ಹರಪನಹಳ್ಳಿ: ವರದಿಗೂ ಮುನ್ನವೇ ಗ್ರಾಮಕ್ಕೆ ಬಂದ ಕೊರೋನಾ ಸೋಂಕಿತ..!

By Kannadaprabha NewsFirst Published Jun 24, 2020, 8:41 AM IST
Highlights

ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಮತ್ತಿಹಳ್ಳಿ ಗ್ರಾಮಸ್ಥರಲ್ಲಿ ಮನೆ ಮಾಡಿದ ಆತಂಕ| ಆತ ಆಗಮಿಸಿದ ನಂತರ ತಡರಾತ್ರಿ ಆತನಿಗೆ ಕೋವಿಡ್‌ ಸೋಂಕು ದೃಢ| ಮಂಗಳವಾರ ಬೆಳಗಿನ ಜಾವ ಆತನನ್ನು ಕರೆದುಕೊಂಡು ಹೋಗಿ ತೋರಣಗಲ್‌ ಒಪಿಜಿ ಕೇಂದ್ರಕ್ಕೆ ದಾಖಲಿಸಿದ ಅಧಿಕಾರಿಗಳು|

ಹರಪನಹಳ್ಳಿ(ಜೂ.24): ಗಂಟಲು ದ್ರವ ಪರೀಕ್ಷೆ ವರದಿ ಬರುವ ಪೂರ್ವದಲ್ಲಿಯೇ ಬೇರೆ ಕಡೆಯಿಂದ ತಾಲೂಕಿಗೆ ಬರುವ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಪಟ್ಟಣದ ಬಾಣಗೇರಿ, ತೆಲಿಗಿ ಗ್ರಾಮದ ಪ್ರಕರಣಗಳು ಮುಗಿದ ಮೇಲೆ ಇದೇ ರೀತಿ ಪ್ರಕರಣ ತಾಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ ಜರುಗಿದೆ.

ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಯೊಬ್ಬರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಿಕೊಡಲಾಗಿದೆ. ಆ ವರದಿ ಬರುವ ಪೂರ್ವದಲ್ಲಿಯೇ ಆ ವ್ಯಕ್ತಿ ಸ್ವಂತ ಗ್ರಾಮ ಹರಪನಹಳ್ಳಿ ತಾಲೂಕಿನ ಮತ್ತಿಹಳ್ಳಿ ಗ್ರಾಮಕ್ಕೆ ಸೋಮವಾರ ಸಂಜೆ ಆಗಮಿಸಿದ್ದಾನೆ.

ಬಳ್ಳಾರಿ: ಒಂದೇ ದಿನ ಮೂವರನ್ನ ಬಲಿ ಪಡೆದ ಡೆಡ್ಲಿ ಕೊರೋನಾ..!

ಆತ ಆಗಮಿಸಿದ ನಂತರ ತಡರಾತ್ರಿ ಆತನಿಗೆ ಕೋವಿಡ್‌ ಸೋಂಕು ಇರುವುದು ದೃಢ ಪಟ್ಟಿದೆ. ಆಗ ಅಧಿಕಾರಿಗಳು ಮಂಗಳವಾರ ಬೆಳಗಿನ ಜಾವ ಆತನನ್ನು ಕರೆದುಕೊಂಡು ಹೋಗಿ ತೋರಣಗಲ್‌ ಒಪಿಜಿ ಕೇಂದ್ರಕ್ಕೆ ದಾಖಲಿಸಿದ್ದಾರೆ.
ಸೋಂಕಿತನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದವರನ್ನು ಮತ್ತಿಹಳ್ಳಿ ಗ್ರಾಮದಲ್ಲಿಯೇ ಹೋಮ್‌ ಕ್ವಾರಂಟೈನ್‌ಗೆ ಅಳವಡಿಸಲಾಗಿದೆ ಹಾಗೂ ಗ್ರಾಮದ ಕುರುಬರ ಓಣಿ ಹಾಗೂ ಜನತಾ ಕಾಲನಿಗಳನ್ನು ಸೀಲ್‌ ಡೌನ್‌ ಮಾಡಲಾಗಿದೆ. ಮತ್ತಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ವಿಜಯಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಮತ್ತಿಹಳ್ಳಿ ಗ್ರಾಪಂ ಅಧ್ಯಕ್ಷೆ ಪಿ.ಚೆನ್ನಮ್ಮ ರಾಮಣ್ಣ ಅವರು ದ್ರವ ಪರೀಕ್ಷೆ ವರದಿ ಬರುವ ಪೂರ್ವದಲ್ಲಿಯೇ ಗ್ರಾಮಕ್ಕೆ ಆಗಮಿಸಬಾರದಿತ್ತು, ವೈದ್ಯರು ಇಲ್ಲಿಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಹೇಳಿದರು.
 

click me!