಟೆ ಹೊರಸಿ ತಾಲೀಮು ಸಹ ನಡೆಸಲಾಗಿದೆ. ಈಶ್ವರ ಆನೆಯ ವರ್ತನೆ ಬದಲಾಗಿರುವ ಹಿನ್ನೆಲೆಯಲ್ಲಿ ಕಾಡಿಗೆ ಕಳುಹಿಸುವ ನಿರ್ಧಾರವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮುಂದೂಡಿದ್ದಾರೆ.

click me!