ಬೆಳೆ ವಿಮೆ ಅವ್ಯವಹಾರ: 36 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು

By Kannadaprabha NewsFirst Published May 16, 2024, 11:11 PM IST
Highlights

ಫಸಲ್‌ ಬಿಮಾ ವಿಮೆ ಯೋಜನೆಯಲ್ಲಿ ಅನರ್ಹರು ಅಮಾಯಕ ರೈತರ ಹೆಸರಲ್ಲಿ ಹಣ ಗುಳಂ ಮಾಡಿರುವ ಪ್ರಕರಣದಲ್ಲಿ ಜಾಲಹಳ್ಳಿಯ 36 ಜನರ ಮೇಲೆ ಕ್ರಿಮಿನಲ್ ಪ್ರಕರಣ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ದಾಖಲಾಗಿದೆ. 

ದೇವದುರ್ಗ (ಮೇ 16): ಫಸಲ್‌ ಬಿಮಾ ವಿಮೆ ಯೋಜನೆಯಲ್ಲಿ ಅನರ್ಹರು ಅಮಾಯಕ ರೈತರ ಹೆಸರಲ್ಲಿ ಹಣ ಗುಳಂ ಮಾಡಿರುವ ಪ್ರಕರಣದಲ್ಲಿ ಜಾಲಹಳ್ಳಿಯ 36 ಜನರ ಮೇಲೆ ಕ್ರಿಮಿನಲ್ ಪ್ರಕರಣ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ದಾಖಲಾಗಿದೆ. 2020-21ನೇ ಸಾಲಿನ ಬೇಸಿಗೆ ಹಂಗಾಮಿನ ವಿಮೆ ಮಂಜೂರುಗೊಂಡಾಗ ಕೆಲ ಮಧ್ಯವರ್ತಿಗಳ ಕೈವಾಡದಿಂದ ಲಕ್ಷಾಂತರ ಹಣ ಅವ್ಯವಹಾರವಾಗಿರುವುದು ಬೆಳಕಿಗೆ ಬಂದಿತ್ತು. 

ದೂರು ಆಧರಿಸಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ ನಾಯಕ, ಮೇಲ್ನೋಟಕ್ಕೆ ಹಣ ದುರ್ಬಳಕೆಯಾಗಿರುವ ಹಿನ್ನೆಲೆ ಪ್ರಕರಣ ದಾಖಲಿಸಿದ್ದು, ಇಂತಹ ಪ್ರಕರಣ ಬೆಳಕಿಗೆ ಬಂದಿರುವುದು ಜಾಲಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. 2020-21ನೇ ಸಾಲಿನಲ್ಲಿ ಜಾಲಹಳ್ಳಿ ಮತ್ತು ಗಾಣದಾಳ ಗ್ರಾಪಂ ವ್ಯಾಪ್ತಿಯ 273 ರೈತರಿಗೆ ಬೇಸಿಗೆ ಹಂಗಾಮಿನ ಬೆಳೆಯ ವಿಮೆ ಮಂಜೂರುಗೊಂಡಿತ್ತು. 116 ರೈತರ ವಿಮೆ ಹಣವನ್ನು 36 ಜನರ ಕೂಟ ಹಣ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

Latest Videos

ರೈತರಲ್ಲದವರಿಗೆ ವಿಮೆ ಹಣ ಜಮಾ: ಒಂದೇ ದಿನವೇ ಎಲ್ಲರ ಖಾತೆಗಳಿಗೆ ಹಣ ಹಾಕಿರುವುದು ಸೇರಿದಂತೆ ಅನೇಕ ಎಡವಟ್ಟುಗಳು ನಡೆದಿದ್ದು, ಕೃಷಿ ಇಲಾಖೆ ಕೆಲ ಸಿಬ್ಬಂದಿ ಹಾಗೂ ವಿಮೆ ಯೋಜನೆಯ ಕಂಪನಿಯ ಕೆಲ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ಮೂಡಿದ್ದು, ತನಿಖೆ ನಂತರ ಹಗರಣದ ತಿರುಳು ಹೊರ ಬರಲಿದೆ. ಜಾಲಹಳ್ಳಿ ಪಟ್ಟಣದ 34 ಹಾಗೂ ಗಾಣದಾಳ ಗ್ರಾಮದ ಇಬ್ಬರು ಒಳಗೊಂಡಂತೆ 36 ಜನರು ಈ ಹಗರಣದಲ್ಲಿ ಪಾಲುದಾರರಾಗಿದ್ದು, ಪ್ರತಿಷ್ಠಿತರು ಎನ್ನುವವರೇ ಸಿಲುಕಿಕೊಂಡಿರುವುದು ಕುತೂಹಲ ಮೂಡಿಸಿದೆ. ಹಾಲಹಳ್ಳಿಯ ಬಸವರಾಜ ನರೇಗಲ್, ನವೀನ ಶಶಿಕಾಂತ ಪಾಟೀಲ್, ಸುರೇಶ ಪಂಪಾಪತಿ, ವಿರೇಶ ಪಂಪಾಪತಿ, ಆನಂದ ಪಾಟೀಲ್ ಶಂಕರಗೌಡ ಸೇರಿದಂತೆ 36 ಜನರ ಮೇಲೆ ಪ್ರಕರಣ ದಾಖಲಾಗಿದೆ. 

ಬಿಜೆಪಿಗೆ ದ್ರೋಹ ಎಸಗಿದವರಿಗೆ ತಕ್ಕ ಪಾಠ ಕಲಿಸಿ: ವೈ.ಎ.ನಾರಾಯಣಸ್ವಾಮಿ

ಈ ಪ್ರಕಣದಲ್ಲಿ ಮೇಲ್ನೋಟಕ್ಕೆ 75.91.167 ರು. ಅವ್ಯವಹಾರವಾಗಿದೆ ಎಂದು ಹೇಳಲಾಗಿದ್ದು, 2022ರ ಸೆ.22ರಂದು ಒಂದೇ ದಿನವೇ ಬ್ಯಾಂಕ್ ಖಾತೆಗಳಿಗೆ ಹಣ ಜಮೆಗೊಂಡಿದೆ. ಒಂದೇ ಕಂಪ್ಯೂಟರ್ ಸೆಂಟರ್‌ನಲ್ಲಿ ಹಣ ಅಪಲೋಡ್‌ ಆಗಿದೆ ಎನ್ನಲಾಗಿದೆ. ಕೇವಲ ಪೂರ್ವಪರ ದಾಖಲೆಗಳನ್ನು ಮಾತ್ರ ಪರಿಶೀಲಿಸಲಾಗಿದೆ. ಆದರೆ ಮಂಜೂರುಗೊಂಡ ಬೆಳೆವಿಮೆ ಹಾಗೂ ಅರ್ಹ ರೈತರೇ, ಜಮೀನು ಉಳ್ಳವರೇ ಎಂಬುದು ಸೂಕ್ತ ತನಿಖೆ ಕೈಗೊಂಡಾಗ ಮಾತ್ರ ಹಗರಣ ರೂವಾರಿ, ಪಾಲ್ಗೊಂಡ ಅಧಿಕಾರಿಗಳು, ನಡೆದಿದೆ ಎನ್ನಲಾದ ಕೂಟದ ಅಕ್ರಮ ಚಟುವಟಿಕೆಗಳು ಹೊರಬರಲಿದೆ.

click me!