Chikkamagaluru : 28ರಂದು ದತ್ತಮಾಲಾ ಅಭಿಯಾನಕ್ಕೆ ಚಾಲನೆ

By Kannadaprabha NewsFirst Published Nov 26, 2022, 1:24 PM IST
Highlights
  • ದತ್ತ ಜಯಂತಿ: 28ರಂದು ದತ್ತಮಾಲಾ ಅಭಿಯಾನಕ್ಕೆ ಚಾಲನೆ
  • ಡಿ.6ರಿಂದ 3 ದಿನ ದತ್ತಜಯಂತಿ ಉತ್ಸವ, ಚಿಕ್ಕಮಗಳೂರಿನಲ್ಲಿ ಡಿ.7ರಂದು ಶೋಭಾಯಾತ್ರೆ: ರಘು ಸಕಲೇಶಪುರ ಮಾಹಿತಿ

ಚಿಕ್ಕಮಗಳೂರು (ನ.26) : ವಿಶ್ವ ಹಿಂದೂ ಪರಿಷತ್‌ ಹಾಗೂ ಭಜರಂಗದಳದ ಆಶ್ರಯದಲ್ಲಿ ನಡೆಯಲಿರುವ ದತ್ತಜಯಂತಿ ಅಂಗವಾಗಿ ನ.28 ರಂದು ದತ್ತಮಾಲೆಯನ್ನು ಧರಿಸಲಾಗುವುದು ಎಂದು ಬಜರಂಗದಳದ ಪ್ರಾಂತ ಸಹ ಸಂಚಾಲಕ ರಘು ಸಕಲೇಶಪುರ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.28ರಂದು ಬೆಳಗ್ಗೆ 9.15ರ ವೇಳೆಗೆ ನಗರದ ಶ್ರೀ ಕಾಮಧೇನು ಗಣಪತಿ ದೇವಾಲಯದಲ್ಲಿ ಗಣಪತಿ ಹೋಮದ ನಂತರ ದತ್ತಮಾಲೆಯನ್ನು ಧರಿಸಲಾಗುವುದು ಎಂದು ಹೇಳಿದರು.

CHIKKAMAGALURU: ಫಾರೆಸ್ಟ್ ಆಫೀಸ್ ಪುಡಿ ಪುಡಿ​: ಕಳ್ಳಬೇಟೆ ನಿಗ್ರಹ ಶಿಬಿರವನ್ನ ಧ್ವಂಸ ಮಾಡಿದ ಜನ

ಅಂದು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ದತ್ತ ಭಕ್ತರು, ಭಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್‌ ಕಾರ್ಯಕರ್ತರು ದತ್ತಮಾಲೆಯನ್ನು ಧರಿಸಲಿದ್ದಾರೆ. ಮೂರು ದಿನಗಳ ದತ್ತಜಯಂತಿ ಕಾರ್ಯಕ್ರಮಕ್ಕೆ ಡಿ. 6 ರಂದು ಚಾಲನೆ ನೀಡಲಾಗುವುದು. ಅಂದು ನಗರದ ಶ್ರೀ ಬೋಳರಾಮೇಶ್ವರ ದೇವಸ್ಥಾನದಿಂದ ಐ.ಜಿ. ರಸ್ತೆ ಮುಖಾಂತರ ಶ್ರೀ ಕಾಮಧೇನು ಗಣಪತಿ ದೇವಾಲಯದವರೆಗೆ ಮಾತೆಯರು ಮೆರವಣಿಗೆಯಲ್ಲಿ ತೆರಳಲಿದ್ದಾರೆ. ಬಳಿಕ ಅವರು ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ಹಾಗೂ ಅನಸೂಯ ಮಾತೆಯ ಗದ್ದುಗೆ ದರ್ಶನ ಪಡೆಯಲಿದ್ದಾರೆ ಎಂದು ಹೇಳಿದರು.

ಡಿ.7ರಂದು ಚಿಕ್ಕಮಗಳೂರಿನಲ್ಲಿ ಶೋಭಾಯಾತ್ರೆ ನಡೆಯಲಿದೆ. ಅಂದು ಶ್ರೀಕಾಮಧೇನು ಗಣಪತಿ ದೇವಸ್ಥಾನದಿಂದ ಹೊರಡಲಿರುವ ಶೋಭಾಯಾತ್ರೆ ಕೆಇಬಿ ವೃತ್ತ, ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ. ರಸ್ತೆಯ ಮೂಲಕ ಆಜಾದ್‌ ಪಾರ್ಕ್ ವೃತ್ತಕ್ಕೆ ತಲುಪಲಿದೆ. ಸುಮಾರು 23 ಕಲಾ ತಂಡಗಳು ಭಾಗವಹಿಸಲಿವೆ. ಬಳಿಕ ಅದೇ ಸ್ಥಳದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.

