ಉಡುಪಿ: 45 ಮಂದಿಗೆ ಸೋಂಕು, 113 ಮಂದಿ ಗುಣಮುಖ

Kannadaprabha News   | Asianet News
Published : Jun 09, 2020, 07:33 AM IST
ಉಡುಪಿ: 45 ಮಂದಿಗೆ ಸೋಂಕು, 113 ಮಂದಿ ಗುಣಮುಖ

ಸಾರಾಂಶ

ಕಳೆದೊಂದು ವಾರ ಉಡುಪಿ ಜಿಲ್ಲೆಯನ್ನು ತೀವ್ರ ಆತಂಕಕ್ಕೆ ಈಡು ಮಾಡಿದ್ದ ಕೊರೋನಾ ಪೀಡಿತರ ಸಂಖ್ಯೆ ಈ ವಾರದಲ್ಲಿ ಗಣನೀಯವಾಗಿ ಕಡಿಮೆಯಾಗುತ್ತಿದೆ. ಸೋಮವಾರ 45 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ 946ಕ್ಕೇರಿದೆ. ಇದೇ ವೇಳೆ 113 ಮಂದಿ ಸೋಂಕು ಮುಕ್ತರಾಗಿ ಬಿಡುಗಡೆಯಾಗಿದ್ದಾರೆ.

ಉಡುಪಿ(ಜೂ.09): ಕಳೆದೊಂದು ವಾರ ಉಡುಪಿ ಜಿಲ್ಲೆಯನ್ನು ತೀವ್ರ ಆತಂಕಕ್ಕೆ ಈಡು ಮಾಡಿದ್ದ ಕೊರೋನಾ ಪೀಡಿತರ ಸಂಖ್ಯೆ ಈ ವಾರದಲ್ಲಿ ಗಣನೀಯವಾಗಿ ಕಡಿಮೆಯಾಗುತ್ತಿದೆ. ಸೋಮವಾರ 45 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ 946ಕ್ಕೇರಿದೆ. ಇದೇ ವೇಳೆ 113 ಮಂದಿ ಸೋಂಕು ಮುಕ್ತರಾಗಿ ಬಿಡುಗಡೆಯಾಗಿದ್ದಾರೆ.

ಸೋಮವಾರ ಪತ್ತೆಯಾದ 45 ಸೋಂಕಿತರಲ್ಲಿ 30 ಮಂದಿ ಪುರುಷರು, 11 ಮಂದಿ ಮಹಿಳೆಯರು ಮತ್ತು 4 ಮಂದಿ ಮಕ್ಕಳಿದ್ದಾರೆ. ಹೋಂ ಕ್ವಾರಂಟೈನ್‌ನಲ್ಲಿದ್ದ ಅವರನ್ನು ಕೋವಿಡ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ರಾಜ್ಯದಲ್ಲಿ ಸೋಂಕು ಹರಡಲು ಮಹಾರಾಷ್ಟ್ರದಿಂದ ಬಂದವರೇ ಕಾರಣ: ಬೊಮ್ಮಾಯಿ

ಅವರಲ್ಲಿ 44 ಮಂದಿ ಮಹಾರಾಷ್ಟ್ರದಿಂದ ಬಂದವರಾದರೆ, ಮತ್ತೊಂದು ಸ್ಥಳೀಯ ಸೋಂಕಿತ ಲ್ಯಾಬ್‌ ಟೆಕ್ನಿಶಿಯನ್‌ ಒಬ್ಬರ 5 ವರ್ಷದ ಗಂಡು ಮಗುವಿಗೆ ಸೋಂಕು ಪತ್ತೆಯಾಗಿದೆ. ಅವರ ಮೂಲವನ್ನು ಜಿಲ್ಲಾಡಳಿತ ತನಿಖೆ ನಡೆಸುತ್ತಿದೆ.

ಸೋಮವಾರ 193 ಕೋವಿಡ್‌ ವರದಿಗಳು ಬಂದಿದ್ದು, ಇನ್ನು ಕೇವಲ 28 ಮಂದಿಯ ಕೋವಿಡ್‌ ಪರೀಕ್ಷೆಯ ವರದಿ ಬರಲು ಬಾಕಿ ಇದೆ. ಆದ್ದರಿಂದ ಇನ್ನು ಮುಂದೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಬಹುದು.

