
ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಂಗಳವಾರ ಹಳದಿ ಮಾರ್ಗ ಮೆಟ್ರೋ ಉದ್ಘಾಟನೆ, ಮುಂದಿನ ಮೆಟ್ರೋ ಯೋಜನೆಗಳು, ಡಬಲ್ ಡೆಕ್ಕರ್ ಮೆಟ್ರೋ ಯೋಜನೆ ಹಾಗೂ ಹೊಸ ಟನಲ್ ರಸ್ತೆ ಕುರಿತು ಪ್ರಮುಖ ಮಾಹಿತಿ ನೀಡಿದರು. ಡಿಕೆಶಿ ಅವರು ತಿಳಿಸಿದಂತೆ, “ನಾನು ಬಿಡಿಎ ಅಧ್ಯಕ್ಷ ಹ್ಯಾರಿಸ್, ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಶಾಸಕರಾದ ಕೃಷ್ಣಪ್ಪ, ಸತೀಶ್ ರೆಡ್ಡಿ ಹಾಗೂ ರಾಮಮೂರ್ತಿಯವರೊಂದಿಗೆ ಮೆಟ್ರೋ ಮಾರ್ಗ ಪರಿಶೀಲನೆ ನಡೆಸಿದ್ದೇನೆ. ಜುಲೈ 30ರಂದು ಮೆಟ್ರೋ ಸುರಕ್ಷತಾ ಪ್ರಮಾಣ ಪತ್ರ ನಮಗೆ ಲಭ್ಯವಾಗಿತ್ತು. ಮೆಟ್ರೋ ಲೈನ್ ಉದ್ಘಾಟನೆಗಾಗಿ ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದು ಸಮಯ ಕೇಳಿದ್ದೇವೆ. ಆಗಸ್ಟ್ 10ರಂದು ಅವರು ಸಮಯ ನೀಡಿದ್ದಾರೆ. ಅಂದೇ ಅವರಿಗೆ ರೈಲ್ವೇ ಇಲಾಖೆಯ ಮತ್ತಷ್ಟು ಕಾರ್ಯಕ್ರಮ ಇದೆ ಎಂದರು.
ಹಳದಿ ಮಾರ್ಗವು 19.5 ಕಿ.ಮೀ. ಉದ್ದ ಇದ್ದು, 16 ನಿಲ್ದಾಣಗಳ ಸಂಖ್ಯೆ ಹೊಂದಿದೆ. ಪ್ರಾರಂಭಿಕ ಹಂತದಲ್ಲಿ 3 ಮೆಟ್ರೋ ರೈಲುಗಳು, 25 ನಿಮಿಷ ಅಂತರದಲ್ಲಿ ಸಂಚಾರ ಮಾಡಲಿದೆ ಎಂದು ಮಾಹಿತಿ ನೀಡಿದ ಡಿಕೆಶಿ ಅವರು ಈ ಮಾರ್ಗದಲ್ಲಿ ದುಡಿದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಧನ್ಯವಾದ ತಿಳಿಸಿದರು. ಐಐಎಂಬಿ ಬಳಿ ಚಿಕ್ಕ ಪ್ರಮಾಣದ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ ಎಂದರು.
ಮುಂದಿನ ಎಲ್ಲಾ ಮೆಟ್ರೋ ಯೋಜನೆಗಳು ಡಬಲ್ ಡೆಕ್ಕರ್ ಆಗಿರಬೇಕು ಎಂದು ನಾನು ಹೇಳಿದ್ದೇನೆ. ಹೀಗೆ ಮಾಡಿದರೆ ಮತ್ತೊಂದು ಹೊಸ ರಸ್ತೆ ನಿರ್ಮಾಣವಾದಂತೆ ಆಗುತ್ತದೆ. ಸ್ವಲ್ಪ ಹಣದ ಸಮಸ್ಯೆಯಿದ್ದರೂ, ಬಿಬಿಎಂಪಿ ಹಾಗೂ ಬಿಡಿಎ ಸಹಕಾರದೊಂದಿಗೆ ಯೋಜನೆಗಳನ್ನು ರೂಪಿಸುತ್ತೇವೆ. ಅಗತ್ಯವಿರುವ ನಿಧಿಗಳನ್ನು ಪಡೆಯಲು ಪ್ರಧಾನಿ ಮೋದಿ ಅವರ ಸಹಕಾರವನ್ನು ಪಡೆಯುತ್ತೇವೆ ಎಂದು ಹೇಳಿದರು.
ಡಿಕೆಶಿ ಅವರು ಪಾರ್ಕಿಂಗ್ ಸಮಸ್ಯೆ ನಿವಾರಣೆಗೆ ಹೊಸ ನಿರ್ದೇಶನ ನೀಡಿದ್ದಾರೆ. “ಇನ್ಮುಂದೆ ಹೊಸ ಮೆಟ್ರೋ ನಿಲ್ದಾಣಗಳನ್ನು ನಿರ್ಮಿಸುವಾಗ ಪಾರ್ಕಿಂಗ್ಗಾಗಿ ಕನಿಷ್ಠ 2-3 ಎಕರೆ ಜಾಗ ಮೀಸಲಿಡಬೇಕು. ಹೀಗೆ ಮಾಡಿದರೆ ಪಾರ್ಕಿಂಗ್ ಮಾಡಿ ಕೆಲಸಕ್ಕೆ ಹೋಗಲು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದರು.
ಉಪಮುಖ್ಯಮಂತ್ರಿಗಳು ಬೆಂಗಳೂರಿಗೆ ಮತ್ತೊಂದು ಹೊಸ ಟನಲ್ ರಸ್ತೆ ಬರಲಿದೆ ಎಂದಿದ್ದಾರೆ. ಇದರ ಉದ್ದ 1.5 ಕಿ.ಮೀ. ಆಗಿದ್ದು, ಹೆಬ್ಬಾಳದ ಎಸ್ಟಿ ಮಾಲ್ನಿಂದ ಜಿಕೆವಿಕೆವರೆಗೆ ಮಾರ್ಗ ಇದಲಿದೆ. 2 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಯೋಜನೆ ಇದೆ. ಹೊಸ ಟನಲ್ ರಸ್ತೆ ನಿರ್ಮಾಣ ವಿಚಾರ ಗುರುವಾರದ ಕ್ಯಾಬಿನೆಟ್ ಸಭೆಯಲ್ಲಿ ಪ್ರಸ್ತಾಪ ಮಂಡನೆ ಸಲ್ಲಿಸಲಾಗುವುದು. ಈ ಟನಲ್ ರಸ್ತೆ ಹೊಸ ತಂತ್ರಜ್ಞಾನದ ಮೂಲಕ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು.