ರ್ಯಾಪಿಡೋ ವೈಟ್‌ಬೋರ್ಡ್‌ ಸ್ಕೂಟರ್‌ ಟ್ಯಾಕ್ಸಿ ರದ್ದುಗೊಳಿಸಲು ಆಗ್ರಹ

By Kannadaprabha NewsFirst Published Mar 21, 2023, 6:55 AM IST
Highlights

ರ್ಯಾಪಿಡೊ ವೈಟ್‌ಬೋರ್ಡ್‌ ಬೈಕ್‌/ ಸ್ಕೂಟರ್‌ ಟ್ಯಾಕ್ಸಿಗಳು ಮೈಸೂರು ಆಟೋರಿಕ್ಷಾ ಪರ್ಮಿಟ್‌ ವ್ಯಾಪ್ತಿಯೊಳಗೆ ಸಂಚರಿಸುತ್ತಿರುವುದರಿಂದ ಆಟೋ ಚಾಲಕರಿಗೆ ತೊಂದರೆಯಾಗುತ್ತಿದ್ದು, ಕೂಡಲೇ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿ ಮೈಸೂರು ಆಟೋರಿಕ್ಷಾ ಸವೀರ್‍ಸ್‌ ಟ್ರಸ್ಟ್‌ ನೇತೃತ್ವದಲ್ಲಿ ಆಟೋ ಚಾಲಕರು ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಕಪ್ಪು ಬಾವುಟದೊಂದಿಗೆ ಪ್ರತಿಭಟಿಸಿದರು.

  ಮೈಸೂರು :   ರ್ಯಾಪಿಡೊ ವೈಟ್‌ಬೋರ್ಡ್‌ ಬೈಕ್‌/ ಸ್ಕೂಟರ್‌ ಟ್ಯಾಕ್ಸಿಗಳು ಮೈಸೂರು ಆಟೋರಿಕ್ಷಾ ಪರ್ಮಿಟ್‌ ವ್ಯಾಪ್ತಿಯೊಳಗೆ ಸಂಚರಿಸುತ್ತಿರುವುದರಿಂದ ಆಟೋ ಚಾಲಕರಿಗೆ ತೊಂದರೆಯಾಗುತ್ತಿದ್ದು, ಕೂಡಲೇ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿ ಮೈಸೂರು ಆಟೋರಿಕ್ಷಾ ಸವೀರ್‍ಸ್‌ ಟ್ರಸ್ಟ್‌ ನೇತೃತ್ವದಲ್ಲಿ ಆಟೋ ಚಾಲಕರು ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಕಪ್ಪು ಬಾವುಟದೊಂದಿಗೆ ಪ್ರತಿಭಟಿಸಿದರು.

3 ವರ್ಷದಿಂದ  ರ್ಯಾಪಿಡೊ ವೈಟ್‌ಬೋರ್ಡ್‌ ಬೈಕ್‌, ಸ್ಕೂಟರ್‌ ಟ್ಯಾಕ್ಸಿಗಳು ಆಟೋರಿಕ್ಷಾ ಪರ್ಮಿಟ್‌ ವ್ಯಾಪ್ತಿಯಲ್ಲಿ ಅಕ್ರಮವಾಗಿ ಆರ್‌ಟಿಒ ನಿಯಮಾವಳಿಗಳನ್ನು ಉಲ್ಲಂಘಿಸಿ ಆಟೋಗಳಿಗೆ ಪರ್ಯಾಯವಾಗಿ ಸಂಚರಿಸುತ್ತಿವೆ. ಇದರಿಂದ ಆಟೋ ಚಾಲಕರ ದಿನನಿತ್ಯದ ದುಡಿಮೆಗೆ ತೊಂದರೆಯಾಗುತ್ತಿದೆ. ಬ್ಯಾಂಕ್‌, ಫೈನಾನ್ಸ್‌ಗಳಿಂದ ಸಾಲ ಪಡೆದು ಆಟೋ ತೆಗೆದುಕೊಂಡಿರುವ ಚಾಲಕರು ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಲಾಗದೆ ಬ್ಯಾಂಕು, ಫೈನಾನ್ಸ್‌ ಕಂಪನಿಗಳ ಕಾನೂನು ಕ್ರಮ ಎದುರಿಸುವಂತಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಆಟೋ ಚಾಲಕರ ಕುಟುಂಬಗಳು ಅತಂತ್ರ ಸ್ಥಿತಿಗೆ ಸಿಲುಕಿ ಬೀದಿಗೆ ಬೀಳುವಂತಾಗಿದೆ. ಚಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸ, ಕುಟುಂಬದ ಆರೋಗ್ಯಕ್ಕೆ ಸಂಬಂಧಪಟ್ಟಜವಾಬ್ದಾರಿಯನ್ನು ನಿಭಾಯಿಸಲು ಸಾಧ್ಯವಾಗದೇ ಬಹಳ ದುಸ್ಥಿತಿಗೆ ಬಂದು ನಿಂತಿದ್ದಾರೆ. ಎರಡು ವರ್ಷದಿಂದ ಅನೇಕ ಬಾರಿ ಸಂಬಂಧಪಟ್ಟಅಧಿಕಾರಿಗಳಿಗೆ, ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಅವರು ಆರೋಪಿಸಿದರು.