ಕೇವಲ 2 ಮಾದರಿ ಪರೀಕ್ಷೆ

ಜಿಲ್ಲೆಯಲ್ಲಿ ಸೋಂಕು ಶಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು, ಸೋಮವಾರ ಕೇವಲ ಇಬ್ಬರ ಗಂಟಲದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಅವರಲ್ಲೊಬ್ಬರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರೆ, ಇನ್ನೊಬ್ಬರು ಶೀತಜ್ವರದಿಂದ ನರಳುತ್ತಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 2498 ಮಂದಿ ಹೋಂ ಕ್ವಾರಂಟೈನ್‌, 1156 ಮಂದಿ ಸರ್ಕಾರಿ ಕ್ವಾರಂಟೈನ್‌, ಒಬ್ಬರು ಆಸ್ಪತ್ರೆ ಕ್ವಾರಂಟೈನ್‌ ಮತ್ತು 81 ಮಂದಿ ಐಸೋಲೇಶನ್‌ ವಾರ್ಡ್‌ನಲ್ಲಿ ನಿಗಾದಲ್ಲಿದ್ದಾರೆ.

ಎರಡು ವಾರದಲ್ಲಿ ಎಲ್ಲರೂ ಗುಣಮುಖ: ಬೊಮ್ಮಾಯಿ

ಸೋಮವಾರ 113 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 387 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ. ಆದ್ದರಿಂದ ಪ್ರಸ್ತುತ 559 ಮಂದಿ ಮಾತ್ರ ಸಕ್ರಿಯ ಸೋಂಕಿತರಿದ್ದಾರೆ. ಈಗ ಪ್ರತಿದಿನ ಸುಮಾರು 100ಕ್ಕೂ ಅಧಿಕ ಮಂದಿ ಬಿಡುಗಡೆಯಾಗಿತ್ತಿದ್ದು, ಇನ್ನೆರಡು ವಾರಗಳಲ್ಲಿ ಎಲ್ಲರೂ ಬಿಡುಗಡೆಯಾಗುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿಯಲ್ಲಿ ಸಮಾಧಾನ ವ್ಯಕ್ತಪಡಿಸಿದ್ದಾರೆ.

ತಂದೆಯಿಂದ ಮಗುವಿಗೆ ಸೋಂಕು

ಕಾಪು ತಾಲೂಕಿನ ಮಣಿಪುರ ಗ್ರಾಮದಲ್ಲಿ ತಂದೆ, ಮಗುವಿಗೆ ಕೊರೋನಾ ಸೋಂಕು ದೃಢವಾಗಿದ್ದು, ಈಗ ಅವರ ಮನೆಯವರೆಲ್ಲರಿಗೂ ಆತಂಕ ಶುರುವಾಗಿದೆ. ಅವರ ಮನೆಯನ್ನು ಕಂಟೈನ್‌ಮೆಂಟ್‌ ಆಗಿ ಗುರುತಿಸಿ ಸೀಲ್‌ ಮಾಡಲಾಗಿದೆ. ಖಾಸಗಿ ಆಸ್ಪತ್ರೆಯೊಂದರಲ್ಲಿ ಉದ್ಯೋಗಿಯಾಗಿರುವ ತಂದೆಗೆ ಅನಾರೋಗ್ಯ ಕಾರಣಕ್ಕೆ ಶನಿವಾರ ಪರೀಕ್ಷೆಗೊಳಪಡಿಸಿ, ಭಾನುವಾರ ಕೊರೋನಾ ಸೋಂಕು ಪತ್ತೆಯಾಗಿತ್ತು. ಅವರಿಗೆ ಹೇಗೆ ಸೋಂಕು ತಗಲಿತು ಎಂಬುದು ಇನ್ನೂ ದೃಢಪಟ್ಟಿಲ್ಲ. ಅವರ ಮನೆಯವರನ್ನೂ ಪರೀಕ್ಷೆಗೊಳಪಡಿಸಲಾಗಿದ್ದು, ಸೋಮವಾರ 5 ವರ್ಷದ ಮಗುವಿಗೆ ಕೊರೋನಾ ಇರುವುದು ಪತ್ತೆಯಾಗಿದೆ.

PREV
click me!

Recommended Stories

SSLC ಫಲಿತಾಂಶ ಪ್ರಗತಿ: ಮಧ್ಯರಾತ್ರಿ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಬಂದ BEO!
ಹಾಸನದ ತಿರುಪತಿಹಳ್ಳಿ ಬೆಟ್ಟದ ಮೇಲೆ 50ಕ್ಕೂ ಅಧಿಕ ಉಲ್ಕೆಗಳ ಸುರಿಮಳೆ!