ಹಾವೇರಿ: 'ಕೊರೋನಾ ತಡೆಗಟ್ಟಲು ಮಾರ್ಗಸೂಚಿ ಕಡ್ಡಾಯ ಪಾಲಿಸಿ'

By Kannadaprabha NewsFirst Published Jul 2, 2020, 7:55 AM IST
Highlights

ಕೊರೋನಾ ವೈರಸ್‌ ಸೋಂಕಿನಿಂದ ಸಂಭವಿಸಬಹುದಾದ ಅನಾಹುತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸರ್ಕಾರದ ಮಾರ್ಗಸೂಚಿ ಪಾಲಿಸಿ: ಜಿಲ್ಲಾ​ಧಿ​ಕಾರಿ ಕೃಷ್ಣ ಬಾಜ​ಪೇಯಿ ಆದೇ​ಶ| ಕಂಟೈ​ನ್‌​ಮೆಂಟ್‌ ಪ್ರದೇ​ಶ​ದಿಂದ ಜನ ಹೊರ ಹೋಗು​ವು​ದಕ್ಕೆ ನಿಷೇ​ಧ|

ಹಾವೇರಿ(ಜು.02): ಜಿಲ್ಲೆಯಲ್ಲಿ ಕೊರೋನಾ ವೈರಸ್‌ ಸೋಂಕಿನಿಂದ ಸಂಭವಿಸಬಹುದಾದ ಅನಾಹುತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸರ್ಕಾರದ ಮಾರ್ಗಸೂಚಿಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೃಷ್ಣ ಬಾಜಪೇಯಿ ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕ ಸ್ಥಳಗಳು ಹಾಗೂ ಕೆಲಸದ ಸ್ಥಳಗಳಲ್ಲಿ ಕಡ್ಡಾಯವಾಗಿ ಎಲ್ಲರೂ ಮಾಸ್ಕ್‌ ಧರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ವಾಹನಗಳಲ್ಲಿ ಪ್ರಯಾಣಿಸುವ ಸಂದರ್ಭಗಳಲ್ಲಿ ಹಾಗೂ ವಿವಾಹ ಕಾರ್ಯಕ್ರಮ, ಶವ ಸಂಸ್ಕಾರ ಸಂದರ್ಭದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ವಿವಾಹಕ್ಕೆ ಅನುಮತಿ ಕೋರಿ ತಹಸೀಲ್ದಾರಗೆ ಅರ್ಜಿ ಸಲ್ಲಿಸುವಾಗ ಮುಚ್ಚಳಿಕೆ ಸಲ್ಲಿಸುವುದು ಕಡ್ಡಾಯವಾಗಿದೆ. ಶವ ಸಂಸ್ಕಾರದಲ್ಲಿ 20 ಜನಕ್ಕಿಂತ ಹೆಚ್ಚು ಜನ ಸೇರುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಮದ್ಯಪಾನ, ಪಾನ್‌ ಬೀಡಾ, ಗುಟಕಾ ಹಾಗೂ ತಂಬಾಕು ಸೇವನೆ ನಿಷೇಧಿಸಲಾಗಿದೆ. ಮದ್ಯಮಾರಾಟ ಅಂಗಡಿ, ಪಾನ್‌, ಗುಟಕಾ, ತಂಬಾಕು ಮಾರಾಟದ ಅಂಗಡಿಗಳ ಬಳಿ ಸಾರ್ವಜನಿಕರು ಕನಿಷ್ಠ 6 ಅಡಿ ಅಂತರ ಕಾಪಾಡುವುದು ಹಾಗೂ ಅಂಗಡಿಗಳ ಬಳಿ ಐದಕ್ಕಿಂತ ಹೆಚ್ಚಿನ ಜನತೆ ನಿಲ್ಲದಂತೆ ಮಾಲೀಕರು ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ.

