ಚಿಕ್ಕಮಗಳೂರಿನಲ್ಲಿ ಧರ್ಮದಂಗಲ್‌ ಆರಂಭ, ಬೂದ್ ಷಾ ದರ್ಗಾ ಅಲ್ಲ ದೇವಾಲಯವೆಂದು ವಾದ!

By Suvarna NewsFirst Published Mar 13, 2023, 5:11 PM IST
Highlights

ಹಿಂದೂಗಳು ಚಂದ್ರಮೌಳೇಶ್ವರ ದೇವಾಲಯ ಅಂದ್ರೆ ಮುಸ್ಲಿಂರು  ಹಜರತ್ ಸೈಯದ್ ಬೂದ್ ಷಾ ದರ್ಗಾ ಎನ್ನುವ ಚರ್ಚೆ ಚಿಕ್ಕಮಗಳೂರಿನಲ್ಲಿ ಆರಂಭವಾಗಿದ್ದು, ದರ್ಗಾದ ನವೀಕರಣ , ಗುಂಬಜ್  ಕಾಮಗಾರಿಗೆ ಹಿಂದೂ ಸಂಘಟನೆಗಳ ವಿರೋಧ ವ್ಯಕ್ತವಾಗಿದೆ.  ಹಿಂದೂ ಮುಸ್ಲಿಂರ ಭಾವೈಕ್ಯತೆ ಕೇಂದ್ರದಲ್ಲಿ ಧರ್ಮ ದಂಗಲ್ ಆರಂಭವಾಗಿದೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ 

ಚಿಕ್ಕಮಗಳೂರು (ಮಾ.13): ಕಾಫಿನಾಡು ಚಿಕ್ಕಮಗಳೂರಲ್ಲಿ ದತ್ತಪೀಠದ ವಿವಾದವೇ ಇನ್ನೂ ಕೊನೆಗೊಂಡಿಲ್ಲ. ಈ ಮಧ್ಯೆ ಕಾಫಿನಾಡು ಮತ್ತೊಂದು ಸುತ್ತಿನ ಧರ್ಮ ದಂಗಲ್‍ಗೆ ಅಣಿಯಾಗುತ್ತಿದ್ಯಾ ಎಂಬ ಅನುಮಾನ ವ್ಯಕ್ತವಾಗಿದ್ದು, ವೇದಿಕೆ ಕೂಡ ರೆಡಿಯಾಗ್ತಿದೆ. ಚಿಕ್ಕಮಗಳೂರು ತಾಲೂಕಿನ ಕಟ್ಟೆಗದ್ದೆ ಗ್ರಾಮದಲ್ಲಿರುವ ಹಜರತ್ ಸಯೈದ್ ಬೂದ್ ಶಾ ದರ್ಗಾ ಈಗ ಹೋರಾಟದ ಕೇಂದ್ರಬಿಂದುವಾಗುವ ಲಕ್ಷಣಗಳು ಗೋಚರವಾಗುತ್ತಿದೆ. ಕಟ್ಟೆಗದ್ದೆ ಗ್ರಾಮದಲ್ಲಿರುವ ದರ್ಗಾವೂ ದೇವಾಲಯದ ಆಕಾರದಲ್ಲಿ ಇದೆ ಎನ್ನುವ ವಾದ ಕೇಳಿ ಬರುತ್ತಿದೆ. ದರ್ಗಾದ ಕಂಬಗಳ ಮೇಲೆ ಹೂವಿನ ಚಿತ್ರಗಳು. ಮುಸ್ಲಿಮರು ಇದು ದರ್ಗಾ ಎನ್ನುತ್ತಿದ್ದಾರೆ. ಆದರೆ, ಹಿಂದೂ ಸಂಘಟನೆಗಳು ಇದು ದರ್ಗಾ ಅಲ್ಲ. ಚಂದ್ರಮೌಳೇಶ್ವರ ದೇವಾಲಯವೆಂದು ವಾದ ಮಾಡುತ್ತಿದ್ದಾರೆ. ಇದಕ್ಕೆ ನೂರಾರು ವರ್ಷಗಳ ಪುರಾತನ ಇತಿಹಾಸವಿದೆ ಎನ್ನುವ ದಾಖಲೆಗಳನ್ನು ಹಿಂದೂ ಪರ ಸಂಘಟನೆ ಮುಖಂಡರು ಅಭಿಪ್ರಾಯವನ್ನು ಹೊರಹಾಕುತ್ತಿದ್ದಾರೆ.

