ಚಂಡಮಾರುತಕ್ಕೆ ಕೊಚ್ಚಿ ಹೋದ ಉದ್ದು, ನೆಲಗಡಲೆ; ಬೆಳೆಗಾರರು ಕಂಗಾಲು

By Ravi JanekalFirst Published Dec 15, 2022, 9:57 PM IST
Highlights

ಕರಾವಳಿಯಲ್ಲಿ ಚಂಡಮಾರುತ ಹಿನ್ನಲೆಯಲ್ಲಿ ಹವಾಮಾನ ವೈಪರೀತ್ಯ ಉಂಟಾಗಿ ಕೃಷಿಯ ಮೇಲೆ ಪರಿಣಾಮ ಬೀರಿದೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾಗಿ ಗುರುತಿಸಿಕೊಂಡಿರುವ ನೆಲಗಡಲೆ, ಉದ್ದು ಅಕಾಲಿಕ ಮಳೆಯಿಂದಾಗಿ ಬಹುತೇಕ ಬೆಳೆ ನೆಲಕಚ್ಚಿದೆ. 

ಉಡುಪಿ (ಡಿ.15) : ಕರಾವಳಿಯಲ್ಲಿ ಚಂಡಮಾರುತ ಹಿನ್ನಲೆಯಲ್ಲಿ ಹವಾಮಾನ ವೈಪರೀತ್ಯ ಉಂಟಾಗಿ ಕೃಷಿಯ ಮೇಲೆ ಪರಿಣಾಮ ಬೀರಿದೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾಗಿ ಗುರುತಿಸಿಕೊಂಡಿರುವ ನೆಲಗಡಲೆ, ಉದ್ದು ಅಕಾಲಿಕ ಮಳೆಯಿಂದಾಗಿ ಬಹುತೇಕ ಬೆಳೆ ನೆಲಕಚ್ಚಿದೆ. 

ಸಾಲ ಮಾಡಿ ಬೆಳೆಯ ಮೂಲಕ ಸಮಸ್ಯೆಯ ಮುಕ್ತಿ ಕಾಣಹೊರಟ ರೈತಾಪಿ ವರ್ಗ ಮತ್ತೆ ಹವಾಮಾನ ವೈಪರೀತ್ಯಕ್ಕೆ ತುತ್ತಾಗಿ ಸಂಕಷ್ಟ ಎದುರಿಸುವಂತಾಗಿದೆ. ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚು ಬೆಳೆಯುವ ವಾಣಿಜ್ಯ ಬೆಳೆ ಎಂದರೆ ಅದು ಉದ್ದು ಮತ್ತು ನೆಲಗಡಲೆ. ಜಿಲ್ಲೆಯ ಕೋಟ ಹೋಬಳಿಯಲ್ಲಿ ಅತೀ ಹೆಚ್ಚು ನೆಲಗಡಲೆ ಬೆಳೆಯುವ ಕೃಷಿ ಭೂಮಿ ಕೃಷಿಕರಿದ್ದಾರೆ. ಈ ಬಾರಿ ಭತ್ತ ಬೆಳೆದು ಕೈ ಸುಟ್ಟು ಕೊಂಡಿದ್ದ ಈ ಭಾಗದ ರೈತರು ನೆಲಗಡಲೆ ಮತ್ತು ಉದ್ದು ಬೆಳೆಯ ಮೂಲಕ ಲಾಭ ನೋಡುವ ಆಸೆಯಿಂದ ಎಕರೆಗಟ್ಟಲೇ ಕೃಷಿ ಭೂಮಿಯಲ್ಲಿ ಬೀಜ ಬಿತ್ತನೆ ಮಾಡಿದ್ದರು. 

