ವಿಜಯಪುರ: ಬಾರದ ಮಳೆ, ಹಾನಿಯಾದ ಲಿಂಬೆ ಬೆಳೆ..!

By Kannadaprabha NewsFirst Published Feb 22, 2024, 8:54 PM IST
Highlights

ಇಂಡಿ ತಾಲೂಕಿನಲ್ಲಿ 4,350 ಹೆಕ್ಟೇರ್‌ ಪ್ರದೇಶದಲ್ಲಿ ಲಿಂಬೆ ಬೆಳೆ ಬೆಳೆಯಲಾಗುತ್ತಿದ್ದು, ಇದರಲ್ಲಿ 3,560 ಹೆಕ್ಟೇರ್‌ ಪ್ರದೇಶದಲ್ಲಿನ ಲಿಂಬೆ ಬೆಳೆ ಫೆಬ್ರುವರಿ ತಿಂಗಳಾಂತ್ಯದ ಮುಂಗಾರಿನಲ್ಲಿ ಸಮರ್ಪಕ ಮಳೆ ಬಾರದೇ ಇರುವುದರಿಂದ ನೀರಿನ ಕೊರತೆಯಿಂದ ಹಾನಿಯಾಗಿವೆ. ಒಂದು ಕಡೆ ನೀರಿನ ಸಮಸ್ಯೆ, ಇನ್ನೊಂದು ಕಡೆ ಆರ್ಥಿಕ ಸಮಸ್ಯೆಯಿಂದ ರೈತರನ್ನು ತೀವ್ರ ಸಂಕಷ್ಟಕ್ಕೆ ದೂಡುವಂತೆ ಮಾಡಿದೆ.

ಖಾಜು ಸಿಂಗೆಗೋಳ

ಇಂಡಿ(ಫೆ.22): ಮುಂಗಾರು ಮಳೆ ಬಾರದೇ ತಾಲೂಕಿನ ಅರ್ಧ ಪ್ರದೇಶದಲ್ಲಿನ ಲಿಂಬೆ ಬೆಳೆ ಹಾನಿಯಾಗಿದ್ದರೆ, ಹಿಂಗಾರಿನ ಮಳೆ ಸರಿಯಾದ ಸಮಯಕ್ಕೆ ಆಗದೇ ಇನ್ನುಳಿದ ಲಿಂಬೆ ಬೆಳೆ ಸಂಪೂರ್ಣ ಹಾನಿಯಾಗುವ ಹಂತಕ್ಕೆ ತಲುಪಿ ಬಹುವಾರ್ಷಿಕ ಬೆಳೆ ಲಿಂಬೆ ತೇವಾಂಶದ ಕೊರತೆಯಿಂದ ಒಣಗುವ ಹಂತ ತಲುಪಿವೆ. ಇಂಡಿ ತಾಲೂಕಿನಲ್ಲಿ 4,350 ಹೆಕ್ಟೇರ್‌ ಪ್ರದೇಶದಲ್ಲಿ ಲಿಂಬೆ ಬೆಳೆ ಬೆಳೆಯಲಾಗುತ್ತಿದ್ದು, ಇದರಲ್ಲಿ 3,560 ಹೆಕ್ಟೇರ್‌ ಪ್ರದೇಶದಲ್ಲಿನ ಲಿಂಬೆ ಬೆಳೆ ಫೆಬ್ರುವರಿ ತಿಂಗಳಾಂತ್ಯದ ಮುಂಗಾರಿನಲ್ಲಿ ಸಮರ್ಪಕ ಮಳೆ ಬಾರದೇ ಇರುವುದರಿಂದ ನೀರಿನ ಕೊರತೆಯಿಂದ ಹಾನಿಯಾಗಿವೆ. ಒಂದು ಕಡೆ ನೀರಿನ ಸಮಸ್ಯೆ, ಇನ್ನೊಂದು ಕಡೆ ಆರ್ಥಿಕ ಸಮಸ್ಯೆಯಿಂದ ರೈತರನ್ನು ತೀವ್ರ ಸಂಕಷ್ಟಕ್ಕೆ ದೂಡುವಂತೆ ಮಾಡಿದೆ.

