ಡಿ ಗ್ರೂಪ್‌ ನೌಕರನಿಂದ ಭವನ ಉದ್ಘಾಟನೆ ಮಾಡಿಸಿದ ಜಡ್ಜ್‌

By Kannadaprabha NewsFirst Published Mar 3, 2020, 9:10 AM IST
Highlights

ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುವ ಸಾಮಾನ್ಯ ಸಿಬ್ಬಂದಿಯೊಬ್ಬರ ಕೈಯಿಂದ ಚಿಕ್ಕಬಳ್ಳಾಪುರದ ಜಿಲ್ಲಾಕೇಂದ್ರದಲ್ಲಿ ನೂತನ ನ್ಯಾಯಾಲಯ ಕಟ್ಟಡ ಉದ್ಘಾಟನೆ ಮಾಡಿಸಲಾಗಿದೆ. 

ಚಿಕ್ಕಬಳ್ಳಾಪುರ [ಮಾ.03]: ಯಾವುದೇ ನೂತನ ಕಟ್ಟಡ, ಕಾಮಗಾರಿಗಳನ್ನು ಗಣ್ಯರು, ಉನ್ನತ ಹುದ್ದೆಯಲ್ಲಿರುವವರು ಉದ್ಘಾಟಿಸುವುದು ಸಾಮಾನ್ಯ. ಆದರೆ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುವ ಸಾಮಾನ್ಯ ಸಿಬ್ಬಂದಿಯೊಬ್ಬರ ಕೈಯಿಂದ ಇಲ್ಲಿನ ಜಿಲ್ಲಾಕೇಂದ್ರದಲ್ಲಿ ನೂತನ ನ್ಯಾಯಾಲಯ ಕಟ್ಟಡ ಉದ್ಘಾಟನೆ ಮಾಡಿಸಲಾಗಿದ್ದು, ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಜಿಲ್ಲಾಕೇಂದ್ರ ಚಿಕ್ಕಬಳ್ಳಾಪುರದ ನ್ಯಾಯಾಲಯ ಸಂಕೀರ್ಣದ ಉದ್ಘಾಟನೆಯನ್ನು ಫೆ.29ರ ಶನಿವಾರ ಸಂಜೆ ಆಯೋಜಿಸಲಾಗಿದ್ದು, ನ್ಯಾಯಾಲಯ ಕಟ್ಟಡದ ಉದ್ಘಾಟನೆಗೆ ಹೈಕೋರ್ಟ್‌ ನ್ಯಾಯಾಧೀಶರಾದ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ಚಿಕ್ಕಬಳ್ಳಾಪುರ ಶಾಸಕರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಅವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು.

ನೀವು ಒಬ್ಬ ಮಗಳ ತಂದೆ, ನಾನು ಕೂಡಾ ತಂದೆಯ ಮಗಳು: ಸಿಂಹಗೆ ಬಾಲಕಿ ಭಾವನಾತ್ಮಕ ಪತ್ರ..

ಆದರೂ ನ್ಯಾಯಾಲಯದಲ್ಲಿ ಡಿ ಗ್ರೂಪ್‌ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಯರಾಜ್‌ ತ್ರಿಮೋತಿ ಅವರ ಮೂಲಕ ನ್ಯಾಯಾಲಯ ಸಂಕೀರ್ಣವನ್ನು ಉದ್ಘಾಟಿಸಲಾಯಿತು.

ಚಿಕ್ಕಬಳ್ಳಾಪುರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿರುವ ಕೆ. ಅಮರನಾರಾಯಣ ಅವರು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ತಾವು ಕಾರ್ಯಕ್ರಮಗಳಿಗೆ ಚಾಲನೆ ನೀಡುವುದಿಲ್ಲ. ಅಲ್ಲದೆ ರಾಜಕಾರಣಿಗಳಿಂದಲೂ ಕಾರ್ಯಕ್ರಮದ ಉದ್ಘಾಟಿಸಲು ಇಷ್ಟಪಡುವುದಿಲ್ಲ, ಬದಲಾಗಿ ಜನಸಾಮಾನ್ಯರಿಂದಲೇ ಕಾರ್ಯಕ್ರಮ ಉದ್ಘಾಟಿಸುವ, ಚಾಲನೆ ಕೊಡಿಸುವುದನ್ನು ರೂಢಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಡಿ ಗ್ರೂಪ್‌ ನೌಕರನಿಂದ ನ್ಯಾಯಾಲಯ ಭವನ ಉದ್ಘಾಟಿಸಲು ಅನುವು ಮಾಡಿಕೊಡಲಾಯಿತು ಎಂದು ವಕೀಲರ ಸಂಘದ ಅಧ್ಯಕ್ಷ ತಮ್ಮೇಗೌಡ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ. ಜಯರಾಜ… ತ್ರಿಮೋತಿ ಅವರ ನಿವೃತ್ತಿಗೆ ಮೂರು ತಿಂಗಳಷ್ಟೇ ಬಾಕಿ ಇದೆ.

click me!