ಕಲ್ಪತರು ನಾಡಲ್ಲಿ ರಂಗೇರಿದ ಮತ ಪ್ರಚಾರ

Published : Apr 17, 2023, 08:33 AM IST
 ಕಲ್ಪತರು ನಾಡಲ್ಲಿ ರಂಗೇರಿದ ಮತ ಪ್ರಚಾರ

ಸಾರಾಂಶ

ಚುನಾವಣೆಗೆ ಕೇವಲ 24 ದಿವಸಗಳು ಬಾಕಿಯಿರುವಾಗಲೇ ಸುಡು ಬಿಸಿಲಲ್ಲಿ ಅಭ್ಯರ್ಥಿಗಳು ಪ್ರಚಾರಕ್ಕೆ ಹೊರಟಿದ್ದಾರೆ.

ಉಗಮ ಶ್ರೀನಿವಾಸ್‌

  ತುಮಕೂರು :  ಚುನಾವಣೆಗೆ ಕೇವಲ 24 ದಿವಸಗಳು ಬಾಕಿಯಿರುವಾಗಲೇ ಸುಡು ಬಿಸಿಲಲ್ಲಿ ಅಭ್ಯರ್ಥಿಗಳು ಪ್ರಚಾರಕ್ಕೆ ಹೊರಟಿದ್ದಾರೆ.

ಈಗಾಗಲೇ 3 ಪ್ರಮುಖ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದು, ಬಹುತೇಕರಿಗೆ ಬಿ ಫಾರಂ ನೀಡಿದೆ. ಆಮ್‌ ಆದ್ಮಿ ಪಕ್ಷ ಕೂಡ ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಜಿಲ್ಲೆಯಲ್ಲಿ ಸ್ಟಾರ್‌ ನಾಯಕರೂ ಕೂಡ ಕಣದಲ್ಲಿದ್ದಾರೆ. ಮಾಜಿ ಡಿಸಿಎಂ ಹಾಗೂ ಮಾಜಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌, ಮಾಜಿ ಸಚಿವ ಟಿ.ಬಿ. ಜಯಚಂದ್ರ, ಮಾಜಿ ಶಾಸಕ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌. ರಾಜಣ್ಣ ಕಣದಲ್ಲಿದ್ದಾರೆ.

ಸತತವಾಗಿ 4 ಬಾರಿ ವಿಧಾನಸಭೆಗೆ ಪ್ರವೇಶಿಸಿರುವ ಗುಬ್ಬಿ ಕಾಂಗ್ರೆಸ್‌ ಅಭ್ಯರ್ಥಿ ಜೆಡಿಎಸ್‌ನಿಂದ ಬಂದಿದ್ದು, ಅಭ್ಯರ್ಥಿಯಾಗಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಈ ಬಾರಿ ಪಕ್ಷಾಂತರ ಪರ್ವ ಕೂಡ ದೊಡ್ಡ ಮಟ್ಟದಲ್ಲಾಗಿದೆ. ಜೆಡಿಎಸ್‌ನಿಂದ ಬೆಮೆಲ್‌ ಕಾಂತರಾಜು, ಎಸ್‌.ಆರ್‌. ಶ್ರೀನಿವಾಸ್‌ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದಿದ್ದು, ಇಬ್ಬರೂ ಅಭ್ಯರ್ಥಿಗಳಾಗಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಸಂಸದ ಎಸ್‌.ಪಿ. ಮುದ್ದಹನುಮೇಗೌಡ ಬಿಜೆಪಿ ಬಂದಿದ್ದು, ಗುಬ್ಬಿಯಿಂದ ಬಿಜೆಪಿಯ ಬೆಟ್ಟಸ್ವಾಮಿ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ. ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಸೊಗಡು ಶಿವಣ್ಣ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಬಿಜೆಪಿಗೆ ಗುಡ್‌ ಬೈ ಹೇಳಿದ್ದಾರೆ.

3 ಪ್ರಮುಖ ರಾಜಕೀಯ ಪಕ್ಷಗಳಲ್ಲೂ ಬಂಡಾಯವಿದ್ದು, ಬಂಡಾಯದ ಮಧ್ಯೆಯೇ ಚುನಾವಣೆ ರಂಗು ಪಡೆದುಕೊಳ್ಳುತ್ತಿದೆ. ಜಿಲ್ಲೆಯಲ್ಲಿ 25 ಲಕ್ಷಕ್ಕೂ ಮತದಾರರಿದ್ದು, ಪುರುಷರಿಗಿಂತ ಅತಿ ಹೆಚ್ಚು ಮಹಿಳಾ ಮತದಾರರಿದ್ದು, ಯಾವೊಂದು ಪಕ್ಷವೂ ಮಹಿಳೆಗೆ ಟಿಕೆಟ್‌ ನೀಡಿಲ್ಲ. ಶೇ. 33ರಷ್ಟುಮಹಿಳಾ ಮೀಸಲಾತಿ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದ್ದರೂ, ಮಹಿಳೆರಿಗೆ ಟಿಕೆಟ್‌ ನೀಡದಿರುವ ಬಗ್ಗೆ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸಚಿವರಿಬ್ಬರು ಅಖಾಡದಲ್ಲಿ:

4 ಬಾರಿ ಆಯ್ಕೆಯಾಗಿರುವ ಸಚಿವ ಮಾಧುಸ್ವಾಮಿ, ಎರಡು ಬಾರಿ ಆಯ್ಕೆಯಾಗಿ, ಈಗ ಸಚಿವರಾಗಿರುವ ಬಿ.ಸಿ.ನಾಗೇಶ್‌ ಅವರ ಭವಿಷ್ಯ ಕೂಡ ಏನಾಗಲಿದೆ ಎಂಬುದು ಕಾದುನೋಡಬೇಕಾಗಿದೆ.