ಹಾವೇರಿಯಲ್ಲಿ ಕೊರೋನಾಕ್ಕೆ ಇಬ್ಬರು ವೃದ್ಧೆಯರು ಬಲಿ: 49 ಪಾಸಿಟಿವ್‌

ಕಂಟೈನಮೆಂಟ್‌ ಜೋನ್‌ಗಳಲ್ಲಿ ಶಾಲಾ- ಕಾಲೇಜುಗಳು, ವಿವಿಧ ತರಬೇತಿ ಸಂಸ್ಥೆ ಆರಂಭಿಸುವುದನ್ನು ಜು. 31ರವರೆಗೆ ನಿಷೇಧಿಸಲಾಗಿದೆ. ಆದರೆ ಆನ್‌ಲೈನ್‌ ಶಿಕ್ಷಣ ಕೊಡಬಹುದಾಗಿದೆ ಎಂದು ತಿಳಿಸಿದ್ದಾರೆ. ಕಂಟೈನ್‌ಮೆಂಟ್‌ ಪ್ರದೇಶಗಳಲ್ಲಿ ಅಗತ್ಯ ವಸ್ತು ಮತ್ತು ಸೇವೆಗಳನ್ನು ಹೊರತುಪಡಿಸಿ ಎಲ್ಲಾ ರೀತಿಯ ಚಟವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಆದರೆ ಕಂಟೈನ್‌ಮೆಂಟ್‌ ವಲಯಗಳಲ್ಲಿ ವಾಸಿಸುತ್ತಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆಯ ಮಾರ್ಗಸೂಚಿಯಂತೆ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ. ವೈದ್ಯಕೀಯ ತುರ್ತು ಸ್ಥಿತಿಗಳನ್ನು ಹೊರತುಪಡಿಸಿ ಅಗತ್ಯ ಸರಕು ಮತ್ತು ಸೇವೆಗಳ ಪೂರೈಕೆಗೆ ಅವಕಾಶ ಕಲ್ಪಿಸಲಾಗಿದೆ. ಜನರು ಈ ಪ್ರದೇಶದಿಂದ ಹೊರ ಹೋಗುವುದನ್ನು ನಿಷೇಧಿಸಲಾಗಿದೆ.

ರಾತ್ರಿ ಕರ್ಫ್ಯೂ:

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕಳೆದ ಜೂ. 30ರ ಮಧ್ಯರಾತ್ರಿಯಿಂದ ಆ. 2ರ ಮಧ್ಯರಾತ್ರಿವರೆಗೆ ಜಿಲ್ಲೆಯಾದ್ಯಂತ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಕರ್ಫ್ಯೂ ಅವಧಿಯಲ್ಲಿ ಅತ್ಯಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದಂತೆ ವ್ಯಕ್ತಿಗಳ ಚಲನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ಬರುವ ಎಲ್ಲ ಭಾನುವಾರಗಳ ದಿನ ಜಿಲ್ಲೆಯಾದ್ಯಂತ ಪೂರ್ಣ ದಿನದ ಲಾಕ್‌ಡೌನ್‌ ಜಾರಿಮಾಡಲಾಗಿದೆ. ಈ ಕರ್ಫ್ಯೂ ದಿನ ಅಗತ್ಯ ಸರಕು ಸಾಗಾಣಿಕೆ ಹೊರತುಪಡಿಸಿ ಉಳಿದ ಎಲ್ಲ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ರಾಜ್ಯ ಸರ್ಕಾರದ ತುರ್ತು ಸೇವೆಗಳಲ್ಲಿ ತೊಡಗಿರುವ ಇಲಾಖೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಇಲಾಖೆ, ನಿಗಮ ಮಂಡಳಿಗಳು ಶನಿವಾರದ ದಿನ ಕಚೇರಿ ಆರಂಭ ಮಾಡದಂತೆ ಸೂಚನೆ ನೀಡಿದ್ದಾರೆ.

ಆರೋಗ್ಯ ಸೇತು ಆ್ಯಪ್‌ ಬಳಕೆ

ಪ್ರತಿಯೊಬ್ಬ ಸಾರ್ವಜನಿಕರು ಆರೋಗ್ಯ ಸೇತು ಆ್ಯಪ್‌ನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಸೋಂಕಿನ ಸಂಭವನೀಯ ಅಪಾಯವನ್ನು ಮೊದಲೇ ಗುರುತಿಸಲು ಈ ಆ್ಯಪ್‌ನಿಂದ ಅನುಕೂಲವಾಗಲಿದ್ದು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ನೌಕರರು, ಅಧಿಕಾರಿಗಳು, ಮುಖ್ಯಸ್ಥರು ಕಡ್ಡಾಯವಾಗಿ ಆ್ಯಪ್‌ಗಳನ್ನು ಬಳಕೆ ಮಾಡಬೇಕು. ಮುಖ್ಯಸ್ಥರು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ.

ಕೊರೋನಾ ನಿರ್ವಹಣೆಯ ಲಾಕ್‌ಡೌನ್‌ ಕ್ರಮಗಳನ್ನು ರಾಷ್ಟ್ರೀಯ ನಿರ್ದೇಶನಗಳನ್ನು ಉಲ್ಲಂಘಿಘಿಸುವ ಯಾವುದೇ ವ್ಯಕ್ತಿಯ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆ ಅಡಿಯಲ್ಲಿನ ಕಾನೂನು ಕ್ರಮಕೈಗೊಳ್ಳಲಾಗುವುದು ಹಾಗೂ ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಧಗಳ ಮೇರೆಗೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
 

click me!