ರಾಜ್ಯದಲ್ಲಿ ಕೊರೋನಾ ಮಹಾಮಾರಿ ಹೆಚ್ಚಾಗುತ್ತಲೇ ಬಂದಿದ್ದು, ಇಲ್ಲಿಗೆ ಇದೀಗ ದಕ್ಷಿಣ ಆಫ್ರಿಕಾ ಡೆಡ್ಲಿ ವೈರಸ್ ಎಂಟ್ರಿಯಾಗಿದೆ.
ಬೆಂಗಳೂರು (ಮಾ.11): ವೇಗವಾಗಿ ಹಬ್ಬುವ ಸಾಮರ್ಥ್ಯಹೊಂದಿರುವ ದಕ್ಷಿಣ ಆಫ್ರಿಕಾ ಪ್ರಭೇದದ ಕೊರೋನಾ ವೈರಾಣು ರಾಜ್ಯಕ್ಕೆ ಮೊದಲ ಬಾರಿಗೆ ಕಾಲಿರಿಸಿದೆ
ದಕ್ಷಿಣ ಆಫ್ರಿಕಾದಿಂದ ಬಂದಿದ್ದ ವ್ಯಕ್ತಿಯನ್ನು ವಿಮಾನ ನಿಲ್ದಾಣದಲ್ಲೇ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಸೋಂಕು ಧೃಢ ಪಡುತ್ತಿದ್ದಂತೆ ವ್ಯಕ್ತಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು ಮಾದರಿಯನ್ನು ನಿಮ್ಹಾನ್ಸ್ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಸೋಂಕಿತ ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು ರೋಗ ಲಕ್ಷಣ ಹೊಂದಿಲ್ಲ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಕೊರೋನಾ ಅಬ್ಬರ ಮತ್ತೆ ಆರಂಭಗೊಳ್ಳುವ ಲಕ್ಷಣ ಗೋಚರಿಸಿದ್ದು, ಬುಧವಾರ 760 ಮಂದಿಯಲ್ಲಿ ಸೋಂಕು ಧೃಢಪಟ್ಟಿದೆ. ಇದರಲ್ಲಿ ಮುಕ್ಕಾಲು ಪಾಲು ಪ್ರಕರಣ ಬೆಂಗಳೂರು ನಗರ (488)ದಲ್ಲೇ ವರದಿಯಾಗಿದೆ.
ಕರ್ನಾಟಕದಲ್ಲಿ ಮತ್ತೆ ಏರುತ್ತಿದೆ ಕೊರೋನಾ ಸೋಂಕಿನ ಪ್ರಮಾಣ: ಇರಲಿ ಎಚ್ಚರ .
ಈ ನಡುವೆ, ಬೆಂಗಳೂರು ನಗರ ವ್ಯಾಪ್ತಿಯ ಐವರು, ದಕ್ಷಿಣ ಕನ್ನಡದ ಒಬ್ಬರು ಹೀಗೆ ಒಟ್ಟು ಆರು ಮಂದಿ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. 331 ಮಂದಿ ಮಾತ್ರ ಈ ದಿನ ಗುಣಮುಖರಾಗಿದ್ದಾರೆ.
ಬುಧವಾರ 70,133 ಮಂದಿ ಕೊರೋನಾ ಪರೀಕ್ಷೆಗೆ ಒಳಗಾಗಿದ್ದು ಪಾಸಿಟಿವಿಟಿ ದರ ಶೇ. 1.08ರಷ್ಟಿದೆ. ಇದು 2021ರ ಗರಿಷ್ಠ ಪಾಸಿಟಿವಿಟಿ ದರ. ಈ ಹಿಂದೆ ಜನವರಿ 23 ರಂದು ಶೇ. 1.04ರ ಪಾಸಿಟಿವಿಟಿ ದಾಖಲಾಗಿತ್ತು. ಕಳೆದ ಮೂರು ದಿನಗಳಿಂದ ಪಾಸಿಟಿವಿಟಿ ದರ ಏರಿಕೆಯಾಗುತ್ತಲೇ ಇದೆ.