ಭೀಕರ ಬರಗಾಲಕ್ಕೆ ತುತ್ತಾಗಿ 20 ರಿಂದ 30 ವಷ೯ಗಳಿಂದ ಜೋಪಾನ ಮಾಡುತ್ತ ಬಂದಿರುವ ಕುಟುಂಬಕ್ಕೆ ಆಧಾರವಾಗಿರುವ ಲಿಂಬೆ ಬೆಳೆಗೆ ನೀರಿನ ಕೊರತೆಯಿಂದ ಒಣಗಿ ಹೋಗಿವೆ. ಕಡಿದು ಬೇರೆ ವ್ಯವಸಾಯ ಮಾಡಬೇಕೆಂದರೇ 20 ವಷ೯ಗಳಿಂದ ಕಷ್ಟಪಟ್ಟು ಬೆಳೆಸಿದ ಲಿಂಬೆ ಬೆಳೆ ಕಡಿಯಲು ಮನಸಾಗದೇ ಇನ್ನೇನು ಮಾಡೋದು ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಒಣಗಿದ ಲಿಂಬೆ, ದಾಳಿಂಬೆ ಗಿಡಗಳು ಕಡಿದು ಬದುವಿಗೆ ಹಾಕುತ್ತಿದ್ದಾರೆ. ಬರಪರಿಸ್ಥಿಯಿಂದ ರೈತರು ಕಂಗಾಲಾಗಿದ್ದು, ಸರ್ಕಾರ ಲಿಂಬೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಿ ಲಿಂಬೆ ಕೃಷಿ ಉಳಿಸಿ, ಬೆಳೆಸಲು ಸರ್ಕಾರ ಮುಂದಾಗಬೇಕಾಗಿದೆ.

ವಿಜಯಪುರ: ಸಿಂದಗಿ ತಾಲೂಕು ಸೇರ್ಪಡೆಗೆ ಆಗ್ರಹಿಸಿ ಗಬಸಾವಳಗಿ ಗ್ರಾಮಸ್ಥರು ಹೋರಾಟ!

ಟ್ಯಾಂಕರ್‌ ಮೂಲಕ ನೀರು:

