ಖಡಕ್ ಅಧಿಕಾರಿಯ ವಚನ ಪ್ರೇಮ; ಶರಣರ ವಚನಗಳನ್ನು ಇಂಗ್ಲಿಷ್‌ಗೆ ಅನುವಾದಿಸಿರುವ ಡಿವೈಎಸ್‌ಪಿ

By Ravi JanekalFirst Published Dec 14, 2022, 8:31 PM IST
Highlights
  • ಬಸವಣ್ಣನವರ ವಚನಗಳನ್ನು ಇಂಗ್ಲಿಷ್ ಗೆ ಅನುವಾದ ಮಾಡ್ತಿರೋ ಅಧಿಕಾರಿ!
  • ಸೋರುತಿಹುದು ಮನೆಯ ಮಾಳಿಗೆ ಆಯ್ತು ಬೆಂಗಳೂರು ವಿವಿ ಪಠ್ಯ! 
  •  ವಚನ ಸಾಹಿತ್ಯ ದಾಸ ಸಾಹಿತ್ಯ ಕನ್ನಡದಿಂದ ಇಂಗ್ಲಿಷ್‌ಗೆ  ಅನುವಾದ ಮಾಡ್ತಿರೋರು ಯಾರು ಗೊತ್ತಾ?

ಮುಷ್ತಾಕ್ ಪೀರಜಾದೆ

ಚಿಕ್ಕೋಡಿ (ಡಿ.14) : 'ಇವನಾರವ,ಇವನಾರವ,ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ..' ಬಸವಣ್ಣನವರ ಈ ವಚನ‌ ಎಷ್ಟು ಅರ್ಥಗರ್ಭಿತವಾಗಿದೆ ಅಲ್ವಾ? ಬಸವಣ್ಣನವರ ಈ ವಚನ ಕೇಳಲು ಕಿವಿಗೆ ಇಂಪು. ಜೀವನದಲ್ಲಿ ಅಳವಡಿಸಿಕೊಂಡರೆ ಬದುಕೂ ಚೆಂದ. ಬಸವಣ್ಣನವರ ವಚನಗಳನ್ನು ಯಥಾವತ್ತಾಗಿ ಇಂಗ್ಲಿಷನಲ್ಲಿ ಹೇಳಿದ್ರೆ ಹ್ಯಾಗಿರುತ್ತೆ. ಇಂಗ್ಲಿಷ್‌ಗೆ ಅನುವಾದ ಮಾಡುವ ಅನಿವಾರ್ಯತೆ ಏನಿದೆ?   ಅನುವಾದ ಮಾಡ್ತಿರೋರಾದ್ರೂ ಯಾರು ಅಂತೀರಾ ಮುಂದೆ ಓದಿ.

ಬಸವಣ್ಣನವರ ವಚನಗಳನ್ನು ಕನ್ನಡ ಬಲ್ಲವರಿಗೆ ಅರ್ಥವಾದರೆ, ಕನ್ನಡ ಬಾರದವರು, ಇಂಗ್ಲಿಷ್ ಬಲ್ಲವರಿಗೆ ವಚನ ಓದುವುದು ಅರ್ಥೈಸಿಕೊಳ್ಳುವುದು ತುಸು ಕಷ್ಟ. ಇದನ್ನರಿತಿರುವ ಅಧಿಕಾರಿ, ಬಸವಣ್ಣನವರ ವಚನಗಳನ್ನು ಇಂಗ್ಲಿಷ್‌ಗೆ ಅನುವಾದಿಸುವ ಕಾರ್ಯ ಕೈಗೆತ್ತಿಕೊಂಡು ಮುಗಿಸಿದ್ದಾರೆ. ಮೇಲೆ ಕನ್ನಡ ವಚನ; ಕೆಳಗೆ ಇಂಗ್ಲಿಷ್ ಅನುವಾದ.. ಬಸವಣ್ಣನವರ ಷಟಸ್ಥಲ ವಚನಗಳಲ್ಲಿ 952 ವಚನಗಳನ್ನು ಕನ್ನಡದಿಂದ ಇಂಗ್ಲಿಷ್ ಗೆ ಅನುವಾದ ಮಾಡಿದ್ದಾರೆ.

ಬಸವ ತತ್ವಗಳನ್ನು ಅಳವಡಿಸಿಕೊಂಡು ಬಸವ ಜಯಂತಿ ಸಂಪನ್ನಗೊಳಿಸೋಣ

ಬಸವಣ್ಣನವರ ವಚನಗಳನ್ನು ಇಂಗ್ಲಿಷ್‌ಗೆ ಅನುವಾದ ಮಾಡಿರುವ ಈ ಅಧಿಕಾರಿಯ ಹೆಸರು ಬಸವರಾಜ್ ಎಲಿಗಾರ. ಇವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪಬಿಭಾಗದ ಡಿವೈಎಸ್‌ಪಿ. ಸದ್ಯ ಬಸವರಾಜ್ ಅವರು ತಮ್ಮ ಕರ್ತವ್ಯದಿಂದಷ್ಟೇ ಅಲ್ಲದೆ ತಾವು ಮಾಡ್ತಿರೋ ಹೊಸ ಪ್ರಯತ್ನಗಳಿಂದಲೂ ಸಹ ಖ್ಯಾತಿಗಳಿಸುತ್ತಿದ್ದಾರೆ.

