Latest Videos

ಬಸವಣ್ಣನ ವಚನಗಳ ಹಸ್ತಪ್ರತಿ ಡಿಜಿಟಲ್‌ ಆಗಲಿ: ಸುತ್ತೂರು ಶ್ರೀ

By Kannadaprabha NewsFirst Published May 16, 2024, 10:45 PM IST
Highlights

ಬಸವಣ್ಣನವರ ವಚನ ಪರಂಪರೆ ದೊಡ್ಡದಿದ್ದು, ಬಸವಾದಿ ಶರಣರ ವಚನ ಮತ್ತು ತತ್ವಗಳನ್ನು ವಿದ್ಯಾರ್ಥಿಗಳಿಗೆ ವಿವಿಧ ಮಾಧ್ಯಮದ ಮೂಲಕ ತಲುಪಿಸುವ ಕಾರ್ಯ ಇನ್ನಷ್ಟು ಆಗಬೇಕು. 

ಧಾರವಾಡ (ಮೇ 16): ಬಸವಣ್ಣನವರ ವಚನ ಪರಂಪರೆ ದೊಡ್ಡದಿದ್ದು, ಬಸವಾದಿ ಶರಣರ ವಚನ ಮತ್ತು ತತ್ವಗಳನ್ನು ವಿದ್ಯಾರ್ಥಿಗಳಿಗೆ ವಿವಿಧ ಮಾಧ್ಯಮದ ಮೂಲಕ ತಲುಪಿಸುವ ಕಾರ್ಯ ಇನ್ನಷ್ಟು ಆಗಬೇಕು. ಅದಕ್ಕಾಗಿ ಅವರ ವಚನ ಮತ್ತು ಹಸ್ತ ಪ್ರತಿ ಡಿಜಿಟಲೀಕರಣ ಮಾಡುವುದು ಸೂಕ್ತ ಎಂದು ಸುತ್ತೂರು ವೀರ ಸಿಂಹಾಸನಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ಬುಧವಾರ ನಡೆದ ಶ್ರೀ ಬಸವೇಶ್ವರ ಪೀಠದ ಸುವರ್ಣ ಮಹೋತ್ಸವದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಕಾಲ ಬದಲಾದಂತೆ ನವ ಮಾಧ್ಯಮಗಳ ಮುಖಾಂತರ ಬಸವೇಶ್ವರ ವಚನ ಮತ್ತು ತತ್ವಗಳನ್ನು ಪ್ರಸಾರ ಮಾಡಬೇಕಾಗಿದೆ. 

ಅವರ ತತ್ವಗಳನ್ನು ನಿಷ್ಠೆಯಿಂದ ಆಚರಣೆ ಮಾಡುವ ಅಗತ್ಯವಿದೆ ಎಂದ ಅವರು, ಜನ ಭಾಷೆಯನ್ನೇ ದೈವ ಭಾಷೆಯನ್ನಾಗಿ ಮಾಡಿದ ಕೀರ್ತಿ ಬಸವಣ್ಣವರಿಗೆ ಸಲ್ಲುತ್ತದೆ ಎಂದರು. ಮುರಗೋಡ ಮಹಾಂತ ಶಿವಯೋಗಿಗಳು ಮಹಾನ್ ಸಂತರಾಗಿದ್ದರು. ಅವರು ಯಾವುದೇ ಪ್ರಲೋಭಗಳಿಗೆ ಒಳಗಾಗಿರಲಿಲ್ಲ. ಕವಿವಿ ಬಸವೇಶ್ವರ ಪೀಠ ನಿರ್ಮಾಣ ಮಾಡುವಲ್ಲಿ ಅವರ ಕೊಡುಗೆ ದೊಡ್ಡದು ಎಂದು ಹೇಳಿದರು. ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ರಾಜ್ಯ ಸರ್ಕಾರ ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ನಂತರ ಬಸವಣ್ಣನ ತತ್ವ, ಸಿದ್ಧಾಂತದ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ. 

ಬಿಜೆಪಿಗೆ ದ್ರೋಹ ಎಸಗಿದವರಿಗೆ ತಕ್ಕ ಪಾಠ ಕಲಿಸಿ: ವೈ.ಎ.ನಾರಾಯಣಸ್ವಾಮಿ

ಬಸವಣ್ಣನವರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಹೆಚ್ಚಾಗಿದೆ. ಜಗತ್ತಿಗೆ 'ಕಾಯಕವೇ ಕೈಲಾಸ' ಎಂಬ ತತ್ವ ನೀಡಿದ ಬಸವಣ್ಣನಿಗೆ "ಕಾಯಕ ತತ್ವದ ಮಹಾಗುರು'''' ಎಂದು ಘೋಷಿಸಬೇಕು. ಕವಿವಿ ಬಸವ ಅಧ್ಯಯನ ಪೀಠವು ಬಸವೇಶ್ವರ ಅವರನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಕವಿವಿ ಬಸವೇಶ್ವರ ಪೀಠ ಎಲ್ಲ ವಿವಿಗಳಿಗೆ ಮಾದರಿಯಾಗಿದ್ದು, ಬಸವ ಅಧ್ಯಯನ ಪೀಠಕ್ಕೆ ಸರ್ಕಾರ ಅನುದಾನ ನೀಡಬೇಕು ಎಂದರು. ಗದಗ -ಡಂಬಳದ ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಅನುಭವ ಮಂಟಪ ಜಗತ್ತಿನ ಮೊದಲ ಸಂಸತ್ತಾಗಿದ್ದರೆ, ಶರಣರ ವಚನಗಳೇ ಸಂವಿಧಾನ. 

