
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಮೇ.14): ತಾಲೂಕಿನ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ವಿವಾದವು ಮತ್ತೆ ಮುನ್ನಲೆಗೆ ಬಂದಿದೆ. ಸದಾ ಒಂದಿಲ್ಲೊಂದು ವಿವಾದದಿಂದಲೇ ಸುದ್ದಿ ಆಗುವ ದತ್ತಪೀಠ ವಿವಾದ ಇದೀಗ ಮತ್ತೆ ಸದ್ದು ಮಾಡುತ್ತಿದೆ. ದತ್ತ ಪೀಠದಲ್ಲಿರುವ ಔದಂಬರ ವೃಕ್ಷಕ್ಕೆ ಪೂಜೆ ಸಲ್ಲಿಸದಂತೆ ಮರದ ಸುತ್ತಲೂ ಜಿಲ್ಲಾಡಳಿತ ಬೇಲಿ ಹಾಕಿದೆ ಅಂತ ಹಿಂದೂ ಪರ ಸಂಘಟನೆಗಳು ಆರೋಪ ಮಾಡುತ್ತಿವೆ. ಇಲ್ಲಿ ಪೂಜೆ ಸಲ್ಲಿಸಲು ನ್ಯಾಯಾಲಯ ಅಥವಾ ಧಾರ್ಮಿಕ ದತ್ತಿ ಇಲಾಖೆ ನಿಷೇಧ ಹೇರಿಲ್ಲ ಆದರೂ ನಮಗೆ ಜಿಲ್ಲಾಡಳಿತ ಪೂಜೆಗೆ ಅವಕಾಶ ನೀಡಿಲ್ಲ ಅಂತ ಹಿಂದೂ ಕಾರ್ಯಕರ್ತರು ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ಹೊರ ಹಾಕುತ್ತಿದ್ದಾರೆ.
ಪೂಜೆ ಸಲ್ಲಿಸಲು ಯಾಕೆ ಅವಕಾಶ ಇಲ್ಲ?: ಇದೆ ಸ್ಥಳದಲ್ಲಿ ಮುಸಲ್ಮಾನರಿಗೆ ಮಾತ್ರ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗುತ್ತಿದೆ, ಆದರೆ ನಮಗೆ ಪೂಜೆ ಸಲ್ಲಿಸಲು ಯಾಕೆ ಅವಕಾಶ ಇಲ್ಲ? ಇದು ಯಾವ ನ್ಯಾಯ ಅಂತ ಪ್ರಶ್ನಿಸುತ್ತಿದ್ದಾರೆ. ಜೊತೆಗೆ ದತ್ತ ಪೀಠದಲ್ಲಿ ಮುಜರಾಯಿ ಇಲಾಖೆ ಹೊರತುಪಡಿಸಿ ಬೇರೆ ಯಾರು ಕಾಣಿಕೆ ಡಬ್ಬ ಇಡುವಂತಿಲ್ಲ ಆದರೂ ಅಲ್ಲಿ ಹಸಿರು ಬಟ್ಟೆ ಹಾಸಿ ಕಾಣಿಕೆ ಡಬ್ಬ ಇಟ್ಟು ಹಣ ಸಂಗ್ರಹಿಸಲಾಗುತ್ತಿದೆ ಇದರಿಂದ ದತ್ತಪೀಠದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ ಅಂತನೂ ಹಿಂದೂ ಕಾರ್ಯಕರ್ತರಾದ ರಂಗನಾಥ್ ಆರೋಪಿಸುತ್ತಿದ್ದಾರೆ.
ಜಿಲ್ಲಾಡಳಿತದ ವಿರುದ್ದ ಆಕ್ರೋಶ: ಇನ್ನು ದತ್ತಪೀಠದ ವ್ಯಾಪ್ತಿಯಲ್ಲಿರುವ ಮಾಣಿಕ್ಯಧಾರ ಬಳಿ ಅನಧಿಕೃತ ಅಂಗಡಿಗಳು ಹೆಚ್ಚಾಗಿವೆ. ಅಲ್ಲಿ ಮಾಂಸಹಾರವನ್ನು ತಯಾರು ಮಾಡುತ್ತಿರುವುದರಿಂದ ಮಾಣಿಕ್ಯಧಾರದಲ್ಲಿ ಸ್ನಾನ ಮಾಡುವವರ ಧಾರ್ಮಿಕ ನಂಬಿಕೆಗೆ ಧಕ್ಕೆ ತರಲಾಗುತ್ತಿದೆ. ಜೊತೆಗೆ ದತ್ತಪೀಠಕ್ಕೆ ಆಗಮಿಸುವ ಪ್ರವಾಸಿಗರನ್ನು ಅಲ್ಲಿನ ಜೀಪ್ ಚಾಲಕರು ಹೆಚ್ಚಿನ ಜನರನ್ನು ಕೂರಿಸಿಕೊಂಡು ಓವರ್ ಲೋಡ್ ಮಾಡಿ ಪ್ರವಾಸಿಗರಿಂದ ಹೆಚ್ಚಿನ ವಸೂಲಿ ಮಾಡಲಾಗುತ್ತಿದೆ ಇದೆಕ್ಕೆಲ್ಲ ಜಿಲ್ಲಾಡಳಿತ ಕಡಿವಾಣ ಹಾಕಬೇಕೆಂದು ಹಿಂದೂ ಪರ ಸಂಘಟನೆಯ ಕಾರ್ಯಕರ್ತರ ಒತ್ತಾಯಿಸಿದ್ದಾರೆ.
ಸುಳ್ಳುಗಳ ಸರಮಾಲೆ, ಆರೋಪಗಳೇ ಬಿಜೆಪಿಗರ ಜಾಯಮಾನ: ಸಚಿವ ಕೆ.ಜೆ.ಜಾರ್ಜ್
ಒಟ್ಟಾರೆ ದಶಕಗಳಿಂದ ದತ್ತಪೀಠ ವಿವಾದ ನ್ಯಾಯಾಲಯದಲ್ಲಿದ್ದು ಇದಕ್ಕೆ ಬ್ರೇಕ್ ಬೀಳುವ ಲಕ್ಷಣವಂತೂ ಗೋಚರಿಸುತ್ತಿಲ್ಲ. ಇದೀಗ ಹಿಂದೂ ಪರ ಕಾರ್ಯಕರ್ತರು ಔದಂಬರ ವೃಕ್ಷದ ಪೂಜೆಯ ವಿಚಾರವಾಗಿ ಜಿಲ್ಲಾಡಳಿತದ ಕಡೆಗೆ ಬೊಟ್ಟು ಮಾಡುತ್ತಿದ್ದು ಇದು ಎಲ್ಲಿಗೆ ಹೋಗಿ ನಿಲ್ಲುತ್ತೆ ಅಂತ ಕಾದು ನೋಡಬೇಕಿದೆ.