Droupadi Murmu: ಹೆಜ್ಜೆ ಇಟ್ಟಳು ದ್ರೌಪದಿ ಭಾರತ ಮಹಾ...ಭಾರತವಾಗಲಿ- ಚಿಂತನಾ ಹೆಗಡೆ ಅವರ ಭಾಗವತಿಗೆ ವೈರಲ್!

By Ravi NayakFirst Published Jul 24, 2022, 12:26 PM IST
Highlights

ದೇಶದ ಎರಡನೇ ಮಹಿಳಾ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ಬುಡಕಟ್ಟು ಜನಾಂಗ ದ್ರೌಪದಿ ಮುರ್ಮು ಅವರ ಆಯ್ಕೆ ಕುರಿತು ಯಕ್ಷಮಾಣಿಕ್ಯ ಚಿಂತನಾ ಹೆಗಡೆ ಅದ್ಭುತ ಗಾಯನದ ಮೂಲಕ ರಾಷ್ಟ್ರಪತಿಗಳಿಗೆ ಶುಭಹಾರೈಸಿದ್ದಾರೆ. 

ಉಡುಪಿ (ಜು.24): ಒಡಿಶಾದ ಬುಡಕಟ್ಟು ಜನಾಂಗದ ದ್ರೌಪತಿ ಮುರ್ಮು ಅವರು ದೇಶದ 2ನೇ ಮಹಿಳಾ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.  ಬುಡಕಟ್ಟು ಜನಾಂಗದ ಬುಡ ಗಟ್ಟಿಗೊಳಿಸುವ ಈ ಆಯ್ಕೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ದ್ರೌಪದಿ ಮುರ್ಮು ರಾಷ್ಟ್ರಪತಿಯಾಗಿರುವುದಕ್ಕೆ ಹಕ್ಕಿಪಿಕ್ಕಿ ಬುಡುಕಟ್ಟು ಜನರು ಸಂಭ್ರಮಿಸಿದ್ದಾರೆ. ಜನಸಾಮಾನ್ಯರು ಮಾತ್ರವಲ್ಲ ಕಲಾಕ್ಷೇತ್ರವನ್ನು ಕೂಡ ಈ ಆಯ್ಕೆ ರೋಮಾಂಚನಗೊಳಿಸಿದೆ. 

ಕರ್ನಾಟಕ ಕರಾವಳಿಯ ಹೆಮ್ಮೆಯ ಕಲೆ ಯಕ್ಷಗಾನ ಕ್ಷೇತ್ರದಲ್ಲೂ ದ್ರೌಪದಿ ಅವರ ಆಯ್ಕೆ ಹೊಸ ಸಂಚಲನ ಮೂಡಿಸಿದೆ. ಬಡಗುತಿಟ್ಟು ಯಕ್ಷಗಾನ ಕ್ಷೇತ್ರದ ಯುವ ಭಾಗವತರಾದ ಯಕ್ಷಮಾಣಿಕ್ಯ ಕು.ಚಿಂತನಾ  ಹೆಗಡೆ ಅವರು ಅದ್ಭುತ ಗಾಯನದ ಮೂಲಕ ದ್ರೌಪದಿ ಮುರ್ಮು ಅವರಿಗೆ ಶುಭ ಹಾರೈಸಿದ್ದಾರೆ. 

ದ್ರೌಪದಿ ಮಹಾಭಾರತದ ರಾಷ್ಟ್ರಪತಿ: ಜುಲೈ 25ಕ್ಕೆ ಪ್ರಮಾಣ

ಭಾರತ ಮಹಾಭಾರತ ವಾಗಲಿ ಎಂದು ಆಶಿಸಿದ್ದಾರೆ... ಸದ್ಯ ಈ ಹಾಡು ಫೇಸ್‌ಬುಕ್, ಟ್ವೀಟರ್ ಸೇರಿದಂತೆ ಎಲ್ಲೆಡೆ ವೈರಲ್ ಆಗುತ್ತಿದೆ.

ಸಾಹಿತ್ಯ

ಹೆಜ್ಜೆಯಿಟ್ಟಿಹಳು ದ್ರೌಪದಿ  ರಾಷ್ಟ್ರ
ಪತಿಯ ಭವನದಲಿ
ಭಾರತ ಮಹಾ.. ಭಾರತ ವಾಗಲಿ

ಧರ್ಮರಾಯನ ನ್ಯಾಯಾಂಗ
ಸಂವಿಧಾನವಿಹುದು
ಭೀಮ ಬಲದ ಸೇನಾಬಲವಿಹುದು
ಅರ್ಜುನನ  ಚತುರ ಶಾಸಕಾಂಗವಿಹುದು
ನಕುಲ ಸಹದೇವರ ಕಾರ್ಯಾಂಗ ವಿಹುದು
ಮೇಧಾವಿ ಮಾಧವನ ಚತುರ ಸಾರಥ್ಯವಿಹುದು

ಹೆಜ್ಜೆಯಿಟ್ಟಿಹಳು ದ್ರೌಪದಿ...
ಭಾರತ ಮಹಾ..ಭಾರತವಾಗಲಿ

ದುಶ್ಯಾಸನರಿಗೆ ಶಾಸನದ ಉರುಳಾಗಲಿ
ದಲಿತರ ಮೇಲೆ ದೌರ್ಜನ್ಯಗಳಾಗದಿರಲಿ
ಉಗ್ರ ಭಯೋತ್ಪಾದಕರ ಶಕ್ತಿ ಅಡಗಲಿ
ಭೃಷ್ಟರಿಗೆ ಸ್ಪಷ್ಟ ಸಂದೇಶಗಳು ತಲುಪಲಿ
ಕ್ರೂರ ಕೌರವರ ಸಂಹಾರವಾಗಲಿ

ಹೆಜ್ಜೆಯಿಟ್ಟಿಹಳು ದ್ರೌಪದಿ.....
ಭಾರತ ಮಹಾ..ಭಾರತವಾಗಲಿ

click me!