'ಅನರ್ಹ ಶಾಸಕರು ಗೋಲಿ ಆಡುವ ಮಕ್ಕಳಲ್ಲ, ಜವಾಬ್ದಾರಿ ಇರುವವರು'

By Suvarna NewsFirst Published Dec 8, 2019, 11:00 AM IST
Highlights

ಮೂರುವರೆ ವರ್ಷವೂ ಬಿಎಸ್‌ವೈ ಸಿಎಂ| 15 ಸ್ಥಾನಗಳಲ್ಲೂ ಬಿಜೆಪಿ ಗೆಲವು ನಿಶ್ಚಿತ| ಫಲಿತಾಂಶ ನಂತರ ಸಚಿವ ಸ್ಥಾನ ನೀಡುವ ವಿಷಯ ಹೈಕಮಾಂಡ್‌ಗೆ ಬಿಟ್ಟದ್ದು| ಬಿಜೆಪಿಗೆ ಬಂದ ಶಾಸಕರು ಜವಾಬ್ದಾರಿಯುತ ಶಾಸಕರು, ಗೋಲಿ ಆಡುವ ಮಕ್ಕಳಲ್ಲ|

ಬಾಗಲಕೋಟೆ(ಡಿ.08): ಉಪಚುನಾವಣೆಯಲ್ಲಿ 15 ಸ್ಥಾನಗಳನ್ನು ಬಿಜೆಪಿ ಗೆಲ್ಲುವುದು ನಿಶ್ಚಿತ. ಮುಂದಿನ ಮೂರೂವರೆ ವರ್ಷಗಳ ಕಾಲ ಬಿ.ಎಸ್‌.ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿದ್ದು, ಸುಭದ್ರ ಸರ್ಕಾರವನ್ನು ನಡೆಸುವುದು ನಿಶ್ಚಿತ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜಿಲ್ಲೆಯ ಮುಧೋಳ ತಾಲೂಕಿನ ಯಡಹಳ್ಳಿ ಗ್ರಾಮದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಬಿಜೆಪಿಗೆ ಕಡಿಮೆ ಸೀಟು ಬರುವ ಪ್ರಶ್ನೆಯೇ ಇಲ್ಲ. ವಿಜಯನಗರದಲ್ಲಿ ಆನಂದ ಸಿಂಗ್‌ 40 ಸಾವಿರಕ್ಕೂ ಹೆಚ್ಚಿನ ಅಂತರದಿಂದ ಗೆಲ್ಲಲಿದ್ದಾರೆ. ಅದು ನನ್ನ ಉಸ್ತುವಾರಿಯ ಕ್ಷೇತ್ರವಾಗಿತ್ತು. ರಮೇಶ ಜಾರಕಿಹೊಳಿ ಸೇರಿದಂತೆ ಎಲ್ಲ 15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲವು ನಿಶ್ಚಿತ ಎಂದರು.

ಸಚಿವ ಸ್ಥಾನ ಹೈಕಮಾಂಡ್‌ ನಿರ್ಧಾರ:

ಉಪಚುನಾವಣೆಯ ಫಲಿತಾಂಶದ ನಂತರ ಸಚಿವ ಸ್ಥಾನ ಯಾರಿಗೆ ಕೊಡಬೇಕು, ಬಿಡಬೇಕು ಎಂಬುವುದನ್ನು ಪಕ್ಷದ ಹೈಕಮಾಂಡ್‌ ನಿರ್ಧರಿಸಲಿದೆ. ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹಾಗೂ ರಾಜ್ಯದ ಮುಖ್ಯಮಂತ್ರಿ ಹಾಗೂ ರಾಜ್ಯದ ನಾಯಕರು ಜೊತೆ ಸಮಾಲೋಚನೆ ನಡೆಸಿ ಸಚಿವರನ್ನಾಗಿ ಯಾರನ್ನು ಮಾಡಬೇಕು ಎನ್ನುವುದನ್ನು ನಿರ್ಧರಿಸಲಿದ್ದಾರೆ ಎಂದರು.
ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಮತ್ತೆರಡು ಉಪಮುಖ್ಯಮಂತ್ರಿ ಸ್ಥಾನಗಳನ್ನು ಸೃಷ್ಟಿಸುವ ವಿಷಯ ನನಗೆ ಗೊತ್ತಿಲ್ಲ. ಊಹಾಪೋಹದ ಮೇಲೆ ಹೇಳುವ ವಿಷಯವೂ ಇದಲ್ಲ. ಎಲ್ಲವನ್ನು ಹೈಕಮಾಂಡ್‌ ನಿರ್ಧರಿಸಲಿದೆ ಎಂದರು.

ಸಿದ್ದು ವಿರುದ್ಧ ಟೀಕೆ:

ರಾಜ್ಯದಲ್ಲಿ ಮತ್ತೇ ಆಪರೇಷನ್‌ ಕಮಲವಾದರೆ ಜನ ಬಿಜೆಪಿಯನ್ನು ಅಟ್ಟಾಡಿಸಿಕೊಂಡು ಹೊಡೆಯುತ್ತಾರೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಗರಂ ಆದ ಗೋವಿಂದ ಕಾರಜೋಳ, ಆಪರೇಷನ್‌ ಕಮಲ ಅಂದರೆ ಏನು, ಈಗ ಬಂದಿರುವ 17 ಶಾಸಕರು ಗೋಲಿ ಆಡುವವರಲ್ಲ. ಜವಾಬ್ದಾರಿ ಇರುವವರು, ನಾಲ್ಕಾರು ಬಾರಿ ಆಯ್ಕೆಯಾದವರು. ನಿಮ್ಮ ಪಕ್ಷದ ಶಾಸಕರು, ಸಚಿವರನ್ನು ಸರಿಯಾಗಿ ಇಟ್ಟುಕೊಂಡಿದ್ದರೆ ಅವರು ಏಕೆ ರಾಜೀನಾಮೆ ಕೊಟ್ಟು ಬರುತ್ತಿದ್ದರು ಅನ್ನುವದನ್ನು ಸಿದ್ದರಾಮಯ್ಯ ಅರ್ಥಮಾಡಿಕೊಳ್ಳಲಿ. ಎಲ್ಲಿ ತಮ್ಮ ಶಾಸಕರು ಬಿಟ್ಟು ಹೋಗುತ್ತಾರೆ ಅನ್ನುವ ಭಯದಿಂದ ಇಂತಹ ಮೈ ಪರಿಚಿಕೊಳ್ಳುವ ಹೇಳಿಕೆ ನೀಡುತ್ತಿದ್ದಾರೆ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದರು.
 

click me!