ನ್ಯಾಯಾಲಯದಲ್ಲಿ ರ್ಯಾಪಿಡೊ ವೈಟ್‌ಬೋರ್ಡ್‌ ಸ್ಕೂಟರ್‌, ಬೈಕ್‌ ಟ್ಯಾಕ್ಸಿಗಳ ಮೇಲೆ ಸಂಬಂಧಪಟ್ಟಅಧಿಕಾರಿಗಳು ಯಾವುದೇ ರೀತಿ ಕಾನೂನು ಕ್ರಮ ಜರುಗಿಸಬಾರದೆಂಬ ತಡೆಯಾಜ್ಞೆ ಪಡೆದುಕೊಂಡಿದ್ದಾರೆ. ಸರ್ಕಾರದ ಅಡ್ವಕೇಟ್‌ ಜನರಲ್‌ಗೆ ನ್ಯಾಯಕೊಡಿಸುವಂತೆ ಮನವಿ ಮಾಡಿದರೂ ಸೂಕ್ತ ಸ್ಪಂದನೆ ದೊರೆತಿಲ್ಲ. ನಮಗೆ ನ್ಯಾಯ ಸಿಗುವವರೆಗೂ ಆಟೋಗಳಲ್ಲಿ ಸರ್ಕಾರದ ವಿರುದ್ಧ ಧಿಕ್ಕಾರದ ಸೂಚಕವಾಗಿ ಕಪ್ಪು ಬಾವುಟ, ಕಪ್ಪು ಪಟ್ಟಿಧರಿಸಿ ಆಟೋ ಚಲಾಯಿಸುವುದಾಗಿ ಅವರು ಎಚ್ಚರಿಸಿದರು.

ಟ್ರಸ್ಟ್‌ ಅಧ್ಯಕ್ಷ ಬಿ. ನಾಗರಾಜು, ಆಟೋ ಚಾಲಕರಾದ ಲಕ್ಷೀ್ಮನಾರಾಯಣ, ಸೋಮನಾಯಕ, ಮಂಜುನಾಥ್‌, ಎಂ.ಬಿ. ದೊಡ್ಡದೇವಪ್ಪ, ನಾಗರಾಜ್‌, ಕೆಂಪರಾಜೇ ಅರಸ್‌, ವಸಂತಕುಮಾರ್‌ ಮೊದಲಾದವರು ಇದ್ದರು.