Udupi: ಚಂಡಮಾರುತ ಎಫೆಕ್ಟ್: ಮಟ್ಟು ಗುಳ್ಳ ಮಣ್ಣು ಪಾಲು

ಆದರೆ ರೈತರ ಆಸೆಗೆ ಚಂಡಮಾರುತ ತಣ್ಣೀರು ಎರೆಚಿದೆ. ಹವಾಮಾನ ವೈಪರೀತ್ಯ ದಿಂದಾಗಿ ಅಕಾಲಿಕ ಮಳೆ ಸುರಿದ ಪರಿಣಾಮ ಬಿತ್ತನೆ ಮಾಡಿದ ನೆಲಗಡಲೆ, ಉದ್ದಿನ ಬೀಜ ಮೊಳಕೆ ಬರುವ ಮೊದಲೆ ಕೊಳೆತು ಹೋಗಿದೆ.

ಕೋಟ ಹೋಬಳಿಯ ಕೋಟತಟ್ಟು ಭಾಗದಲ್ಲಿ ಅತೀ ಹೆಚ್ಚು ರೈತರು ನೆಲಗಡಲೆ ಉದ್ದು ಬೆಳೆಯುವ ಮೂಲಕ ಆದಾಯ ಪಡೆಯುತ್ತಿದ್ದರು. ಆದರೆ ಈ ಬಾರಿ ಪ್ರಕೃತಿ ಈ ರೈತರ ಮೇಲೆ ಮುನಿಸಿಕೊಂಡಿದ್ದು, ವರ್ಷವಿಡಿ ಮಳೆಯ ಕಾಟ ಹೆಚ್ಚಾಗಿ ಯಾವ ಬೆಳೆಯೂ ಕೂಡ ಸರಿಯಾಗಿ ತೆಗೆಯಲಾರದ ಪರಿಸ್ಥಿತಿಯಲ್ಲಿದ್ದಾರೆ. 

ಭತ್ತದ ಕೃಷಿ ಸಂದರ್ಭದಲ್ಲೂ ಕೂಡು ನಿರಂತರವಾಗಿ ಮಳೆಯ ಕಾರಣ ಈ ಭಾಗದಲ್ಲಿ ಭತ್ತದ ಕೃಷಿ ಮಾಡಿದ ಕೃಷಿಕ ನಷ್ಟ ಅನುಭವಿಸುವಂತಾಗಿತ್ತು. ಈ ಬಾರಿ ನೆಲಗಡಲೇ ಉದ್ದು ಎರಡು ಬೆಳೆಗಳು ಕೂಡ ಮಳೆಗೆ 95 % ಹಾಳಾಗಿ ಹೋಗಿದೆ‌. ಅದರಲ್ಲೂ ಮೊದಲು ಹಾಕಲಾಗಿದ್ದ ನೆಲಗಡಲೆ ಗದ್ದೆಗಳಲ್ಲಿ ಕಳೆ ಅಧಿಕವಾಗಿದ್ದು, ಇಳಿವರಿ ಕುಂಠಿತವಾಗುವ ಸ್ಥಿತಿ ನಿರ್ಮಾಣವಾಗಿದೆ.

Kodagu: ಮ್ಯಾಂಡೌಸ್ ಪರಿಣಾಮ ಅಕಾಲಿಕ ಮಳೆ: ಅಪಾರ ಬೆಳೆ ನಷ್ಟ

ಒಟ್ಟಾರೆಯಾಗಿ ಈ ವರ್ಷದ ಕೃಷಿ ಲಾಭದಾಯಕವಾಗಿಲ್ಲ ಎನ್ನುವುದು ಕೃಷಿಕರ ಮಾತು. ಸದ್ಯ ಹಾಳಾಗಿರುವ ಕೃಷಿಗೆ ಪರಿಹಾರವಾದರು ಇಲಾಖೆ ವತಿಯಿಂದ ನೀಡಿ ದೇಶದ ಬೆನ್ನೆಲುಬಿಗೆ ಶಕ್ತಿ ನೀಡಿ ಎನ್ನುವುದು ರೈತರ ಬೇಡಿಕೆಯಾಗಿದೆ.

click me!