ರೈತಾಪಿ ವರ್ಗಕ್ಕೆ ಸಂತಸದ ಸುದ್ದಿ: ಬೆಳೆ ಹಾನಿ ಪರಿಹಾರ ಜಮಾ

By Suvarna NewsFirst Published Dec 14, 2019, 8:41 AM IST
Highlights

ರೈತರ ಖಾತೆಗೆ 173 ಕೋಟಿ ಬೆಳೆ ಹಾನಿ ಪರಿಹಾರ ಜಮಾ ಉಪಚುನಾವಣೆ ಗಲಾಟೆ ಮಧ್ಯೆಯೂ ರೈತರಿಗೆ ದೊರೆತ ಪರಿಹಾರ | ನೆರೆ, ಬರದಿಂದ ಹಾನಿಯಾದ ಬೆಳೆಗಳಿಗೆ ಪರಿಹಾರ ವಿತರಣೆ | ಮೂಲಸೌಕರ್ಯ, ಆಸ್ತಿಪಾಸ್ತಿ ಹಾನಿಗೆ ಬರಬೇಕಿದೆ ಅನುದಾನ|

ಹಾವೇರಿ[ಡಿ.14]:  ಕಳೆದ ಒಂದು ತಿಂಗಳಿಂದ ಸರ್ಕಾರ, ಅಧಿಕಾರಿಗಳು ಉಪಚುನಾವಣೆ ಚಟುವಟಿಕೆಯಲ್ಲೇ ಬ್ಯುಸಿ ಆಗಿದ್ದರೂ ಆಗಸ್ಟ್‌ನಲ್ಲಿ ಬಂದ ಪ್ರವಾಹಕ್ಕೆ ತುತ್ತಾಗಿ ಹಾನಿಯಾದ ಬೆಳೆಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ರೈತರಿಗೆ 148 ಕೋಟಿ ವಿತರಣೆಯಾಗಿದೆ. ಆಗಸ್ಟ್ ತಿಂಗಳಲ್ಲಿ ಅತಿವೃಷ್ಟಿಯಿಂದ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ, ಆಸ್ತಿಪಾಸ್ತಿ, ಮೂಲ ಸೌಕರ್ಯಗಳು ಹಾನಿಯಾಗಿದ್ದವು. 

ಹತ್ತಾರು ಸಾವಿರ ಮನೆಗಳು ಬಿದ್ದು ಕುಟುಂಬಗಳು ಬೀದಿಪಾಲಾಗಿದ್ದವು. ಮುಂಗಾರು ಹಂಗಾಮಿನಲ್ಲಿ ಹಾಕಿದ್ದ ಬೆಳೆಗಳೆಲ್ಲ ಕೊಚ್ಚಿ ಹೋಗಿದ್ದವು. ಆದರೆ, ಸರ್ಕಾರದಿಂದ ತಕ್ಷಣಕ್ಕೆ ಪರಿ ಹಾರ ದೊರೆಯದೇ ರೈತರು ತೊಂದರೆ ಅನುಭವಿ ಸುವಂತಾಗಿತ್ತು. ಆದರೆ, ಈಗ ಬೆಳೆ ಹಾನಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಪರಿಹಾರ ವಿತರಣೆಯಾಗಿರುವುದು ಸಂಕ ಷ್ಟದಲ್ಲಿರುವ ರೈತರಿಗೆ ಅಲ್ಪ ಪ್ರಮಾಣದಲ್ಲಿ ನೆರವಾಗುವಂತಾಗಿದೆ. 

173 ಕೋಟಿ ಪರಿಹಾರ: 

ಕಳೆದ ಆಗಸ್ಟ್‌ನಲ್ಲಿ ಪ್ರವಾಹಕ್ಕೆ ತುತ್ತಾಗಿ ಹಾನಿಯಾದ ಬೆಳೆಗಳಿಗೆ ಸಂಬಂಧಿಸಿದಂತೆ ಒಟ್ಟು 148.47 ಕೋಟಿ ಪರಿಹಾರ ವಿತರಣೆಯಾಗಿದೆ. 1,03,621 ರೈತರ ಖಾತೆಗಳಿಗೆ ಪರಿಹಾರ ಹಣ ಜಮಾ ಆಗಿದೆ. ಇದಲ್ಲದೇ 2018ನೇ ಸಾಲಿನ ಹಿಂಗಾರು ಹಂಗಾ ಮಿನಲ್ಲಿ ಬರಗಾಲದಿಂದ ಹಾನಿಯಾದ ಬೆಳೆಗಳಿಗೂ ಈಗ ಇನ್‌ಪು ಟ್ ಸಹಾಯಧನ ಬಿಡುಗಡೆಯಾಗಿದೆ. 65084 ರೈತರಿಗೆ 25.19 ಕೋಟಿ ಪರಿಹಾರ ಬಂದಿದೆ. ಇವೆರಡೂ ಸೇರಿ ದಂತೆ 173.66 ಕೋಟಿ ಪರಿಹಾರ ಜಿಲ್ಲೆಯ 1.68,705 ರೈತರಿಗೆ ವಿತರಣೆಯಾಗಿದೆ. 