ಬೆಂಗಳೂರಲ್ಲಿ ಗಡುವು

ಬೆಂಗಳೂರು(ಮಾ.16):  ನಗರದಲ್ಲಿ ‘ಅಕ್ರಮ ವೈಟ್‌ ಬೋರ್ಡ್‌ ಬೈಕ್‌ ಟ್ಯಾಕ್ಸಿ’ಗಳನ್ನು ನಿಷೇಧಿಸುವಂತೆ ಮೂರು ದಿನಗಳ ಗಡುವು ನೀಡಿರುವ ಬೆಂಗಳೂರು ಆಟೋರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟ, ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಮಾ.20ರಂದು ಆಟೋರಿಕ್ಷಾ ಸೇವೆ ಸ್ಥಗಿತಗೊಳಿಸುವುದಾಗಿ ಎಚ್ಚರಿಸಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆದರ್ಶ,ಆಟೋ ಮತ್ತು ಟ್ಯಾಕ್ಸಿ ಡ್ರೈವ​ರ್ಸ್‌ ಯೂನಿಯನ್‌ ಅಧ್ಯಕ್ಷ ಎಂ.ಮಂಜುನಾಥ, ಮಾ 16ರಿಂದ ಮೂರು ದಿನ ಎಲ್ಲ ಆಟೋಗಳ ಮೇಲೆ ಕಪ್ಪು ಬಾವುಟ ಪ್ರದರ್ಶಿಸಿ ಚಾಲನೆ ಮಾಡುತ್ತೇವೆ. ಭಾನುವಾರದೊಳಗೆ ಸರ್ಕಾರ ಅಕ್ರಮ ವೈಟ್‌ ಬೋರ್ಡ್‌ ಬೈಕ್‌ ಟ್ಯಾಕ್ಸಿಗಳನ್ನು ನಿಷೇಧಿಸಬೇಕು. ಇಲ್ಲದಿದ್ದರೆ ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಮಧ್ಯರಾತ್ರಿವರೆಗೆ ಎಲ್ಲ ಆಟೋರಿಕ್ಷಾ ಚಾಲಕರ ಸಂಘಟನೆಗಳು ಆಟೋರಿಕ್ಷಾ ಸೇವೆ ಸ್ಥಗಿತಗೊಳಿಸಲಿವೆ. ಜತೆಗೆ ಅಂದು ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಿದ್ದೇವೆ ತಿಳಿಸಿದರು.

Bengaluru: ರ‍್ಯಾಪಿಡೋ-ಬೌನ್ಸ್ ಬೈಕ್‌, ಟ್ಯಾಕ್ಸಿಗಳ ಸೇವೆ ರದ್ದತಿಗೆ ಆಗ್ರಹಿಸಿ ಆಟೋ ಚಾಲಕ ವಿಷ ಸೇವನೆ: ಆಸ್ಪತ್ರೆಗೆ ದಾಖಲು

ಆಟೋರಿಕ್ಷಾ ಡ್ರೈವ​ರ್ಸ್‌ ಯೂನಿಯನ್‌(ಸಿಐಟಿಯು) ಅಧ್ಯಕ್ಷ ಸಿ.ಎನ್‌.ಶ್ರೀನಿವಾಸ್‌, ನಗರದಲ್ಲಿ ಆಟೋರಿಕ್ಷಾಗಳ 21 ಸಂಘಟನೆಗಳು ಹಾಗೂ 2.10 ಲಕ್ಷ ಆಟೋಗಳಿವೆ. ಸುಮಾರು ಹತ್ತು ಲಕ್ಷಕ್ಕೂ ಹೆಚ್ಚಿನವರು ಇದೇ ಉದ್ಯೋಗ ಮಾಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಆ್ಯಪ್‌ ಆಧಾರಿತ ಅನಧಿಕೃತ ವೈಟ್‌ಬೋರ್ಡ್‌ ಬೈಕ್‌ ಟ್ಯಾಕ್ಸಿಗಳು ಹೆಚ್ಚಿದೆ. ಆಟೋ ಚಾಲಕರ ದಿನದ ಸಂಪಾದನೆಯನ್ನು ಹಗಲು ದರೋಡೆ ಮಾಡುತ್ತಿದ್ದು, ಬದುಕು ನಡೆಸುವುದು ಕಷ್ಟವಾಗಿದೆ ಎಂದರು.

ಪೀಸ್‌ ಆಟೋ ಮತ್ತು ಟ್ಯಾಕ್ಸಿ ಡ್ರೈವ​ರ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ರಘುನಾರಾಯಣ ಗೌಡ, ಕರವೇ ಆಟೋ ಘಟಕ ಅಧ್ಯಕ್ಷ ಜಿ.ಎಸ್‌.ಕುಮಾರ್‌, ಬೆಂಗಳೂರು ಆಟೋ ಸೇನೆ ಅಧ್ಯಕ್ಷ ಎಂ.ಆರ್‌.ಚೇತನ್‌ ಇದ್ದರು.

click me!