Bagalkote: ಬೇಸಿಗೆಯಲ್ಲಿ ನದಿಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಶುರುವಾಗ್ತಿದೆ ಕಿಲ್ಲರ್ ಮೊಸಳೆಗಳ ಕಾಟ!

By Govindaraj SFirst Published May 1, 2022, 12:30 AM IST
Highlights

ಸಾಮಾನ್ಯವಾಗಿ ಇಲ್ಲಿ ಬೇಸಿಗೆ ಬಂದರೆ ಸಾಕು ನದಿ ತೀರದ ಗ್ರಾಮಸ್ಥರಿಗೆ ಆತಂಕ ಶುರುವಾಗುತ್ತೇ , ನೆಮ್ಮದಿಯಿಂದ ಹೊಲಕ್ಕೆ ಹೋಗೋ ಹಾಗಿಲ್ಲ, ನಿರ್ಭೀತಿಯಿಂದ ನದಿಯಲ್ಲಿ ದನಕರುಗಳಿಗೆ ನೀರು ಕುಡಿಸುವಂತಿಲ್ಲ, ಅವುಗಳ ಮೈ ತೊಳೆಯುಂತಿಲ್ಲ.

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್​, ಬಾಗಲಕೋಟೆ

ಬಾಗಲಕೋಟೆ (ಮೇ.01): ಸಾಮಾನ್ಯವಾಗಿ ಇಲ್ಲಿ ಬೇಸಿಗೆ (Summer) ಬಂದರೆ ಸಾಕು ನದಿ (River) ತೀರದ ಗ್ರಾಮಸ್ಥರಿಗೆ ಆತಂಕ ಶುರುವಾಗುತ್ತೇ , ನೆಮ್ಮದಿಯಿಂದ ಹೊಲಕ್ಕೆ ಹೋಗೋ ಹಾಗಿಲ್ಲ, ನಿರ್ಭೀತಿಯಿಂದ ನದಿಯಲ್ಲಿ ದನಕರುಗಳಿಗೆ ನೀರು ಕುಡಿಸುವಂತಿಲ್ಲ, ಅವುಗಳ ಮೈ ತೊಳೆಯುಂತಿಲ್ಲ. ಸಾಲದ್ದಕ್ಕೆ ಹೊಲದಲ್ಲಿ ನೆಮ್ಮದಿಯಿಂದ ಕೆಲಸ ಸಹ ಮಾಡುವಂತಿಲ್ಲ, ರೈತರು ಇಲ್ಲಿ ಭಯದ ನೆರಳಲ್ಲೇ ಎಲ್ಲ ಕೆಲಸ ಮಾಡುವಂತಾಗಿದೆ. ಇಂತಹವೊಂದು ಪರಿಸ್ಥಿತಿ ಇದೀಗ ಬಾಗಲಕೋಟೆ (Bagalkote) ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.  ಹೌದು, ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆ ಕೃಷ್ಣಾ,ಮಲಪ್ರಭಾ, ಘಟಪ್ರಭಾ ಮೂರು ನದಿಗಳನ್ನು ಹೊಂದಿರುವ ಜಿಲ್ಲೆ. 

ಇಲ್ಲಿ ಮಳೆಗಾಲ‌ ಬಂತೆಂದರೆ ನದಿ ತೀರದ ಗ್ರಾಮಸ್ಥರಿಗೆ ಪ್ರವಾಹ ಭೀತಿ ಶುರುವಾಗುತ್ತೇ. ಇತ್ತ ಬೇಸಿಗೆ ಕಾಲ ಬಂತೆಂದರೆ ಸಾಕು ಜನಜಾನುವಾರುಗಳಿಗೆ ಕಿಲ್ಲರ್ ಮೊಸಳೆಗಳ (Crocodiles) ದಾಳಿ ಭಯ ಎದುರಾಗುತ್ತದೆ. ಬಿರು ಬೇಸಿಗೆಯ ಮಧ್ಯೆ ಜಿಲ್ಲೆಯಲ್ಲಿ ಕೃಷ್ಣಾ ,ಮಲಪ್ರಭಾ, ಘಟಪ್ರಭಾ ನದಿ ನೀರು ಖಾಲಿಯಾಗುತ್ತಾ ಬಂದಂತೆ ನದಿ ತೀರದಲ್ಲಿ ಮೊಸಳೆಗಳ ಹಾವಳಿ ಹೆಚ್ಚಾಗುತ್ತದೆ. ಇದರಿಂದ ನದಿ ತೀರದ ಗ್ರಾಮಸ್ಥರಿಗೆ ಇನ್ನಿಲ್ಲದ ಭಯ ಸೃಷ್ಟಿಯಾಗುತ್ತಿದೆ. ಇದಕ್ಕೆ ಕಾರಣ ಅಂದರೆ ನೀರು ಖಾಲಿಯಾಗುತ್ತಿದ್ದಂತೆ ಮೊಸಳೆಗಳು ಜನಜಾನುವಾರುಗಳ ಭೇಟಿಗೆ ಹೊಂಚು ಹಾಕಿ ನಿಲ್ಲುತ್ತಿವೆ. ಈ ಮಧ್ಯೆ ಅಲ್ಲಲ್ಲಿ ನದಿ ತೀರದ ಗ್ರಾಮಗಳಲ್ಲಿ ಈಗಾಗಲೇ ಮೊಸಳೆಗಳು ಕಂಡು ಬರುತ್ತಿವೆ. ಇದರಿಂದ ನದಿ ತೀರದ ಗ್ರಾಮಗಳು ಜನರು ಸೇರಿದಂತೆ ಹೊಲಗದ್ದೆಗಳಲ್ಲಿ ಕೆಲಸ ಮಾಡುವ ರೈತರಿಗೆ ಇನ್ನಿಲ್ಲದ ಆತಂಕ ಶುರುವಾಗಿದೆ.