ಇತ್ತೀಚೆಗೆ ಸಂತ ಶಿಶುನಾಳ ಶರೀಫರ 'ಸೋರುತಿಹುದು ಮನೆಯ ಮಾಳಿಗೆ'  ತತ್ತ್ವ ಪದವನ್ನು ಅರ್ಥ ಸಹಿತ ಇಂಗ್ಲಿಷ್ ಗೆ ಅನುವಾದ ಮಾಡಿದ್ದಾರೆ. ಸಾಮಾನ್ಯವಾಗಿ ಹಿರಿಯ ಸಾಹಿತಿಗಳು, ನಿವೃತ್ತ ಪ್ರೊಫೆಸರ್‌ಗಳ ಸಾಹಿತ್ಯ ಹಾಗೂ ಅನುವಾದಗಳನ್ನು ಮಾತ್ರ ವಿದ್ಯಾರ್ಥಿಗಳಿಗೆ ಪಠ್ಯವಾಗಿ ಆಯ್ಕೆ ಮಾಡುವ ವಿಶ್ವವಿದ್ಯಾಲಯದ ಪಠ್ಯ ಪುಸ್ತಕ ರಚನಾ ಸಮಿತಿ, ಡಿವೈಎಸ್‌ಪಿ ಬಸವರಾಜ್ ಅವರು ಅನುವಾದ ಮಾಡಿರುವ ಸೋರುತಿಹುದು ಮನೆಯ ಮಾಳಿಗೆ ಅನುವಾದಿತ ಸಾಹಿತ್ಯವನ್ನು ಬೆಂಗಳೂರು ವಿಶ್ವವಿದ್ಯಾಲಯದ ಬಿಎ ಆಪ್ಷನಲ್ ಇಂಗ್ಲಿಷ್ವಿದ್ಯಾರ್ಥಿಗಳಿಗೆ ಪಠ್ಯವಾಗಿ ಆಯ್ಕೆ‌ ಮಾಡಿದೆ.

 ಬಸವರಾಜ್ ಎಲಿಗಾರ್ ಅವರ ಮೊದಲ ಪ್ರಯತ್ನ ಯಶಸ್ವಿಯಾಗಿದ್ದು, ಮೊದಲ ಬಾರಿಗೆ ಒರ್ವ ಪೊಲೀಸ್ ಅಧಿಕಾರಿ ಅನುವಾದ ಮಾಡಿರುವ ವಚನವನ್ನು ಬೆಂಗಳೂರು ವಿವಿಯಂಥ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಪಠ್ಯವಾಗಿದೆ. ಕನ್ನಡದಲ್ಲಿ ಸಾಕಷ್ಟು ಶರಣರು, ಸಂತರು, ವಚನಗಾರರು ಆಗಿ ಹೋಗಿದ್ದು ಅವರ ಎಲ್ಲಾ ವಚನಗಳನ್ನು ಹಾಗೂ ಸಾಹಿತ್ಯವನ್ನು ಇಂಗ್ಲೀಷ್ ಭಾಷೆಗೆ ಅನುವಾದ ಮಾಡುವ ಗುರಿಯನ್ನು ಬಸವರಾಜ್ ಎಲಿಗಾರ ಹೊಂದಿದ್ದಾರೆ.

ಈಗಿನ ಮಕ್ಕಳು ಇಂಗ್ಲಿಷ್ ಮಾಧ್ಯಮದತ್ತ ವಾಲುತ್ತಿರುವುದಕ್ಕೆ ಕನ್ನಡದ ಎಲ್ಲಾ ಸಂತರು, ಶರಣರು, ಹಾಗೂ ವಚನಕಾರರ ಸಾಹಿತ್ಯ ಇಂಗ್ಲಿಷ್ ಭಾಷೆಯಲ್ಲೂ ಲಭ್ಯವಾಗಬೇಕು ಎಂಬ ಸದುದ್ಧೇಶದಿಂದ ಡಿವೈಎಸ್‌ಪಿ ಬಸವರಾಜ್ ಎಲಿಗಾರ್ ಈ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. 

ಧಾರ್ಮಿಕ ಸಮನ್ವಯತೆಯ ಹರಿಕಾರ ಸಂತ ಶಿಶುನಾಳ ಶರೀಫರು

ಒಟ್ಟಿನಲ್ಲಿ ಅಧುನಿಕತೆ ಹಾಗೂ ಇಂಗ್ಲಿಷ್ ಮಾಧ್ಯಮದತ್ತ ವಾಲುತ್ತಿರುವ ವಿಧ್ಯಾರ್ಥಿಗಳು ಹಾಗು ಕಾಲೇಜು ಯುವಕ ಯುವತಿಯರಿಗೆ ಅದರಲ್ಲೂ ಹೊರ ದೇಶದಲ್ಲಿರುವ ಅನಿವಾಸಿ ಭಾರತೀಯರಿಗೆ ಈ ಸಂತರ ಶರಣರ ವಚನಕಾರರ ಸಾಹಿತ್ಯವನ್ನು ಇಂಗ್ಲಿಷ್ ಅನುವಾದ ಮಾಡ್ತಿರೋದ್ರಿಂದ ಸಾಕಷ್ಟು ಅನುಕೂಲವಾಗಲಿದೆ.. ತಮ್ಮ ಕೆಲಸದ ಒತ್ತಡದ ನಡುವೆಯೂ ಇಂತೊಂದು ಪ್ರಯತ್ನಕ್ಕೆ ಕೈ ಹಾಕಿರುವ ಡಿವೈಎಸ್‌ಪಿ ಎಲಿಗಾರ ಅವರ ಪ್ರಯತ್ನ ಫಲಿಸಲಿ. ಈ ಮಹತ್ವದ ಕಾರ್ಯಕ್ಕೆ ಶುಭ ಹಾರೈಸೋಣ. ವಚನ ಸಾಹಿತ್ಯ ಇಂಗ್ಲಿಷ್ ಭಾಷೆಯಲ್ಲೂ ಸಿಗುವಂತಾಗಬೇಕು.

click me!