ಎಲ್ಲ ಕಾಲಕ್ಕೂ ಬಸವಣ್ಣ ಯುಗ ಯುಗದ ಜಾಗತಿಕ ನಾಯಕರಾಗಿದ್ದಾರೆ. ಸಾಮಾಜಿಕ ನ್ಯಾಯಕ್ಕಾಗಿ ಬಸವಣ್ಣ ಶ್ರಮಿಸಿದರು. ಕಾಯಕ ದಾಸೋಹದಂತಹ ಸಂಸ್ಕೃತಿಯನ್ನು ಬಸವಣ್ಣ ನೀಡಿದ್ದಾರೆ ಎಂದರು. ಹುಬ್ಬಳ್ಳಿಯ ಮೂರುಸಾವಿರ ಮಠದ ಡಾ. ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ, ನಡೆದಂತೆ ನುಡಿದಿದ್ದರಿಂದ ಬಸವಣ್ಣ ಮಹಾತ್ಮರೆನಿಸಿದರು. ಬಸವಣ್ಣ ಎಂದಿಗೂ ಪ್ರಸ್ತುತವಾಗಿದ್ದು, ಬಸವಾದಿ ಶರಣರ ವಚನಗಳನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕಾದ ಅವಶ್ಯಕತೆಯಿದೆ ಎಂದರು. ಭಾಲ್ಕಿ ಹಿರೇಮಠ ಸಂಸ್ಥಾನ ಮಠದ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಜಾನಪದ ವಿಶ್ವವಿದ್ಯಾಲಯದಂತೆ ವಚನ ವಿಶ್ವವಿದ್ಯಾಲಯ ನಿರ್ಮಿಸುವುದು ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕು ಎಂದರು.

ಡಾ. ವೀರಣ್ಣ ರಾಜೂರ ಮತ್ತು ಡಾ. ಸಿ.ಎಂ. ಕುಂದಗೋಳ ಸಂಪಾದನೆಯ ಸುವರ್ಣ ದೀಪ್ತಿ ಸ್ಮರಣೆ ಸಂಚಿಕೆ ಸೇರಿದಂತೆ ಒಟ್ಟು 16 ವಿವಿಧ ಪುಸ್ತಕ ಮತ್ತು ಬಸವೇಶ್ವರ ಪೀಠದ ಕುರಿತು ಮಾಡಿದ ಸಾಕ್ಷ್ಯ ಚಿತ್ರವನ್ನು ಸಾನ್ನಿಧ್ಯ ವಹಿಸಿದ್ದ ವಿವಿಧ ಮಠಾಧೀಶರು ಲೋಕಾರ್ಪಣೆ ಮಾಡಿದರು. ಮುರಗೋಡ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ, ಬೆಂಗಳೂರಿನ ಬೇಲಿಮಠದ ಶೀವರುದ್ರ ಸ್ವಾಮೀಜಿ, ಧಾರವಾಡದ ಮುರಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಬೆಂಗಳೂರು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಹುಬ್ಬಳ್ಳಿಯ ಸ್ವರ್ಣಾ ಗ್ರುಪ್ ಆಫ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ ಪ್ರಸಾದ, ಡಾ. ಎಂ.ಎಂ. ಕಲಬುರಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಡಾ. ವೀರಣ್ಣ ರಾಜೂರ ಮಾತನಾಡಿದರು.

ಎಲೆಬೇತೂರು ಕೆರೆಗೆ ವಿಷ, 5 ಟನ್‌ ಮೀನು ಸಾವು: 5 ವರ್ಷಗಳ ಪರಿಶ್ರಮ ಹಾಳುಗಡೆವಿದ ದುರುಳರು

ವಚನ ಗ್ರಂಥ ಮೆರವಣಿಗೆ: ಬಸವೇಶ್ವರ ಪೀಠದ ಸುವರ್ಣ ಮಹೋತ್ಸವದ ವೇದಿಕೆ ಕಾರ್ಯಕ್ರಮದ ಮುಂಚೆ ಕರ್ನಾಟಕ ವಿಶ್ವವಿದ್ಯಾಲಯ ಆಡಳಿತ ಕಚೇರಿಯಿಂದ ಕವಿವಿ ಸುವರ್ಣ ಮಹೋತ್ಸವ ಸಭಾಂಗಣದ ವರೆಗೆ ಬಸವೇಶ್ವರರ ಮೂರ್ತಿ ಮೆರವಣಿಗೆ ಹಾಗೂ ವಚನಗಳ ಗ್ರಂಥಗಳನ್ನು ವಿದ್ಯಾರ್ಥಿಗಳು ತಲೆ ಮೇಲಿಟ್ಟುಕೊಂಡು ಮೆರವಣಿಗೆ ಮಾಡಿದರು.

click me!