Bagalkote: ರಂಗನಾಥ ಸ್ವಾಮಿಗೆ ಇಲ್ಲಿ ಸಾರಾಯಿ ನೈವೇದ್ಯ: ಮದ್ಯ ನೈವೇದ್ಯ ಸಲ್ಲಿಸಿ ಕೃತಾರ್ಥರಾಗ್ತಾರೆ ಭಕ್ತವೃಂದ

ಜಿಲ್ಲೆಯ ರಾಮಥಾಳ ಗ್ರಾಮದಲ್ಲಿ ಆತಂಕ ಸೃಷ್ಟಿಸಿದ ಮೊಸಳೆ: ಜಿಲ್ಲೆಯಲ್ಲಿ ಕಳೆದ ಎರಡು ದಿನದ ಹಿಂದೆಯಷ್ಟೇ ಹುನಗುಂದ ತಾಲೂಕಿನ ರಾಮಥಾಳ ಗ್ರಾಮದಲ್ಲಿ 6 ಅಡಿ ಉದ್ದದ ಬೃಹತ್ ಮೊಸಳೆಯೊಂದು ರಾತ್ರೋರಾತ್ರಿ ನದಿ ಬಿಟ್ಟು ಹೊಲಕ್ಕೆ ನುಗ್ಗಿದ್ದು, ಇವುಗಳ ಮಧ್ಯೆ ರೈತರು ಅದನ್ನು ಕಂಡು ಆತಂಕಕ್ಕೆ ಒಳಗಾದರು. ತಕ್ಷಣ ರೈತರೆಲ್ಲಾ ಸೇರಿ ಹರಸಾಹಸ ಪಟ್ಟು ಮೊಸಳೆ ಕಟ್ಟಿ ಹಾಕಲು ಮುಂದಾದರು. ಅಲ್ಲದೆ ಸುರಕ್ಷಿತ ತಾಣಕ್ಕೆ ಬಿಡಲು ಮುಂದಾದರು. ಹೀಗೆ ಜಿಲ್ಲೆಯ ನದಿ ತೀರದ ಗ್ರಾಮಗಳಲ್ಲಿ ಆತಂಕ ಶುರುವಾಗಿದ್ದು, ಇಂತಹ ಮೊಸಳೆಗಳ ನಿಯಂತ್ರಣಕ್ಕೆ ಸಧ್ಯ ಬಾಗಲಕೋಟೆ ಜಿಲ್ಲೆಯಲ್ಲಿ ಮೊಸಳೆ ಪಾರ್ಕ ನಿರ್ಮಾಣವಾಗಬೇಕು ಅಂತಾರೆ ಜಿಲ್ಲೆಯ ನಾಗರಿಕರು. 

