ದೇಶದಲ್ಲಿ ಹಿಂದುಗಳ ಸಂಖ್ಯೆ ಇಳಿಮುಖವಾಗುತ್ತಿದೆ: ಕಲ್ಲಡ್ಕ ಪ್ರಭಾಕರ್ ಭಟ್ ಕಳವಳ

By Kannadaprabha NewsFirst Published Mar 24, 2023, 10:11 AM IST
Highlights

ದೇಶದಲ್ಲಿ ಹಿಂದೂಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಇದರ ಬಗ್ಗೆ ನಾವು ಗಂಭೀರವಾಗಿ ಯೋಚಿಸಬೇಕಿದೆ ಎಂದು ಪುತ್ತೂರಿನ ಶ್ರೀರಾಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ ಭಟ್‌ ಕಳವಳ ವ್ಯಕ್ತಪಡಿಸಿದರು.

ಶಿರಸಿ (ಮಾ.25) : ದೇಶದಲ್ಲಿ ಹಿಂದೂಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಇದರ ಬಗ್ಗೆ ನಾವು ಗಂಭೀರವಾಗಿ ಯೋಚಿಸಬೇಕಿದೆ ಎಂದು ಪುತ್ತೂರಿನ ಶ್ರೀರಾಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ ಭಟ್‌(Kalladka Prabhakar bhat) ಕಳವಳ ವ್ಯಕ್ತಪಡಿಸಿದರು.

ಯುಗಾದಿ ಅಂಗವಾಗಿ ನಗರದ ಮಾರಿಕಾಂಬಾ ಪ್ರೌಢಶಾಲಾ ಮೈದಾನದಲ್ಲಿ ಬುಧವಾರ ಸಂಜೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಹಿಂದೂಗಳೆಲ್ಲ ಒಂದಾಗುವ ಕಾಲ ಬಂದಿದೆ: ಚೈತ್ರಾ ಕುಂದಾಪುರ

ಮಕ್ಕಳಿಗೆ ನಾವು ಸಂಸ್ಕಾರ ನೀಡುವುದರಲ್ಲಿ ತಪ್ಪಬಾರದು. ಮಕ್ಕಳಿಗೆ ಇಂಗ್ಲಿಷ, ವಿಜ್ಞಾನ, ಹಣ ಇದ್ದರೆ ಸಾಲದು ಅದರ ಜತೆಗೆ ಗುಣ ಬೇಕು ಇದಿಲ್ಲದಿದ್ದರೆ ಪ್ರಯೋಜನವಿಲ್ಲ ಎಂದ ಅವರು, ಮಕ್ಕಳು ಉದ್ಯೋಗಕ್ಕಾಗಿ ಎಲ್ಲೆಲ್ಲೊ ಹೋಗಿ ನೆಲೆಸುತ್ತಿದ್ದಾರೆ. ತಮ್ಮ ಪಾಲಕರ ಬಗ್ಗೆ ಕಾಳಜಿ ಇಲ್ಲದಾಗಿದೆ. ಹೀಗಾಗಿ ಎಲ್ಲ ಕಡೆ ವೃದ್ಧಾಶ್ರಮಗಳಾಗುತ್ತಿವೆ. ಪಾಲಕರು ಸಂಸ್ಕಾರ ನೀಡದೇ ಇರುವುದೇ ಇದಕ್ಕೆ ಕಾರಣವಾಗಿದೆ. ಹಿಂದೂ ಸಮಾಜ ಬೆಳೆಯಬೇಕಾದರೆ ನಮ್ಮ ಮಕ್ಕಳಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಿಂತನೆಯನ್ನು ಬೆಳೆಸಬೇಕು. ಸಣ್ಣ ಸಣ್ಣ ವಿಷಯಗಳನ್ನು ಬಿಟ್ಟು ಹಿಂದೂ ಸಮಾಜ ಒಗ್ಗಟ್ಟಾಗಬೇಕು ಎಂದರು.

ಹಿಂದು ಸಮಾಜ ಪ್ರಕೃತಿ ಆರಾಧನೆ ಮಾಡಿಕೊಂಡು ಬಂದಿದೆ, ಪ್ರಕೃತಿಯನ್ನೇ ದೇವರೆಂದು ತಿಳಿದುಕೊಂಡು ಬಂದಿದೆ. ಹೀಗಾಗಿಯೇ ನಮಗೆ ಯುಗಾದಿ ವಿಶೇಷವಾಗಿದೆ. ಭಾರತ ಇಡೀ ಜಗತ್ತಿನ ಹಿತವನ್ನು ಬಯಸಿದೆ. ಭಾರತದಲ್ಲಿನ ಕುಟುಂಬ ವ್ಯವಸ್ಥೆ ಜಗತ್ತಿಗೆ ಮಾದರಿಯಾಗಿದೆ. ಯೋಗವನ್ನು ಇಡೀ ಜಗತ್ತಿಗೆ ನೀಡಿದೆ. ಜಗತ್ತಿಗೋಸ್ಕರ ಭಾರತ ಬದುಕುತ್ತಿದೆ. ಇಲ್ಲಿನ ಹಿಂದೂ ಸಮಾಜ ಇಡಿ ಪ್ರಪಂಚಕ್ಕೆ ಮಾರ್ಗದರ್ಶಕವಾಗಿದೆ. ಆದರೆ, ಇದೇ ಹಿಂದೂ ಸಮಾಜಕ್ಕೆ ತುಷ್ಠಿಕರಣ ನೀತಿಯಿಂದ ಧಕ್ಕೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಯುಗಾದಿ ಸೃಷ್ಟಿಯ ಜನ್ಮದಿನೋತ್ಸವ:

ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿ, ಯುಗಾದಿ ಸೃಷ್ಟಿಯ ಜನ್ಮದಿನೋತ್ಸವ. ನಿಜವಾದ ವರ್ಷ ಆರಂಭ ಯುಗಾದಿ. ಶೋಭನ ಸಂವತ್ಸರ ಒಳ್ಳೆಯ ಫಲಗಳನ್ನು ಒಳಗೊಂಡಿದೆ. ಆದರ್ಶ, ಆರೋಗ್ಯ ಚಿಂತನೆಯೇ ಬೇವುಬೆಲ್ಲದ ಯುಗಾದಿ ಎಂದರು.

ಬಣ್ಣದ ಮಠದ ಶಿವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಸಂಸ್ಕಾರ ಸಿಗುತ್ತದೆ. ಕಷ್ಟ- ಸುಖದ ಅರಿವಾಗುತ್ತದೆ. ಸಂಸ್ಕಾರ ಹಾಳು ಮಾಡುವ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವುದನ್ನು ಬಿಡಿ ಎಂದ ಅವರು, ದೇಶದಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಬೇಕು. ಸ್ವತಂತ್ರವಾಗಿ ಬದುಕುವ, ಸಂಸ್ಕೃತಿ ಉಳಿಸುವ ಶಿಕ್ಷಣ ದೊರೆತರೆ ಹಿಂದೂ ರಾಷ್ಟ್ರ ಬೆಳೆಯುತ್ತದೆ. ಇಡೀ ನಾಡಿಗೆ ಶಿರಸಿಯ ಯುಗಾದಿ ಶೋಭಾಯಾತ್ರೆ ಮಾರ್ಗಸೂಚಿ. 25 ವರ್ಷದ ಹಿಂದೆ ಪ್ರಾರಂಭವಾದ ಇಲ್ಲಿನ ಯುಗಾದಿ ಶೋಭಾ ಯಾತ್ರೆ ಹಲವೆಡೆ ಪ್ರಾರಂಭವಾಗಿದೆ. ಇದು ಇನ್ನೂ ಹೆಚ್ಚಬೇಕು ಎಂದರು.

ಯುಗಾದಿ ಉತ್ಸವ(Ugadi utsav) ಸಮಿತಿ ಅಧ್ಯಕ್ಷ ಶ್ರೀಕಾಂತ ನಾಯ್ಕ ಮುಂತಾದವರು ಪಾಲ್ಗೊಂಡಿದ್ದರು. ಪರಮಾನಂದ ಹೆಗಡೆ ನಿರೂಪಿಸಿದರು. ನಂತರ ನಗರದಲ್ಲಿ ಶೋಬಾಯಾತ್ರೆ ಮೆರವಣಿಗೆ ನಡೆಯಿತು. ಕಲಾತಂಡಗಳು, ಪೌರಾಣಿಕ ರೂಪಕಗಳು ಆಕರ್ಷಿಸಿದವು. ಇದೇ ವೇಳೆ ಸಾವಿರಾರು ಮಂದಿ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಮೆರವಣಿಗೆ ವೀಕ್ಷಿಸಿದರು.

ಹಿಂದೂ ಧರ್ಮ ಜಾತ್ಯತೀತತೆಯ ವಿರುದ್ಧವೆಂದು ಬಿಂಬಿಸುವುದು ವ್ಯರ್ಥ ಪ್ರಯತ್ನ: ಕಲ್ಲಡ್ಕ ಪ್ರಭಾಕರ್ ಭಟ್

ಹಿಂದೂಗಳು ಮುಖ್ಯವಾಗಿ ಮೂರು ತಪ್ಪುಗಳನ್ನು ತಿದ್ದಿಕೊಳ್ಳಬೇಕು. ತಡವಾಗಿ ವಿವಾಹ, ವಿಚ್ಚೇದನ, ಸಂತತಿ ಅತಿ ನಿಯಂತ್ರಣದಿಂದ ದೂರವಾಗಬೇಕು. ಈ ಬಗ್ಗೆ ಹಿಂದೂಗಳು ಜಾಗೃತರಾಗಬೇಕು. ಭಾರತ ಉಳಿದರೆ ವಿಶ್ವ ಉಳಿಯುತ್ತದೆ.

- ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಸ್ವರ್ಣವಲ್ಲೀ

click me!