ಮತ್ತೊಂದು ಧರ್ಮ ದಂಗಲ್‍ಗೆ ಕಾಫಿನಾಡು ಸಾಕ್ಷಿ:
ಮಂಗಳೂರು ಮಳಲಿ ದೇವಸ್ಥಾನ ವಿವಾದ. ಶ್ರೀರಂಗಪಟ್ಟಣದ ಜಾಮೀಯಾ ಮಸೀದಿ ಗಲಾಟೆ ಬಳಿಕ ಮತ್ತೊಂದು ಧರ್ಮ ದಂಗಲ್‍ಗೆ ಕಾಫಿನಾಡು ಸಾಕ್ಷಿಯಾಗುತ್ತಾ ಎಂಬ ಅನುಮಾನ ಉಂಟಾಗಿದೆ. ಮಹಜೀದ್ ಗ್ರಾಮದಲ್ಲಿ ರೋದು ದರ್ಗಾ ಅಲ್ಲ. ಚಂದ್ರಮೌಳೇಶ್ವರ ದೇವಾಲಯದ ಎಂದು ಹಿಂದೂ ಸಂಘಟನೆಗಳು ಹೋರಾಟಕ್ಕೆ ಸಿದ್ಧತೆ ನಡೆಸಿವೆ. ದರ್ಗಾದ ಒಳಗೆ ಹಿಂದೂ ದೇವಾಲಯದ ಕುರುಹುಗಳಿವೆ. ದರ್ಗಾದ ಕಂಬಗಳಲ್ಲಿ ಹೂವಿನ ಚಿತ್ರಗಳ ಕೆತ್ತನೆ ಇದೆ. ಈ ದರ್ಗಾ ಸಂಪೂರ್ಣ ಪುರಾತನ ಹಿಂದೂ ದೇವಾಲಯದ ಮಾದರಿಯಲ್ಲೇ ಇದೆ. ಆದರೆ, ದರ್ಗಾದ ನವೀಕರಣ ಸಂದರ್ಭದಲ್ಲಿ ದೇವಸ್ಥಾದ ಮೇಲೆ ಗುಂಬಜ್ ನಿರ್ಮಾಣದ ವಿರುದ್ಧ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿವೆ.ಅಲ್ಲದೆ ಇದು ಸಂಪೂರ್ಣ ಹಿಂದೂ ದೇವಾಲಯ. ಅದನ್ನ ಆಕ್ರಮಣ ಮಾಡಿ ದರ್ಗಾ ಮಾಡಿಕೊಂಡಿದ್ದಾರೆ. ಅದನ್ನ ಹಿಂದೂಗಳಿಗೆ ಒಪ್ಪಿಸಬೇಕೆಂದು ಸರ್ಕಾರಕ್ಕೆ ಬಜರಂಗದಳದ ಮಾಜಿ ಜಿಲ್ಲಾ ಸಂಚಾಲಕ ತುಡುಕೂರು ಮಂಜುನಾಥ್ ಒತ್ತಾಯಿಸಿದ್ದಾರೆ.

ಕಾರವಾರದಲ್ಲಿರುವ ಆಫ್ರಿಕಾದ ಈ ದೇವರಿಗೆ ಬೀಡಿ, ಸಿಗರೇಟು,‌ ಹೆಂಡವೇ ಪ್ರಿಯ!