ನದಿ ನೀರು ಕಡಿಮೆಯಾಗುತ್ತಿದ್ದಂತೆ ಶುರುವಾಗುತ್ತೇ ಆತಂಕ: ಬಾಗಲಕೋಟೆ ಜಿಲ್ಲೆಯಲ್ಲಿ ಪ್ರತಿ ಬಾರಿ ಬೇಸಿಗೆ ಬಂದಾಗ ಮೂರು ನದಿ ತೀರದಲ್ಲಿ ಮೊಸಳೆ ಹಾವಳಿ ನಿರಂತರವಾಗಿರುತ್ತೇ. ಆಹಾರ ಅರಸಿ ನದಿ ದಡಕ್ಕೆ ಬರುವ ಮೊಸಳೆಗಳು ಹೊಲಕ್ಕೂ ದಾಂಗುಡಿಯಿಡುತ್ತವೆ. ಇದರಿಂದ ನದಿ ತೀರದ ಜನರಿಗೆ ನೆಮ್ಮದಿಯೇ ಮಾಯವಾದಂತಾಗಿದೆ. ಜನ‌ಜಾನುವಾರುಗಳ ಮೇಲೆ ಮೊಸಳೆಗಳು ಯಾವಾಗ ದಾಳಿ ಮಾಡುತ್ತವೆಯೋ ಎಂದು ಭಯದಲ್ಲಿ ಬದುಕಬೇಕಾಗಿದೆ. ಇನ್ನು ಈಗಾಗಲೇ ಒಂದು ಅಧ್ಯಯನದ ಪ್ರಕಾರ ಜಿಲ್ಲೆಯಲ್ಲಿ‌ ಮೂರು ನದಿ ತೀರದಲ್ಲಿ ಒಟ್ಟು ಐದುನೂರಕ್ಕೂ ಹೆಚ್ಚು ಮೊಸಳೆ ಇರೋದು ಬೆಳಕಿಗೆ ಬಂದಿದೆ. ಇನ್ನು ಕಳೆದ ಒಂದು ದಶಕದಲ್ಲಿ‌ ಮೊಸಳೆಗಳ ದಾಳಿಗೆ ಮೂರರಿಂದ ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಅನೇಕ ಜಾನುವಾರುಗಳು ಮೊಸಳೆಗಳಿಗೆ ಆಹಾರವಾಗಿವೆ. ಇನ್ನು ಕೆಲವು ಕಡೆ ಗ್ರಾಮಕ್ಕೆ ನುಗ್ಗಿದಾಗ ಜನರ ಕೈಯಲ್ಲಿ ಸಿಕ್ಕು ಮೊಸಳೆಗಳು ಕೂಡ ಸಾವನ್ನಪ್ಪಿವೆ. ಈ ಮಧ್ಯೆ ನದಿ ನೀರು ಕಡಿಮೆಯಾಗುತ್ತಿದ್ದಂತೆ ಮೊಸಳೆ ಬಗೆಗಿನ ಆತಂಕ ಮಾತ್ರ ತಪ್ಪಿಲ್ಲ.

ಸಿದ್ದರಾಮಯ್ಯ ಸ್ವಕ್ಷೇತ್ರದಲ್ಲಿ ಸರ್ಕಾರಿ ಶಾಲೆಯ ಮಕ್ಕಳ ಗೋಳು ಕೇಳೋರಿಲ್ಲ!

ಬಾಗಲಕೋಟೆ ಜಿಲ್ಲೆಯಲ್ಲಿ ಹೆಚ್ಚಿದ ಮೊಸಳೆ ಪಾರ್ಕ್ ಬೇಡಿಕೆ: ಇತ್ತ ಜಿಲ್ಲೆಯಲ್ಲಿ ಪ್ರತಿವರ್ಷ ಬೇಸಿಗೆ ಸಮಯದಲ್ಲಿ ಅಲ್ಲಲ್ಲಿ ಮೊಸಳೆಗಳು ನದಿ ತೀರದ ಗ್ರಾಮಗಳಿಗೆ ನುಗ್ಗುತ್ತಿದ್ದಂತೆ ಇತ್ತ ಮೊಸಳೆ ಪಾರ್ಕ ಬೇಡಿಕೆ ಶುರುವಾಗುತ್ತೆ. ಯಾಕಂದರೆ ಮೊಸಳೆಗಳ ಕಾಟದಿಂದ ಅನೇಕ ಬಾರಿ ಜನಜಾನುವಾರ ಸಹಿತ ಮಾನವ ಹಾನಿಯೂ ಸಹ ಆಗಿದ್ದು, ಇದರಿಂದ ಜಿಲ್ಲೆಯಲ್ಲಿ ಮೊಸಳೆ ಪಾರ್ಕ್ ನಿರ್ಮಿಸಿ ಜನ ಜಾನುವಾರುಗಳನ್ನು ರಕ್ಷಣೆ ಮಾಡೋದರ ಜೊತೆಗೆ ಮೊಸಳೆಗಳನ್ನು ರಕ್ಷಣೆ ಮಾಡುವ ಕಾರ್ಯವಾಗಬೇಕಾಗಿದೆ. ಇಲ್ಲದಿದ್ದರೆ ಮತ್ತಷ್ಟು ಅನಾಹುತ ಆಗೋದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಮೊಸಳೆ ಪಾರ್ಕ ಸ್ಥಾಪನೆ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕಾಗಿದೆ  ಅಂತಾರೆ ಜಿಲ್ಲೆಯ ಜನರು. ಒಟ್ಟಾರೆ ನದಿ ತೀರದ ಗ್ರಾಮಸ್ಥರಿಗೆ ಮಳೆಗಾಲದಲ್ಲಿ ಪ್ರವಾಹ ಭೀತಿ ಇದ್ದರೆ, ಬೇಸಿಗೆಯಲ್ಲಿ ಕಿಲ್ಲರ್ ಮೊಸಳೆ ಕಾಟ ತಲೆದೋರಿದೆ. ಸರಕಾರ ಮೊಸಳೆ ಪಾರ್ಕ್ ನಿರ್ಮಿಸಿ ಮೊಸಳೆ ಜೊತೆಗೆ ಜನಜಾನುವಾರು ರಕ್ಷಣೆ ಮಾಡುವ ಕಾರ್ಯದತ್ತ ಮುನ್ನಡೆಯುತ್ತಾ ಅಂತ ಕಾದು ನೋಡಬೇಕಿದೆ.

click me!