ಮಲ್ಲೇಶ್ವರ 18ನೇ ಕ್ರಾಸ್‌ನ ಐತಿಹಾಸಿಕ ಕಲ್ಲುಕಟ್ಟಡ ಜೀರ್ಣೋದ್ಧಾರಕ್ಕೆ ಡಿಸಿಎಂ ಪರಿಶೀಲನೆ

By Sujatha NRFirst Published Jul 17, 2021, 4:05 PM IST
Highlights
  •  ಮಲ್ಲೇಶ್ವರ 18ನೇ ಅಡ್ಡರಸ್ತೆಯಲ್ಲಿರುವ ಸರಕಾರಿ ಪದವಿಪೂರ್ವ ಕಾಲೇಜಿನ ಐತಿಹಾಸಿಕ ಕಲ್ಲು ಕಟ್ಟಡ ನವೀಕರಣ
  • ಕ್ಷೇತ್ರದ ಶಾಸಕ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣ ಶನಿವಾರ ಪರಿಶೀಲನೆ 
  • ನವೀಕರಣ ಮಾಡಲು ಮುಂದೆ ಬಂದಿರುವ ಜೈನ್‌ ಶಿಕ್ಷಣ ಸಮೂಹ

ಬೆಂಗಳೂರು (ಜು.17): ಮಲ್ಲೇಶ್ವರ 18ನೇ ಅಡ್ಡರಸ್ತೆಯಲ್ಲಿರುವ ಸರಕಾರಿ ಪದವಿಪೂರ್ವ ಕಾಲೇಜಿನ ಐತಿಹಾಸಿಕ ಕಲ್ಲು ಕಟ್ಟಡ ನವೀಕರಣ ಸಂಬಂಧ ಕ್ಷೇತ್ರದ ಶಾಸಕ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣ ಶನಿವಾರ ಪರಿಶೀಲನೆ ನಡೆಸಿದರು. 

ತಮ್ಮ ಕೋರಿಕೆಯ ಮೇಲೆ ಕಟ್ಟಡದ ನವೀಕರಣ ಮಾಡಲು ಮುಂದೆ ಬಂದಿರುವ ಜೈನ್‌ ಶಿಕ್ಷಣ ಸಮೂಹದ ಅಧ್ಯಕ್ಷ ಚೆನ್‌ರಾಜ್‌ ರಾಯ್‌ಚಂದ್‌ ಹಾಗೂ ಸಂಸ್ಥೆಯ ಇತರೆ ಪ್ರತಿನಿಧಿಗಳು, ತಜ್ಞರು ಡಿಸಿಎಂ ಜತೆಯಲ್ಲಿದ್ದರು. ಈ ಸಂದರ್ಭದಲ್ಲಿ ಕಟ್ಟಡವನ್ನು ಯಾವ ರೀತಿಯಲ್ಲಿ ಅಭಿವೃದ್ಧಿಪಡಿಸಬಹುದು ಎಂಬ ಬಗ್ಗೆ ಡಿಸಿಎಂ ಚರ್ಚೆ ನಡೆಸಿದರು. 

ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಡಾ.ಅಶ್ವತ್ಥನಾರಾಯಣ್ ಈ ಕಟ್ಟಡ ಬೆಂಗಳೂರು ಮಾತ್ರವಲ್ಲದೆ ಇಡೀ ನಾಡಿನ ಹೆಮ್ಮೆ. ಇದೊಂದು ಅಪರೂಪದ, ಸಂರಕ್ಷಣೆ  ಮಾಡಿ ಕೊಳ್ಳಲೇಬೇಕಾದ ಕಟ್ಟಡ. ಇದನ್ನು ಸಂರಕ್ಷಣೆ ಮಾಡಿ ಜೀರ್ಣೋದ್ಧಾರ ಮಾಡಲು ಜೈನ್‌ ಶಿಕ್ಷಣ ಸಂಸ್ಥೆ ಮುಂದೆ ಬಂದಿರುವುದು ಸಂತಸದ ಸಂಗತಿ ಎಂದರು. 

ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳ ಕೌಶಲ್ಯ ವೃದ್ಧಿಗೆ ತಾಂತ್ರಿಕ ಶಿಕ್ಷಣ ಇಲಾಖೆ- ಕೈಗಾರಿಕೆ ಸಂಸ್ಥೆ ಜತೆ ಒಪ್ಪಂದ

ಕೆಲ ದಿನಗಳ ಹಿಂದೆ ಜೈನ್‌ ಸಂಸ್ಥೆಯ 30ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಆ ಸಂದರ್ಭದಲ್ಲಿ ಈ ಕಟ್ಟಡವೂ ಸೇರಿ ಹಾಗೂ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಕಲ್ಲು ಕಟ್ಟಡದ ಅಭಿವೃದ್ಧಿ ಮಾಡಿಕೊಡುವಂತೆ ಕೋರಿಕೆ ಸಲ್ಲಿಸಿದೆ. ಸಂಸ್ಥೆಯ ಅಧ್ಯಕ್ಷರು ತಕ್ಷಣವೇ ಸಕಾರಾತ್ಮಕವಾಗಿ ಸ್ಪಂದಿಸಿದರಲ್ಲದೆ, ಇವತ್ತು ಕಟ್ಟಡ ವೀಕ್ಷಿಸಲು ಬಂದಿದ್ದಾರೆ ಎಂದು ಡಿಸಿಎಂ ಹೇಳಿದರು. 

ಇನ್ನೂ ನೂರಾರು ವರ್ಷ ಈ ಐತಿಹಾಸಿಕ ಕಟ್ಟಡವನ್ನು ಉಳಿಸಿಕೊಳ್ಳಬೇಕಾಗಿದೆ. ಇದು ನಮ್ಮ ಪರಂಪರೆಯ ಹೆಗ್ಗುರುತು. ಇಡೀ ಕಟ್ಟಡವನ್ನು ಜೈನ್‌ ಸಮೂಹ ತಮ್ಮ ಸ್ವಂತ ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿದೆ. ಜತೆಗೆ, ಇದೇ ರೀತಿ ಮತ್ತೊಂದು ಕಟ್ಟಡ ಆಗಿರುವ ರೇಸ್‌ಕೋರ್ಸ್ ರಸ್ತೆಯ ಆರ್.‌ಸಿ.ಕಾಲೇಜು ಕಲ್ಲು ಕಟ್ಟಡವನ್ನು ಅಭಿವೃದ್ಧಿಪಡಿಸಬೇಕು ಎಂದು ಮನವಿ ಮಾಡಲಾಗಿದೆ. ಅದಕ್ಕೂ ಜೈನ್‌ ಸಮೂಹ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಡಿಸಿಎಂ ಹೇಳಿದರು. 

ಪದವಿ, ಡಿಪ್ಲೊಮೊ ಪರೀಕ್ಷೆಗೆ ಡೆಡ್‌ಲೈನ್, ಕಾಲೇಜು ಆರಂಭದ ಬಗ್ಗೆಯೂ ಡಿಸಿಎಂ ಮಾಹಿತಿ

ರೀಬಿಲ್ಡ್‌ ಎನ್ನುವ ಸಂಸ್ಥೆ ಈಗ ಇಡೀ ಯಾವ ರೀತಿ ಈ ಕಟ್ಟಡವನ್ನು ರಕ್ಷಿಸಬೇಕು ಮತ್ತು ಅಭಿವೃದ್ಧಿಪಡಿಸಬೇಕು ಎಂದು ಪರಿಶೀಲನೆ ಮಾಡುತ್ತಿದೆ. ಈ ಕ್ಷೇತ್ರದಲ್ಲಿ ಆ ಸಂಸ್ಥೆ ಬಹಳಷ್ಟು ಪರಿಣಿತಿ ಹೊಂದಿದೆ. ಈಗಾಗಲೇ 13ನೇ ಕ್ರಾಸ್‌ನಲ್ಲಿ ಇದೇ ರೀತಿಯ ಪಾರಂಪರಿಕ ಕಟ್ಟಡವನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ. ಯಶಸ್ವಿನಿ ಎಂಬ ಆರ್ಕಿಟೆಕ್ಟ್‌ ಇದಾರೆ. ಅವರು ಈ ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡುತ್ತಿದ್ದಾರೆಂದರು ಡಿಸಿಎಂ.

click me!