
ಬೆಂಗಳೂರು: ಸರ್ಕಾರ ಜಾರಿಗೊಳಿಸಿರುವ ಗೃಹಜ್ಯೋತಿ ಯೋಜನೆಯನ್ನು ಪುನರ್ವಿಮರ್ಶೆ ಮಾಡುತ್ತಿರುವುದು ತಿಳಿದೇ ಇದೆ. ಇದಾಗಲೇ ಈ ನಿಟ್ಟಿನಲ್ಲಿ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ. ಗೃಹಜ್ಯೋತಿಯ ಲಾಭವನ್ನು ಮುಂದುವರೆಸುವ ಇಚ್ಛೆ ನಿಮಗಿದ್ದರೆ ಸರ್ಕಾರದ ಈ ನಿಯಮವನ್ನು ನೀವು ಫಾಲೊ ಮಾಡಲೇಬೇಕು. ಇಲ್ಲದಿದ್ದರೆ ಅದು ರದ್ದಾಗುತ್ತದೆ. ನೀವು ಸಂಪೂರ್ಣ ಹಣವನ್ನು ಕಟ್ಟುವುದು ಕಡ್ಡಾಯವಾಗುತ್ತದೆ. ಅಷ್ಟಕ್ಕೂ ಇದಾಗಲೇ, ಗೃಹಜ್ಯೋತಿ ಯೋಜನೆಯಡಿ 1,65,32,652 ಗೃಹ ವಿದ್ಯುತ್ ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ ಆಗಸ್ಟ್ 2, 2026ರವರೆಗೆ 91,50,081 ಫಲಾನುಭವಿಗಳ ಮನೆಗಳಿಗೆ ಮೀಟರ್ ರೀಡರ್ಗಳು ಭೇಟಿ ನೀಡಿ ಸಮೀಕ್ಷೆ ಪೂರ್ಣಗೊಳಿಸಿದ್ದು, ಇನ್ನೂ 73,82,571 ಫಲಾನುಭವಿಗಳ ಮಾಹಿತಿ ಸಂಗ್ರಹವಾಗಿಲ್ಲ.
ಮಾಹಿತಿ ಸಂಗ್ರಹವಾಗದ ಫಲಾನುಭವಿಗಳ ಪೈಕಿ ಹೆಚ್ಚಿನವರು ಸಿಬ್ಬಂದಿ ಮನೆಗೆ ಬಂದಾಗ ಇರಲಿಲ್ಲ, ಅಥವಾ ಸಿಬ್ಬಂದಿ ಕೇಳಿರುವ ದಾಖಲೆಗಳನ್ನು ನೀಡಲು ಹಿಂದೇಟು ಹಾಕುತ್ತಿದ್ದಾರೆ! ಆಧಾರ್ ಕಾರ್ಡ್, ಬಾಡಿಗೆ/ಲೀಸ್ಯವರಾಗಿದ್ದರೆ ಅದರ ಅಗ್ರೀಮೆಂಟ್, ವೋಟರ್ ಐಡಿ, ಜಾತಿ ಪ್ರಮಾಣ ಪತ್ರ ಇದ್ದರೆ, ಪ್ಯಾನ್ ಕಾರ್ಡ್, ಫೋಟೋ ಸೇರಿದಂತೆ ಕೆಲವು ದಾಖಲೆಗಳನ್ನು ಈ ಸಂದರ್ಭದಲ್ಲಿ ಸಿಬ್ಬಂದಿಗೆ ಕೊಡುವುದು ಕಡ್ಡಾಯವಾಗಿದೆ. ಬೆಸ್ಕಾಂ ಸಿಬ್ಬಂದಿ ಮನೆಗೆ ಬಂದಾಗ ಅವರು ಕೇಳಿರುವ ಅಗತ್ಯ ದಾಖಲೆಗಳು ಮತ್ತು ಮಾಹಿತಿಯನ್ನು ನೀಡದಿದ್ದರೆ ಗೃಹಜ್ಯೋತಿ ಲಾಭ ಪಡೆಯಲಾಗುವುದಿಲ್ಲ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಕೆಲವು ಕಡೆಗಳಲ್ಲಿ ಅದರಲ್ಲಿಯೂ ಕೆಲವು ಅಪಾರ್ಟ್ಮೆಂಟ್ಗಳಲ್ಲಿ ಜನರು ಮಾಹಿತಿ ನೀಡಲು, ಬೆಸ್ಕಾಂ ಸಿಬ್ಬಂದಿ ಕೇಳಿರುವ ದಾಖಲೆ ತೋರಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗೆ ಮಾಡಿದರೆ ಗೃಹಜ್ಯೋತಿಯ ಲಾಭ ಸಿಗುವುದಿಲ್ಲ. ಅದು ಸ್ಥಗಿತಗೊಳ್ಳುತ್ತದೆ. ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ದಾಖಲೆ ನೀಡಲೇಬೇಕು ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ ಎನ್. ಹೇಳಿದ್ದಾರೆ. ಸಮೀಕ್ಷೆ ವೇಳೆ ಗ್ರಾಹಕರು ಮನೆಯಲ್ಲಿ ಇಲ್ಲದಿದ್ದರೆ ಅಥವಾ ಮಾಹಿತಿ ನೀಡಲು ನಿರಾಕರಿಸಿದರೆ, ಅವರ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅವರು ಯೋಜನೆಯ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದಿದ್ದಾರೆ.
ಯಾವ ಫಲಾನುಭವಿಗಳೂ ವಂಚನೆಗೆ ಒಳಗಾಗಬಾರದು ಎನ್ನುವ ಕಾರಣದಿಂದ ಸರ್ಕಾರ, ವಿಶೇಷ ಶಿಬಿರಗಳನ್ನು ಆಯೋಜಿಸುವ ಚಿಂತನೆ ಕೂಡ ನಡೆಸಿದೆ. 'ಕೆಲವರು ತಮ್ಮ ಮಾಹಿತಿಯನ್ನು ಹಂಚಿಕೊಳ್ಳಲು ಆಸಕ್ತಿ ತೋರದಿರುವುದು ನಿಜ. ಅಂಥ ಸಂದರ್ಭಗಳಲ್ಲಿ ಆ್ಯಪ್ನಲ್ಲಿ 'ಮಾಹಿತಿ ನೀಡಲು ನಿರಾಕರಿಸಿದ್ದಾರೆ' ಎಂಬ ಆಯ್ಕೆಯಿದೆ ಮತ್ತು ಫಲಾನುಭವಿಯಿಂದ ಸಹಿಯನ್ನೂ ಪಡೆಯಲಾಗುತ್ತದೆ. ಇದುವರೆಗೆ ಯಾವುದೇ ಫಲಾನುಭವಿಯನ್ನು ಪಟ್ಟಿಯಿಂದ ಕೈಬಿಡಲಾಗಿಲ್ಲ. ಯೋಜನೆಯಿಂದ ಯಾರನ್ನಾದರೂ ಹೊರಗಿಡುವ ಕುರಿತು ಅಂತಿಮ ನಿರ್ಧಾರವನ್ನು ಸರ್ಕಾರವೇ ಕೈಗೊಳ್ಳಲಿದೆ" ಎಂದು ಶಿವಶಂಕರ ಎನ್ ಹೇಳಿದ್ದಾರೆ.