ಗಂಗಾವತಿಯಲ್ಲಿ ಹೆಚ್ಚುತ್ತಿರುವ ಕೋವಿಡ್‌ ಸೋಂಕಿತರ ಸಂಖ್ಯೆ: ಎಚ್ಚೆತ್ತುಕೊಳ್ಳದ ಜನತೆ

Kannadaprabha News   | Asianet News
Published : Jul 08, 2020, 07:41 AM IST
ಗಂಗಾವತಿಯಲ್ಲಿ ಹೆಚ್ಚುತ್ತಿರುವ ಕೋವಿಡ್‌ ಸೋಂಕಿತರ ಸಂಖ್ಯೆ: ಎಚ್ಚೆತ್ತುಕೊಳ್ಳದ ಜನತೆ

ಸಾರಾಂಶ

ಹೊರಗಿನಿಂದ ಬಂದವರಿಂದಲೇ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚು| ಗಂಗಾವತಿ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿರುವ ಅಂಗಡಿಗಳಲ್ಲಿ ಜನಸಂದಣಿಯಾಗಿದ್ದು ಮಾಸ್ಕ್‌ ಮತ್ತು ಅಂತರ ಇಲ್ಲದೆ ಇರುವುದು ಸೋಂಕು ಹರಡಲು ಕಾರಣ ಎನ್ನಲಾಗುತ್ತಿದೆ|

ರಾಮಮೂರ್ತಿ ನವಲಿ

ಗಂಗಾವತಿ(ಜು.08): ನಗರ ಮತ್ತು ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೊವೀಡ್‌ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಭಯದ ವಾತಾ​ವ​ರಣ ಸೃಷ್ಟಿ​ಯಾ​ಗಿ​ದೆ.
ಕಳೆದ ನಾಲ್ಕು ತಿಂಗಳ ಹಿಂದೆ ಕೋವಿಡ್‌ ಸೋಂಕು ರಾಜ್ಯಾದ್ಯಂತ ನಿಧಾನವಾಗಿ ಕಂಡು ಬರಲಾರಂಭಿಸಿದರೂ ಸಹ 2 ತಿಂಗಳ ಕಾಲ ಕೊಪ್ಪಳ ಜಿಲ್ಲೆಯಲ್ಲಿ ಸೋಂಕು ಹಬ್ಬಿದ್ದಿಲ್ಲ. ನಂತರ ಲಾಕ್‌ ಡೌನ್‌ ಸಡಿಲಗೊಳ್ಳುತ್ತಿದ್ದಂತಯೆ ಜನಸಂದಣಿಯಾಗಿದ್ದರಿಂದ ಸೋಂಕು ಹರಡಲು ಪ್ರಾರಂಭವಾಗಿದೆ.

ಎಚ್ಚೆತ್ತುಕೊಳ್ಳದ ಜನತೆ:

ಗಂಗಾವತಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹೆಚ್ಚಾಗಿ ಹರಡುತ್ತಿದ್ದರೂ ಸಹ ಜನರು ಎಚ್ಚೆತ್ತುಕೊಳ್ಳದಂತಾಗಿದೆ. ಗಂಗಾವತಿ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿರುವ ಅಂಗಡಿಗಳಲ್ಲಿ ಜನಸಂದಣಿಯಾಗಿದ್ದು ಮಾಸ್ಕ್‌ ಮತ್ತು ಅಂತರ ಇಲ್ಲದೆ ಇರುವುದು ಸೋಂಕು ಹರಡಲು ಕಾರಣ ಎನ್ನಲಾಗುತ್ತಿದೆ. ಪ್ರಮುಖವಾಗಿ ಹೋಟೆಲ್‌, ಬಾರ್‌ ಮತ್ತು ಮದ್ಯದ ಅಂಗಡಿಗಳು ರಾಜಾರೋಷವಾಗಿ ವ್ಯಾಪಾರ ನಡೆಸುತ್ತಿದ್ದು ಮದ್ಯಪ್ರಿಯರು ಕೊರೋನಾ ಲೆಕ್ಕಿಸದೆ ಹಾಯಾಗಿ ಕಾಲ ಕಳೆಯುತ್ತಿದ್ದಾರೆ.

ಕೊಪ್ಪಳ: ಒಂದೇ ದಿನ ಹತ್ತು ಜನರಿಗೆ ಕೊರೋನಾ ಪಾಸಿಟಿವ್‌

ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರು ಸಹ ಮಾಸ್ಕ್‌ ಧರಿಸದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಪ್ರಯಾಣ ಮಾಡುತ್ತಿದ್ದಾರೆ. ಬಸ್‌ ನಿಲ್ದಾಣದ ಹೊರಗೆ ಕಸ ಬಿದ್ದು ದುರ್ವಾ​ಸನೆ ಹೆಚ್ಚು​ತ್ತಿದೆ. ಸರ್ಕಾರ ಕೊರೋನಾ ನಿಯಂತ್ರಣಕ್ಕಾಗಿ ಕೆಲ ನಿಯಂತ್ರಣ ಹೇರಿ ಸಮಯ ನಿಗದಿ ಪಡಿಸಿದ್ದರೂ ಸಹ ವ್ಯಾಪಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ.