ತಣ್ಣಗಾದ ಬಂಡಾಯ:

ಟಿಕೆಟ್‌ ಸಿಗದಿದ್ದುದಕ್ಕೆ ತುಮಕೂರಿನಿಂದ ಸೊಗಡು ಶಿವಣ್ಣ, ಷಫಿ ಅಹಮದ್‌, ರಫೀಕ್‌ ಅಹಮದ್‌, ಮುದ್ದಹನುಮೇಗೌಡ ಸೇರಿದಂತೆ ಹಲವಾರು ಮಂದಿ ಬಂಡಾಯದ ಬಾವುಟ ಹಾರಿಸಿದ್ದಾರೆ. ಆದರೆ ದಿನಗಳೆದಂತೆ ಬಂಡಾಯದ ಕಾವು ಕಡಿಮೆಯಾಗಿದ್ದು, ಅಭ್ಯರ್ಥಿಗಳು ಮತ ಬೇಟೆಯಲ್ಲಿ ತೊಡಗಿದ್ದಾರೆ.

ಈಗಾಗಲೇ ಮೋದಿಯವರು ತುಮಕೂರು ಜಿಲ್ಲೆಗೆ ಬಂದು ಹೋಗಿದ್ದಾರೆ. ಮತ್ತೊಂದು ಸಲ ಅವರನ್ನು ಕರೆಸುವ ಸಿದ್ಧತೆಯಲ್ಲಿ ಬಿಜೆಪಿ ತೊಡಗಿದೆ. ಇನ್ನು ಜೆಡಿಎಸ್‌ನಿಂದ ಮಾಜಿ ಪ್ರಧಾನಿ ದೇವೇಗೌಡ, ಕುಮಾರಸ್ವಾಮಿ ಪ್ರಚಾರ ನಡೆಸಲಿದ್ದಾರೆ. ಕಾಂಗ್ರೆಸ್‌ ರಾಷ್ಟ್ರ ನಾಯಕರನ್ನು ಕರೆಸುವ ಯೋಜನೆಯಿದೆ. ಒಟ್ಟಾರೆಯಾಗಿ ಚುನಾವಣೆಗೆ ಕೇವಲ 24 ದಿನಗಳಿರುವಾಗಲೇ ಚುನಾವಣಾ ಅಖಾಡ ಜೋರಾಗಿದ್ದು, ಇಬ್ಬರು ಸಚಿವರು ಸೇರಿದಂತೆ 11 ಮಂದಿ ಹಾಲಿ ವಿಧಾನಸಭಾ ಕ್ಷೇತ್ರಗಳಲ್ಲಿ 11 ಹಾಲಿ ಶಾಸಕರ ಪೈಕಿ, ಯಾರು ಗೆಲ್ಲುತ್ತಾರೆ. ಯಾರು ಪರಾಭವಗೊಳ್ಳುತ್ತಾರೆ ಎಂಬುದಕ್ಕೆ ಮೇ 13ವರೆಗೆ ಕಾಯಬೇಕಾಗಿದೆ.

ರಾಜ್ಯ ಮಟ್ಟದಲ್ಲಿ ಗಮನ ಸೆಳೆದ ಅನರ್ಹತೆ

ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ 16,500 ನಕಲಿ ಬಾಂಡ್‌ಗಳನ್ನು ಜೆಡಿಎಸ್‌ ಶಾಸಕ ಗೌರಿಶಂಕರ್‌ ನೀಡಿದ್ದಾರೆ ಎಂದು ದೂರಿ ಮಾಜಿ ಶಾಸಕ ಸುರೇಶ್‌ಗೌಡ ಕೋರ್ಟ ಮೆಟ್ಟಿಲೇರಿದ್ದು, ನ್ಯಾಯಾಲಯ ಅವರ ಮನವಿಯನ್ನು ಪುರಸ್ಕರಿಸಿದ್ದು, ಗೌರಿಶಂಕರ್‌ ಅನರ್ಹಗೊಂಡಿದ್ದು, ಅವರೀಗ ಸುಪ್ರೀಂಕೋಟಟ್‌ ಮೊರೆ ಹೋಗಿದ್ದಾರೆ. ಈ ಪ್ರಕರಣ ರಾಜ್ಯದ ಗಮನ ಸೆಳೆದಿದ್ದು, ಅನರ್ಹತೆ, ನಕಲಿಬಾಂಡ್‌ ವಿಷಯವನ್ನು ಚುನಾವಣಾ ವಿಷಯವನ್ನಾಗಿಸಿಕೊಂಡು ಬಿಜೆಪಿ ಹೊರಟಿದೆ. ಎರಡು ಮೀಸಲು ಕ್ಷೇತ್ರ ಸೇರಿ 11 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ತುಮಕೂರು ಜಿಲ್ಲೆ, ವೈವಿಧ್ಯಮಯ ರಾಜಕಾರಣಕ್ಕೆ ಹೆಸರಾಗಿದ್ದು, 10 ಹಲವು ಕಾರಣಗಳಿಂದ ಸದಾ ಸುದ್ದಿಯಲ್ಲಿದೆ. ಕಳೆದ ಬಾರಿ 5 ಬಿಜೆಪಿ, 3 ಕಾಂಗ್ರೆಸ್‌, 3 ದಳಪತಿಗಳು ಆಯ್ಕೆಯಾಗಿದ್ದರು. ಬಿಜೆಪಿ 5 ಕ್ಷೇತ್ರಗಳನ್ನು, ಜೆಡಿಎಸ್‌, ಕಾಂಗ್ರೆಸ್‌ ಕಳೆದ ಬಾರಿಗಿಂತ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುತ್ತವೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

PREV
Read more Articles on
click me!

Recommended Stories

ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?