ಇಂದು ಮೈಸೂರು ದಸರಾ ಗಜ ಪಡೆ ಪ್ರಯಾಣ ಶುರು

By Kannadaprabha NewsFirst Published Sep 13, 2021, 7:29 AM IST
Highlights

*   ವೀರನಹೊಸಹಳ್ಳಿಯಲ್ಲಿ ಗೇಟ್‌ನಲ್ಲಿ ಕಾರ್ಯಕ್ರಮ
*   ಇಂದು ಬೆಳಗ್ಗೆ 11ಕ್ಕೆ ಅಭಿಮನ್ಯು ನೇತೃತ್ವದ ಗಜಪಡೆಗೆ ಸಾಂಪ್ರದಾಯಿಕ ಪೂಜೆ 
*   2ನೇ ಬಾರಿಗೆ ಚಿನ್ನದ ಅಂಬಾರಿ ಹೊರಲು ಸಿದ್ಧನಾಗಿರುವ ಅಭಿಮನ್ಯು

ಹುಣಸೂರು-ಮಡಿಕೇರಿ(ಸೆ.13): ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಯನ್ನು ಗಜಪಯಣದ ಹೆಸರಿನಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹೆಬ್ಬಾಗಿಲು ವೀರನಹೊಸಹಳ್ಳಿ ಗೇಟ್‌ನಲ್ಲಿ ಜಿಲ್ಲಾಡಳಿತದಿಂದ ಸೆ.13ರಂದು ಸರಳ ಹಾಗೂ ಸಾಂಪ್ರದಾಯಿಕವಾಗಿ ಸ್ವಾಗತಿಸಲು ಸಿದ್ಧತೆ ನಡೆದಿದೆ.

ಈ ಹಿನ್ನೆಲೆಯಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಮತ್ತಿಗೋಡು, ಕೊಡಗಿನ ದುಬಾರೆ ಹಾಗೂ ರಾಮಪುರ ಸಾಕಾನೆ ಶಿಬಿರಗಳಲ್ಲಿರುವ ಗಜಪಡೆಗಳಿಗೆ ನಾಲ್ಕೈದು ದಿನಗಳಿಂದ ವಿಶೇಷ ಆರೈಕೆ ನಡೆದಿದೆ. ಸತತ 2ನೇ ಬಾರಿಗೆ ಚಿನ್ನದ ಅಂಬಾರಿ ಹೊರಲು ಸಿದ್ಧನಾಗಿರುವ ಅಭಿಮನ್ಯುವಿನೊಂದಿಗೆ ಗೋಪಾಲಸ್ವಾಮಿ, ಅಶ್ವತ್ಥಾಮ ಆನೆಗಳು ಮತ್ತಿಗೋಡು ಶಿಬಿರದಲ್ಲೂ, ಕಾವೇರಿ, ವಿಕ್ರಮ, ಧನಂಜಯ ಕೊಡಗಿನ ದುಬಾರೆ ಕ್ಯಾಂಪಿನಲ್ಲಿ ಹಾಗೂ ರಾಮಪುರ ಶಿಬಿರದಲ್ಲಿ ಚೈತ್ರಾ, ಲಕ್ಷ್ಮೀ ಆನೆಗಳಿಗೆ ನಿತ್ಯವೂ ವಿಶೇಷ ಗಮನ ವಹಿಸಿ ಆರೈಕೆ ಮಾಡಲಾಗುತ್ತಿದೆ.

ಈ ಬಾರಿ ಮೈಸೂರು ದಸರಾಗೆ ದುಬಾರೆಯ ಮೂರು ಆನೆಗಳು ಮಾತ್ರ ಭಾಗಿ

ಸೋಮವಾರ ಬೆಳಗ್ಗೆ 11ಕ್ಕೆ ಅಭಿಮನ್ಯು ನೇತೃತ್ವದ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಗುತ್ತದೆ. ನಂತರ ಆನೆಗಳನ್ನು ಬರಮಾಡಿಕೊಳ್ಳುವ ಕಾರ‍್ಯ ನಡೆಯಲಿದ್ದು, ಅವು ಮೈಸೂರಿನ ಅರಣ್ಯಭವನದಲ್ಲಿ ಮೂರು ದಿನಗಳ ಕಾಲ ತಂಗಲಿವೆ. ಡಿ.16ರಂದು ಅರಣ್ಯ ಭವನದಲ್ಲಿ ಇಲಾಖೆಯಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಅರಮನೆಗೆ ಕಳುಹಿಸಿಕೊಡಲಾಗುತ್ತದೆ. ಕೋವಿಡ್‌ ಆತಂಕದ ಹಿನ್ನೆಲೆಯಲ್ಲಿ ಮಾವುತರು, ಕಾವಾಡಿಗರು ಈಗಾಗಲೇ ಕೊರೋನಾ ಲಸಿಕೆ ಪಡೆದುಕೊಳ್ಳಲಾಗಿದೆ.
 

click me!