ದರ್ಗಾದ ನವೀಕರಣಕ್ಕೆ ಸರ್ಕಾರ 8 ಲಕ್ಷ ಹಣ ಬಿಡುಗಡೆ:
ಈ ದರ್ಗಾ ಸಂಪೂರ್ಣ ಹಿಂದೂ ದೇವಾಲಯ. ಟಿಪ್ಪು ಸುಲ್ತಾನ್ ಕಾಲದಲ್ಲಿ  ಚಂದ್ರಮೌಳೇಶ್ವರ ದೇವಾಲಯವನ್ನ ನಾಶ ಮಾಡಿ ದರ್ಗಾ ಮಾಡಿದ್ದಾರೆ. ಕಟ್ಟೆಗದ್ದೆ ಗ್ರಾಮದಲ್ಲಿ ಐದು ಶಿವನ ದೇವಾಲಯಳಿರೋದು ಇತಿಹಾಸ. ಆದರೆ, ಆ ಐದರಲ್ಲಿ ನಾಲ್ಕು ದೇವಾಲಯಗಳು ಪತ್ತೆಯಾಗಿವೆ. ಇನ್ನೊಂದು ಸಿಕ್ಕಿಲ್ಲ. ಅದು ಇದೇ ಚಂದ್ರಮೌಳೇಶ್ವರ ದೇವಾಲಯ. ಆದರೆ, ಅದನ್ನ ನಾಶ ಮಾಡಿ ದರ್ಗಾ ಮಾಡಿದ್ದಾರೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಪ್ರಸ್ತುತ ವಕ್ಫ್ ಬೋರ್ಡ್ ಅಧೀನದಲ್ಲಿರುವ ಈ ದರ್ಗಾದ ನವೀಕರಣಕ್ಕೆ ಸರ್ಕಾರ 8 ಲಕ್ಷ ಹಣ ಬಿಡುಗಡೆಯಾಗಿದೆ.

Chikkamagaluru: ಧ್ವನಿವರ್ಧಕದಲ್ಲಿ ಆಜಾನ್ ಕೂಗಲು ಅನುಮತಿಸುವಂತೆ ಮುಸ್ಲಿಂ ಮುಖಂಡರ ಮನವಿ

ದರ್ಗಾದ ನವೀಕರಣ ಸಂದರ್ಭದಲ್ಲಿ ಈ ದರ್ಗಾದ ಮೇಲೆ ಗುಂಬಜ್ ನಿರ್ಮಾಣ ಮಾಡಿರೋದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಕಾಮಗಾರಿ ನಿಲ್ಲಿಸುವಂತೆ ಹಿಂದೂ ಸಂಘಟನೆಗಳು ಜಿಲ್ಲಾಡಳಿತಕ್ಕೆ ಆಗ್ರಹಿಸಿವೆ. ಈ ದರ್ಗಾದಲ್ಲಿ ಉರುಸ್ ಕೂಡ ನಡೆಯಲಿದ್ದು, ಹಿಂದೂ ಸಂಘಟನೆಗಳ ಎಚ್ಚರಿಕೆ ಹಿನ್ನೆಲೆ ದರ್ಗಾದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಕಲ್ಪಿಸಿದ್ದಾರೆ. ಒಟ್ಟಾರೆ, ಮುಗಿಲೆತ್ತರದ ಬೆಟ್ಟ ಗುಡ್ಡಗಳಿಂದ ಸದಾ ತಣ್ಣಗಿರುವ ಕಾಫಿನಾಡು ದತ್ತಪೀಠದ ವಿಚಾರದಲ್ಲೇ ಬೂದಿಮುಚ್ಚಿದ ಕೆಂಡಂತಿದೆ. ದತ್ತಪೀಠದ ಸಮಸ್ಯೆಗೆ ದಶಕಗಳಿಂದ ಇನ್ನೂ ಮುಕ್ತಿ ಸಿಕ್ಕಿಲ್ಲ. ಹೀಗಿರುವಾಗ ಇದೀಗ ಮತ್ತೆ ದರ್ಗಾ ವರ್ಸಸ್ ದೇವಾಲಯದ ವಿವಾದ ಮತ್ತೆ ಇನ್ನೆಲ್ಲಿಗೆ ಹೋಗಿ ಮುಟ್ಟುತ್ತೋ ಗೊತ್ತಿಲ್ಲ. ಆದರೆ, ಮುಸ್ಲಿಮರು ಇದು ದರ್ಗಾ ಅಂತಿದ್ದಾರೆ. ಹಿಂದೂಗಳು ಇದು ನಮ್ಮ ದೇವಾಲಯ ಅಂತಿದ್ದಾರೆ. ಆದ್ರೆ, ಈ ಪ್ರಕರಣ ಮತ್ತೊಂದು ಸ್ವರೂಪ ಪಡೆಯುವ ಮುನ್ನ ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಿ ವಿವಾದಕ್ಕೆ ಮುಕ್ತಿ ಹಾಡಬೇಕಿದೆ.

click me!