ಹೊರಗಿನಿಂದ ಬಂದವರೇ ಹೆಚ್ಚು ಸೋಂಕಿತರು:

ಗಂಗಾವತಿ ನಗರ ಮತ್ತು ವಿವಿಧ ಗ್ರಾಮಗಳಲ್ಲಿ ಪತ್ತೆಯಾಗಿರುವ ಸೋಂಕಿತರಲ್ಲಿ ಹೊರಗಿನವರೇ ಹೆಚ್ಚಾಗಿದ್ದಾರೆ. ಬೆಂಗಳೂರು, ಪುನಾ, ಗೋವಾ, ಬಳ್ಳಾರಿಯ ಜಿಂದಾಲ್‌ ಸೇರಿದಂತೆ ವಿವಿಧೆಡೆ ದುಡಿಯಲು ಹೋಗಿ ಮರಳಿದ ಕಾರ್ಮಿಕರಲ್ಲಿ ಸೋಂಕು ವ್ಯಾಪಕವಾಗಿದೆ. ಗ್ರಾಮಗಳಲ್ಲಿ ನಡೆಯುತ್ತಿರುವ ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕ​ಲ್ಲಿಯೂ ಸೋಂಕು ಕಾಣಿಸಿಕೊಂಡಿದೆ. ಬೆಂಗಳೂರಿನಿಂದ ಬಂದವರಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ.
ಇಲ್ಲಿಯವರಿಗೆ ಒಟ್ಟು 55 ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದು, ಇದರಲ್ಲಿ 15ಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ. ತಾಲೂಕಿನ ಮರಳಿ ಗ್ರಾಮದಲ್ಲಿ ಓರ್ವ ಮಹಿಳೆ ಮತ್ತು ಜಂಗ್ಲಿ ರಂಗಾಪುರ ಗ್ರಾಮದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ.

ಸೀ​ಲ್‌​ಡೌನ್‌ಗೂ ಗಮನ ಹರಿಸದ ಜನತೆ:

ಕೋವಿಡ್‌ ಸೋಂಕಿತರ ಪ್ರದೇಶವನ್ನು ತಾಲೂಕು ಆಡಳಿತ, ನಗರಸಭೆ ಮತ್ತು ಪೊಲೀಸ್‌ ಇಲಾಖೆ ಜಂಟಿಯಾಗಿ ಸೀಲ್‌ಡೌನ್‌ ಮಾಡಿದರೂ ಸಹ ಆ ಪ್ರದೇಶದ ಜನತೆ ಮಾತ್ರ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಸೋಂಕಿತರ ನಿವಾಸದಿಂದ 100 ರಿಂದ 200 ಮೀಟರ್‌ ಅಂತರದಲ್ಲಿ ಸೀಲ್‌ಡೌನ್‌ ಮಾಡಿ ಯಾರೂ ಸಂಚಾರಿಸ​ದಂತೆ ನಿಯಮವಿದ್ದರೂ ಸಹ ಆ ಪ್ರದೇಶದ ಜನರು ವಾಣಿಜ್ಯ ವ್ಯವಹಾರ ಮಾತ್ರ ಯಥಾಸ್ಥಿತಿಯಾಗಿ ಪ್ರಾರಂಭಿಸುತ್ತಿದ್ದಾರೆ. ಜನ, ವಾಹನ ಸಂಚಾರವೂ ಎಂದಿನಂತೆ ಇದೆ. ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಸಹ ಜನತೆ ಮಾತ್ರ ಕ್ಯಾರೆ ಎನ್ನದೆ ಕೋವಿಡ್‌ ನಿಯಮವನ್ನು ಉಲ್ಲಂಘಿಸುತ್ತಿರುವುದು ಸಾಮಾನ್ಯವಾಗಿದೆ. ಗಂಗಾವತಿ ನಗರದಲ್ಲಿ ದಿನದಿಂದ ದಿನಕ್ಕೆ ಸೋಂಕು ಹೆಚ್ಚಾಗುತ್ತಿದ್ದು, ಜನರು ಎಚ್ಚೆತ್ತುಕೊಳ್ಳ ಬೇಕಾಗಿದೆ.

ಆರೋಗ್ಯ ಇಲಾಖೆ ನೀಡಿದ ಕೊವೀಡ್‌ ಮಾಹಿತಿಯಂತೆ ಆಯಾ ಪ್ರದೇಶಗಳಲ್ಲಿ ಸೀಲ್‌ಡೌನ್‌ ಮಾಡಲಾಗುತ್ತದೆ. ಅಲ್ಲದೆ ಜನರಿಗೂ ಜಾಗೃತಿಯಿಂದ ಇರಲು ಸೂಚಿಸಲಾಗಿದೆ. ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಬಗ್ಗೆ ತಿಳಿಸಲಾಗಿದೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿಯೂ ಸಹ ಜನರಿಗೆ ಕೋವೀಡ್‌ ಜಾಗೃತಿ ತಿಳಿಸಲಾಗಿದೆ ಎಂದು ಗಂಗಾವತಿ ತಹಸೀಲ್ದಾರ್‌ ಚಂದ್ರಕಾಂತ ಅವರು ಹೇಳಿದ್ದಾರೆ. 

PREV
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