ಬಹುವಾರ್ಷಿಕ ಬೆಳೆ ಲಿಂಬೆ ಬೆಳೆಯ ಮೇಲೆ ಬದುಕು ಸಾಗಿಸುತ್ತಿರುವ ಸಾವಿರಾರು ಕುಟುಂಬಗಳು ಬೆಳೆ ಒಣಗುತ್ತಿರುವುದರಿಂದ ಬೀದಿಗೆ ಬಿಳುವ ಪರಿಸ್ಥಿತಿ ಉಂಟಾಗಿದೆ. ಬೆಳೆ ಉಳಿಸಿಕೊಳ್ಳಬೇಕು. ಬದುಕು ಕಟ್ಟಿಕೊಳ್ಳಬೇಕೆಂದು ಆರ್ಥಿಕವಾಗಿ ಸ್ಥಿತಿವಂತರಿದ್ದ ಕೆಲ ರೈತರು ಟ್ಯಾಂಕರ್‌ ಮೂಲಕ ನೀರು ಖರೀದಿಸಿ ಬೆಳೆಗಳಿಗೆ ಹಾಕುತ್ತಿದ್ದಾರೆ. ಪ್ರತಿ ಟ್ಯಾಂಕರ್‌ ನೀರಿಗೆ ₹800 ಗಳನ್ನು ಹಾಗೂ ನೀರಿಗೆ ₹200 ಗಳನ್ನು ನೀಡಿ ನೀರು ಖರೀದಿಸಬೇಕು. ಪ್ರತಿದಿನ 3 ರಿಂದ 4 ಟ್ಯಾಂಕರ್‌ ಮೂಲಕ ನೀರು ಬೆಳೆಗಳಿಗೆ ಹಾಕಬೇಕು. ಎಕರೆ ಲಿಂಬೆ ಬೆಳೆಗೆ ಕನಿಷ್ಠ 4 ದಿನಗಳವರೆಗೆ ಟ್ಯಾಂಕರ್‌ ನೀರು ಹಾಕಬೇಕು. ವಾರಕ್ಕೊಮ್ಮೆ ಲಿಂಬೆ ಬೆಳೆಗಳಿಗೆ ಟ್ಯಾಂಕರ್‌ ಮೂಲಕ ನೀರು ಹಾಕಿದ್ದು, ₹20 ಸಾವಿರಗಳು ಖರ್ಚು ಮಾಡಬೇಕಾಗುತ್ತದೆ. ಈ ನೀರು ಕೇವಲ 15 ದಿನಗಳವರೆಗೆ ಮಾತ್ರ ತೇವಾಂಶ ಹಿಡಿಯುತ್ತಿದ್ದು, 15 ದಿನ ಕಳೆದ ಮೇಲೆ ಮತ್ತೆ ಟ್ಯಾಂಕರ್‌ ಮೂಲಕ ನೀರು ಬೆಳೆಗಳಿಗೆ ಹಾಕಬೇಕಾದ ಗಂಭೀರ ಪರಿಸ್ಥಿತಿ ರೈತರು ಅನುಭವಿಸುತ್ತಿದ್ದಾರೆ. ಒಂದು ಕಡೆ ಲಿಂಬೆ ಬೆಳೆ ಉಳಿಸಿಕೊಳ್ಳುವ ಚಿಂತೆ ರೈತರದ್ದಾದರೇ ಲಿಂಬೆ ಹಣ್ಣು ಮಾರಿದರೇ ಮಾತ್ರ ಹಣ ಬರುವುದು. ಹೀಗಾಗಿ ಆರ್ಥಿಕ ಸಮಸ್ಯೆಯೂ ಎದುರಿಸುತ್ತಿದ್ದಾರೆ.

ಪ್ರಸಕ್ತ ವರ್ಷದ ಮುಂಗಾರು ಹಾಗೂ ಹಿಂಗಾರಿ ಮಳೆ ಬಾರದೇ ಇರುವುದರಿಂದ ತೋಟಗಾರಿಕೆ ಬೆಳೆಗಳಾದ ಲಿಂಬೆ,ದಾಳಿಂಗೆ ಬೆಳೆಗಳು ನೀರಿನ ಕೊರತೆಯಿಂದ ಒಣಗಿದ್ದರಿಂದ ಲಿಂಬೆ ಬೆಳೆಯ ಮೇಲೆಯೇ ಕುಟುಂಬ ನಿರ್ವಹಿಸುವ ಸಾವಿರಾರು ಲಿಂಬೆ ಬೆಳೆಯುವ ರೈತರು ಬೀದಿಗೆ ಬಿದ್ದಿದ್ದಾರೆ. ರಾಜ್ಯ ಸರ್ಕಾರ ಲಿಂಬೆ ಬೆಳೆಗಾರರ ಸಹಾಯಕ್ಕೆ ಬರಬೇಕು.ಬಹುವಾರ್ಷಿಕ ಬೆಳೆ ಲಿಂಬೆ ಬೆಳೆ ಕಳೆದುಕೊಂಡು ತೊಂದರೆಯಲ್ಲಿರುವ ರೈತ ಕುಟುಂಬಗಳಿಗೆ ಸಹಾಯ ಮಾಡಬೇಕು. ಈ ಕುರಿತು ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್‌ ಘೊಷಿಸಬೇಕು ಎಂದು ಅಥರ್ಗಾ ರೈತ ಹಾಗೂ ತಾಪಂ ಸದಸ್ಯ ಗಣಪತಿ ಬಾಣಿಕೋಲ ತಿಳಿಸಿದ್ದಾರೆ. 

click me!