ಮಂಗಳೂರಿನ ಗುರುಪುರದ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಶಂಕರ ದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್‌ನ ಅಖಿಲ ಭಾರತೀಯ ಕಾರ್ಯದರ್ಶಿ ಜಿ.ಅಂಬರೇಶ್‌ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ವಿಎಚ್‌ಪಿ ಜಿಲ್ಲಾಧ್ಯಕ್ಷ ಶ್ರೀಕಾಂತ್‌ ಪೈ ಅಧ್ಯಕ್ಷತೆ ವಹಿಸಲಿದ್ದು, ವಿಎಚ್‌ಪಿ ಸಂಘಟನಾ ಕಾರ್ಯದರ್ಶಿ ಬಸವರಾಜ್‌, ಭಜರಂಗಳದ ಪ್ರಾಂತ ಸಂಯೋಜಕ ಕೆ.ಆರ್‌. ಸುನೀಲ್‌ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಡಿ.8ರಂದು ಪೀಠದಲ್ಲಿ ದತ್ತ ಜಯಂತ್ಯುತ್ಸವ ನಡೆಯಲಿದೆ. ರಾಜ್ಯದ ವಿವಿಧೆಡೆಯಿಂದ ಸಾವಿರಾರು ದತ್ತಭಕ್ತರು ಆಗಮಿಸಲಿದ್ದಾರೆ. ಇಲ್ಲಿನ ಪವಿತ್ರ ದತ್ತಪಾದುಕೆ ಮತ್ತು ಅನಸೂಯ ದೇವಿ ದರ್ಶನ ಪಡೆಯಲಿದ್ದಾರೆ. ಅನಂತರ ನಡೆಯಲಿರುವ ಹೋಮ, ಹವನಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.\

ಚಿಕ್ಕಮಗಳೂರು: ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ವಿವಾದ, ಸರ್ಕಾರದಿಂದ ಮಹತ್ವದ ಆದೇಶ

ದತ್ತಪೀಠಕ್ಕೆ ವ್ಯವಸ್ಥಾಪನಾ ಸಮಿತಿಯನ್ನು ರಚಿಸಿರುವ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ಅವರು, ಇದು ವಿಶ್ವ ಹಿಂದೂ ಪರಿಷತ್ತು ಹಾಗೂ ಭಜರಂಗದಳ ನಡೆಸಿರುವ ಹೋರಾಟಕ್ಕೆ ಸಂದ ಜಯ. ಕೂಡಲೇ ಹಿಂದೂ ಅರ್ಚಕರನ್ನು ನೇಮಕ ಮಾಡಬೇಕು. ದತ್ತ ಜಯಂತಿ ದಿನದಂದು ಹಿಂದೂ ಆರ್ಚಕರಿಂದ ಪೂಜೆ ಆಗಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ತು ಜಿಲ್ಲಾಧ್ಯಕ್ಷ ಶ್ರೀಕಾಂತ್‌ ಪೈ, ಉಪಾಧ್ಯಕ್ಷ ಯೋಗೇಶ್‌ ರಾಜ್‌ ಅರಸ್‌, ಕಾರ್ಯದರ್ಶಿ ಆರ್‌.ಡಿ.ಮಹೇಂದ್ರ, ಭಜರಂಗದಳದ ಜಿಲ್ಲಾ ಸಹ ಸಂಯೋಜಕ ಅಮಿತ್‌ ಗೌಡ ಉಪಸ್ಥಿತರಿದ್ದರು.

ದತ್ತಪೀಠದಲ್ಲಿ ಹೋಮ ನಡೆಸಲು ನಿರ್ಮಾಣ ಮಾಡಲಾಗಿದ್ದ ಶೆಡ್‌ನಲ್ಲಿ ಮಾಂಸದ ಅಡುಗೆ ಮಾಡಿ ಅಪವಿತ್ರಗೊಳಿಸಲಾಗಿದೆ. ಆದ್ದರಿಂದ ಈ ಬಾರಿ ದತ್ತಜಯಂತಿ ಸಂದರ್ಭದಲ್ಲಿ ಆ ಸ್ಥಳದಲ್ಲಿ ಹೋಮ, ಹವನ ನಡೆಸುವ ಬದಲಿಗೆ ದತ್ತಪೀಠದ ಬಳಿ ಇರುವ ತುಳಸಿ ಕಟ್ಟೆಯಲ್ಲಿ ಪೂಜಾ ಕಾರ್ಯವನ್ನು ನೆರವೇರಿಸಲಾಗುವುದು

- ರಘು ಸಕಲೇಶಪುರ, ಪ್ರಾಂತ ಸಹ ಸಂಚಾಲಕ

click me!