ಅಕ್ರಮ ಸಂಬಂಧವನ್ನು ಅತ್ತೆ ಕಣ್ಣಾರೆ ಕಂಡಳು : ಕತ್ತು ಹಿಸುಕಿ ಕೊಂದಳು ಸೊಸೆ

By Kannadaprabha NewsFirst Published Dec 1, 2020, 3:25 PM IST
Highlights

ಸೊಸೆ ಪ್ರಿಯಕರನ ಜೊತೆ ಇರುವುದನ್ನು ಕಣ್ಣಾರೆ ಕಂಡಿದ್ದಕ್ಕೆ ಗಂಡನ ತಾಯಿಯನ್ನೇ ಅವನ ಜೊತೆ ಸೇರಿ ಕೊಂದು ಹಾಕಿದಳು ಸೊಸೆ. ನಂತರ ಅನೇಕ ದಿನಗಳ ಬಳಿಕ ಈ ಕೇಸ್ ಬಯಲಾಯ್ತು.

 ನ್ಯಾಮತಿ (ಡಿ.01):  ತಾಲೂಕಿನ ಒಡೆಯರ ಹತ್ತೂರು ಗ್ರಾಮದಲ್ಲಿ ಅತ್ತೆಯನ್ನು ಸೊಸೆ ತನ್ನ ಪ್ರಿಯಕರನೊಂದಿಗೆ ಸೇರಿ ಕತ್ತು ಹಿಸುಕಿ ಕೊಲೆ ಮಾಡಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಗ್ರಾಮದ ರತ್ನಮ್ಮ (57) ಕೊಲೆಯಾದ ಮಹಿಳೆಯಾಗಿದ್ದು, ಅಕ್ರಮ ಸಂಬಂಧದ ವಿಷಯ ತನ್ನ ಅತ್ತೆಗೆ ಗೊತ್ತಾಯಿತು ಎಂದು ಸೊಸೆ ಕವಿತಾ ಅತ್ತೆ ರತ್ನಮ್ಮಳ ಕತ್ತು ಹಿಸುಕಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸದಂತೆ 20 ದಿನಗಳ ನಂತರ ಹೂತ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ರತ್ನಮ್ಮನ ಮಗ ಹರೀಶ್‌ ಬೆಂಗಳೂರಿನ ಪತ್ರಿಕಾ ಕಚೇರಿಯಲ್ಲಿ ಕೆಲಸ ಮಾಡಿಕೊಂಡಿದ್ದು ಕೊರೋನಾ ಹಿನ್ನೆಲೆ ತನ್ನ ಹೆಂಡತಿ ಕವಿತಾ ಹಾಗೂ ಮಗಳನ್ನು ತನ್ನ ತಾಯಿ ಮನೆಯಲ್ಲಿ ಬಿಟ್ಟಿದ್ದರು. ಇದೇ ಗ್ರಾಮದ ಆನಂದ್‌ ಎಂಬುವನು ರತ್ನಮ್ಮನ ಮನೆಗೆ ಆಗಾಗ ಬಂದು ಹೋಗುತ್ತಿದ್ದರು. ಈ ಸಲಿಗೆ ಕವಿತಾ ಮತ್ತು ಆನಂದ ನಡುವೆ ಸ್ನೇಹವಾಗಿ ಪ್ರೀತಿಗೆ ತಿರುಗಿತ್ತು. ಒಂದು ದಿನ ಆನಂದ್‌ ಜೊತೆಯಲ್ಲಿ ತನ್ನ ಸೊಸೆ ಕವಿತಾ ಇರುವುದನ್ನು ರತ್ನಮ್ಮ ನೋಡಿದ್ದರು. 

ಶಿಕ್ಷಕನ ಹೆಂಡ್ತಿ ಲವ್ವಿ-ಡವ್ವಿ : ಹೊಳೆದಂಡೇಲಿ ಅವನ ಜೊತೆ ಸಿಕ್ಕಿಬಿದ್ದು ದಾರುಣ ಅಂತ್ಯ ...

ತನ್ನ ಅಕ್ರಮ ಸಂಬಂಧ ಬಯಲಾಗುತ್ತದೆ ಎಂದು ಸೊಸೆ ಕವಿತಾ ಪ್ರಿಯಕರ ಆನಂದ್‌ ಜೊತೆಗೂಡಿ ಕತ್ತು ಹಿಸುಕಿ ಅತ್ತೆ ರತ್ನಮ್ಮಳನ್ನು ಕೊಲೆ ಮಾಡಿದ್ದರು. ಬೆಳಗ್ಗೆ ಹರೀಶನಿಗೆ ರತ್ನಮ್ಮ ಸಾವು ಕಂಡಿದ್ದಾಗಿ ತಿಳಿಸಿದ್ದರು.

ಸಹಜ ಸಾವೆಂದು ನಂಬಿದ ಹರೀಶ್‌ ರತ್ನಮ್ಮಳ ಅಂತ್ಯಕ್ರಿಯೆ ಮಾಡಿದ್ದರು. ಇತ್ತ ಗ್ರಾಮದ ಜನರು ಹರೀಶನಿಗೆ ಕವಿತಾ ಅಕ್ರಮ ಸಂಬಂಧ ಇರುವ ಬಗ್ಗೆ ತಿಳಿಸಿದ್ದಾರೆ. ನಂತರ ಹರೀಶ್‌ ನ್ಯಾಮತಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಹೊನ್ನಾಳಿ ಸಿಪಿಐ ದೇವರಾಜ್‌ ನೇತೃತ್ವದಲ್ಲಿ ತಂಡ ರಚಿಸಿಕೊಂಡು ಆರೋಪಿ ಆನಂದ್‌ ಬಂಧಿಸಿ ತನಿಖೆ ನಡೆಸಿದ್ದರು.

ತನಿಖೆ ಮುಂದುವರಿದಂತೆ ಎಸಿ ಸೂಚನೆ ಮೇರೆಗೆ ಜೆಜೆಎಂ ಕಾಲೇಜಿನ ಪ್ರೊಫೆಸರ್‌ ಡಾ.ಸಿ.ಎನ್‌. ಸಂತೋಷ, ಒಡೆಯರ ಹತ್ತೂರು ಆರೋಗ್ಯ ಕೇಂದ್ರದ ಡಾ.ಪಾಟೀಲ್‌, ನ್ಯಾಮತಿ ಸಮುದಾಯ ಆಸ್ಪತ್ರೆ ಆಡಳಿತಾಧಿಕಾರಿ ಡಾ.ರೇಣುಕಾನಂದ ಮೆಣಸಿನಕಾಯಿ, ತಹಸೀಲ್ದಾರ್‌ ತನುಜಾ ಟಿ. ಸವದತ್ತಿ ಶವದ ಅಸ್ಥಿಗಳನ್ನು ಸಂಗ್ರಹಿಸಿ ಮರಣೋತ್ತರ ಪರೀಕ್ಷೆ ನಡೆಸಲು ಕ್ರಮ ಕೈಗೊಂಡಿದ್ದರು.

ಆರೋಪಿ ಆನಂದ್‌ ಹಾಗೂ ಕವಿತಾರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಪೊಲೀಸರು ಈ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

click me!