ತಮ್ಮ ರಾಜಕೀಯ ಪ್ರವೇಶಕ್ಕೆ ಕಾರಣ ತಿಳಿಸಿದ ಡಾ.ಮಂಜುನಾಥ್

By Kannadaprabha NewsFirst Published Mar 21, 2024, 10:24 AM IST
Highlights

ಜನರ ಒತ್ತಾಸೆಯಂತೆ ರಾಜಕೀಯ ಕ್ಷೇತ್ರ ಪ್ರವೇಶ ಮಾಡಿ, ಬಡ ಜನರ ಸೇವೆ ಮಾಡಬೇಕೆಂಬ ಸಂಕಲ್ಪದೊಂದಿಗೆ ಮುನ್ನಡೆ ದಿದ್ದೇನೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಜನರ ಪ್ರೀತಿ ವಿಶ್ವಾಸ ಒಂದೇ ನನಗೆ ಬಹುದೊಡ್ಡ ಆಸ್ತಿ ಎಂದು ಖ್ಯಾತ ಹೃದ್ರೋಗ ತಜ್ಞ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪದ್ಮಶ್ರೀ ಡಾ.ಮಂಜುನಾಥ್ ಹೇಳಿದರು.

  ಶಿರಾ : ಜನರ ಒತ್ತಾಸೆಯಂತೆ ರಾಜಕೀಯ ಕ್ಷೇತ್ರ ಪ್ರವೇಶ ಮಾಡಿ, ಬಡ ಜನರ ಸೇವೆ ಮಾಡಬೇಕೆಂಬ ಸಂಕಲ್ಪದೊಂದಿಗೆ ಮುನ್ನಡೆ ದಿದ್ದೇನೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಜನರ ಪ್ರೀತಿ ವಿಶ್ವಾಸ ಒಂದೇ ನನಗೆ ಬಹುದೊಡ್ಡ ಆಸ್ತಿ ಎಂದು ಖ್ಯಾತ ಹೃದ್ರೋಗ ತಜ್ಞ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪದ್ಮಶ್ರೀ ಡಾ.ಮಂಜುನಾಥ್ ಹೇಳಿದರು.

ಅವರು ಬುಧವಾರ ತಾಲೂಕಿನ ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವದೂತ ಮಹಾ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಚನ ಪಡೆದು ಮಾತನಾಡಿದರು. ಜಯದೇವ ಹೃದ್ರೋಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದೆ ಎಂದರೆ ಅದಕ್ಕೆ ರೋಗಿಗಳಿಗೆ ನಾವು ವಿಶ್ವಾಸದಿಂದ ನೀಡಿದ ಸೇವೆಯೇ ಕಾರಣ. ನಾನು ಹೃದ್ರೋಗ ತಜ್ಞನಾಗಿ ೩೮ ವರ್ಷ ಸುಧೀರ್ಘ ಸೇವೆ ಮಾಡಿ 75 ಲಕ್ಷಕ್ಕೂ ಅಧಿಕ ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇನೆ. ಅಲ್ಲದೆ ೫ ಲಕ್ಷ ರೋಗಿಗಳಿಗೆ ಹೃದ್ರೋಗ ಶಸ್ತ್ರ ಚಿಕಿತ್ಸೆ ಮಾಡಿದ್ದೇನೆ. ಒಂದು ಸರ್ಕಾರಿ ಆಸ್ಪತ್ರೆಯನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದು ಜಯದೇವ ಆಸ್ಪತ್ರೆ ಎಂಬುದು ನಮಗೆ ಹೆಮ್ಮೆ ಎನಿಸುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ನನ್ನ ಸೇವೆ, ಜನಪರ ಕಾಳಜಿಯನ್ನು ಗುರುತಿಸಿ ಬಿಜೆಪಿ ಪಕ್ಷ ನನಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಿ ಅಭ್ಯರ್ಥಿಯಾಗಿ ಘೋಷಿಸಿದೆ. ಬಡ ಜನರ ಸೇವೆ ಮಾಡಬೇಕೆಂಬ ನನ್ನ ಇಚ್ಛಾಶಕ್ತಿಗೆ ಪೂರಕವಾಗಿ ಜನತೆ ತಮ್ಮ ಮತಗಳನ್ನು ನನಗೆ ನೀಡುವ ಮೂಲಕ ಮತ್ತಷ್ಟು ಜನಸೇವೆ ಮಾಡುವ ಅವಕಾಶ ಕಲ್ಪಿಸಬೇಕೆಂದು ಎಂದರು.

ಆಶೀರ್ವಚನ ನೀಡಿ ಮಾತನಾಡಿದ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವದೂತ ಸ್ವಾಮೀಜಿ, ವೈದ್ಯಕೀಯ ಕ್ಷೇತ್ರದಲ್ಲಿ ಯಶಸ್ವಿಯಾಗಿರುವ ಡಾ.ಮಂಜುನಾಥ್ ರಾಜಕೀಯ ಕ್ಷೇತ್ರದಲ್ಲಿ ಕೂಡ ಯಶಸ್ಸು ಕಾಣಲಿ ಎಂದರು.

ಈ ಸಂದರ್ಭದಲ್ಲಿ ಅನುಪಮ ಡಾ. ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಆ. ದೇವೇಗೌಡ, ನೇಗಿಲ ಯೋಗಿ ಟೆಸ್ಟ್ ಅಧ್ಯಕ್ಷ ಜಯರಾಮಯ್ಯ, ವಕೀಲ ರಂಗನಾಥ್, ಡಾ. ಶಂಕರ್, ಮುಖಂಡರಾದ ರಾಮಚಂದ್ರಪ್ಪ, ಶಿವಲಿಂಗಪ್ಪ ಸೇರಿದಂತೆ ಹಲವರು ಹಾಜರಿದ್ದರು.

click me!