ಮನೆ, ಮೂಲಸೌಕರ್ಯಕ್ಕೆ 125 ಕೋಟಿ: 

ಅತಿವೃಷ್ಟಿ, ಸಂತ್ರಸ್ತರ ಜೀವಹಾನಿ, ಮನೆ ಹಾನಿ ಪರಿಹಾ ರಕ್ಕಾಗಿ ಸರ್ಕಾರದಿಂದ ಒಟ್ಟು 90 ಕೋಟಿ ಬಿಡುಗಡೆ ಯಾಗಿದೆ. ಇನ್ನು ಮೂಲಭೂತ ಸೌಕರ್ಯ ದುರಸ್ತಿಗಾಗಿ ಅಂದರೆ ಅಂಗನವಾಡಿ ಕಟ್ಟಡ, ಶಾಲಾ ಕಟ್ಟಡ ದುರಸ್ತಿಗಾಗಿ 35 ಕೋಟಿ ಸರ್ಕಾರದಿಂದ ಬಿಡು ಗಡೆಯಾಗಿದೆ. ಅದರಲ್ಲಿ ಹಾವೇರಿ ತಾಲೂಕಿಗೆ 16.30 ಕೋಟಿ, ರಾಣಿಬೆನ್ನೂರು ತಾಲೂಕಿಗೆ 9 ಕೋಟಿ, ಬ್ಯಾಡಗಿ ತಾಲೂಕಿಗೆ 5 ಕೋಟಿ, ಹಿರೇಕೆರೂರು ತಾಲೂಕಿಗೆ 4 ಕೋಟಿ, ಸವಣೂರು ತಾಲೂಕಿಗೆ 11 ಕೋಟಿ, ಶಿಗ್ಗಾಂವಿ ತಾಲೂಕಿಗೆ 8.30  ಕೋಟಿ ಹಾಗೂ ಹಾನಗಲ್ಲ ತಾಲೂಕಿಗೆ 10.80 ಕೋಟಿ ಸೇರಿ ಒಟ್ಟು 64.40  ಕೋಟಿ ಹಂಚಿಕೆ ಮಾಡಲಾಗಿದೆ. 

ಹಾನಿಯಾಗಿದ್ದೆಷ್ಟು?:

ಜಿಲ್ಲೆಯಲ್ಲಿ ಆಗಸ್ಟ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದ ಎರಡು ಬಾರಿ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಆಗಸ್ಟ್ 3 ರಿಂದ 10 ರ ವರೆಗೆ ವಾಡಿಕೆ ಮಳೆ 35 ಮಿಮೀಯಾಗಿದ್ದು, ಈ ಅವಧಿಯಲ್ಲಿ 260 ಮಿಮೀ ಮಳೆಯಾಗಿತ್ತು. ಶೇ. 743 ರಷ್ಟು ಮಳೆ ಹೆಚ್ಚಾಗಿ ನೆರೆ ಸೃಷ್ಟಿಯಾಗಿತ್ತು. ಇನ್ನು ಅಕ್ಟೋಬರ್ 18 ರಿಂದ 21 ವರೆಗೆ ವಾಡಿಕೆ ಮಳೆ 28 ಮಿಮೀಯಾಗಿದ್ದು, ವಾಸ್ತವದಲ್ಲಿ 214 ಮಿಮೀ ಮಳೆ ಸುರಿದು ಶೇ. 768 ರಷ್ಟು ಹೆಚ್ಚು ಮಳೆಯಾಗಿ ಅತಿವೃಷ್ಟಿಗೆ ಕಾರಣವಾಗಿತ್ತು. ಆಗಸ್ಟ್ ಮತ್ತು ಅಕ್ಟೋಬರ್ ಎರಡೂ ತಿಂಗಳಲ್ಲಾದ ಅತಿವೃಷ್ಟಿಯಿಂದ 9 ಜನರು ಮೃತಪಟ್ಟಿದ್ದರು. 191 ಜಾನುವಾರು ಜೀವಹಾನಿಯಾಗಿತ್ತು. ಒಟ್ಟು 17 ಜನರು ಗಾಯಗೊಂಡಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಂತ್ರಸ್ತರ ಜೀವನೋಪಾಯ ಸಾಮಗ್ರಿಗಳಿಗಾಗಿ ತಲಾ 10 ಸಾವಿರಗಳಂತೆ ಆಗಸ್ಟ ತಿಂಗಳಲ್ಲಿ 3527 ಕುಟುಂಬಗಳಿಗೆ 352.7  ಲಕ್ಷ ಅಕ್ಟೋಬರ್ ತಿಂಗಳಲ್ಲಿ 827 ಕುಟುಂಬಗಳಿಗೆ 82.70  ಲಕ್ಷ ಪರಿಹಾರ ನೀಡಲಾಗಿತ್ತು. ಆಗಸ್ಟ್‌ನಲ್ಲಿ 305 ಮನೆಗಳು ಸಂಪೂರ್ಣ ಹಾನಿಯಾಗಿದ್ದವು. ಇದರಲ್ಲಿ 303 ಮನೆಗಳಿಗೆ 3.03 ಕೋಟಿ, ತೀವ್ರ ಹಾನಿಯಾದ 3428  ಮನೆಗಳಿಗೆ 34.26 ಕೋಟಿ, ಅಲ್ಪಸ್ವಲ್ಪ ಹಾನಿಯಾದ 10389  ಮನೆ ಗಳಿಗೆ 51.13  ಕೋಟಿ ಪಾವತಿಸಲಾಗಿತ್ತು. ತಲಾ 25 ಸಾವಿರಗಳಂತೆ ಎರಡು ಕಂತು ಪಾವತಿಸಲಾಗಿದೆ. 

ಅಕ್ಟೋಬ ರ್ ತಿಂಗಳಲ್ಲಿ ಮತ್ತೆ 7956 ಮನೆಗಳಿಗೆ ಹಾನಿಯಾಗಿದೆ. ಒಟ್ಟಾರೆ ಮನೆ ಹಾನಿಗೆ ಸಂಬಂಧಿಸಿ 88.42 ಕೋಟಿ ಪಾವತಿಸಲಾಗಿದೆ. ಆಗಸ್ಟ್‌ನಲ್ಲಾದ ಅತಿವೃಷ್ಟಿಯಿಂದ 669 ಶಾಲಾ ಕಟ್ಟಡ ಗಳು, 725 ಅಂಗನವಾಡಿ ಕಟ್ಟಡಗಳು, 400 ಗ್ರಾಮೀಣ ರಸ್ತೆ, ಸೇತುವೆ, ಕೆರೆಗಳು ಹಾಗೂ 24 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾನಿಗೊಳಗಾಗಿದ್ದವು. ಒಟ್ಟು 52.14  ಕೋಟಿಗಳಷ್ಟು ನಷ್ಟವಾಗಿತ್ತು. ಸರ್ಕಾರದಿಂದ ಮೂಲ ಸೌಕರ್ಯ ದುರಸ್ತಿಗಾಗಿ 35 ಕೋಟಿ ಬಿಡುಗಡೆ ಯಾಗಿದೆ. 

ಬೆಳೆ ಹಾನಿ ಅಪಾರ: 

ಕೃಷಿ ಭೂಮಿ ಹಾಗೂ ಬೆಳೆ ಹಾನಿ 1,65,749  ಹೆಕ್ಟೇರ್ ಹಾಗೂ ತೋಟಗಾರಿಕೆಯಲ್ಲಿ ಬೆಳೆ, ಭೂಮಿ ಹಾನಿ ಸೇರಿ 15,224  ಹೆಕ್ಟೇರ್ ಪ್ರದೇಶ ಹಾನಿಯಾ ಗಿದೆ. ಹೂಳು ತುಂಬಿಕೊಂಡು ಒಟ್ಟು 5283 ಹೆಕ್ಟೇರ್ ಕೃಷಿ ಹಾಗೂ ತೋಟಗಾರಿಕೆ ಪ್ರದೇಶಕ್ಕೆ ನಷ್ಟವಾಗಿದ್ದರೆ, ನದಿ ಪಾತ್ರ ಬದಲಾವಣೆಯಿಂದ ಒಟ್ಟು 7,984 ಹೆಕ್ಟೇರ್ ಪ್ರದೇಶದ ಮಣ್ಣು ಕೊಚ್ಚಿಹೋಗಿ ಅಪಾರ ಹಾನಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈಗ ಸರ್ಕಾರ ಪರಿಹಾರ ವಿತರಣೆ ಮಾಡಿದೆ.

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು, ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಕಾರ್ಯ ಚುರುಕಾಗಿ ನಡೆಯುತ್ತಿದೆ. ಈ ವರೆಗೆ ಮನೆ ಹಾನಿಗೆ ಪರಿಹಾರವಾಗಿ 88.42 ಕೋಟಿಗಳನ್ನು ನೀಡಲಾಗಿದೆ. ಕಳೆದ ವರ್ಷದ ಹಿಂಗಾರು ಬೆಳೆ ಹಾನಿ ಮತ್ತು ಈ ಸಲದ ನೆರೆ ಸಂದರ್ಭದಲ್ಲಿನ ಬೆಳೆ ಹಾನಿಗೆ ಸರ್ಕಾರದಿಂದ 173 ಕೋಟಿ ವಿತರಣೆಯಾಗಿದೆ. ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿ 15.93 ಕೋಟಿ ಅನುದಾನವಿದೆ. ಬಾಕಿ ಪರಿಹಾರ ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ. 
 

click me!