ಕೊಪ್ಪಳ ಸಂಸದ ಸಂಗಣ್ಣ ಕರಡಿಗೂ ಕೊರೋನಾ ಸೋಂಕು

By Kannadaprabha NewsFirst Published Aug 20, 2020, 12:09 PM IST
Highlights

ಯಾವುದೇ ಗುಣಲಕ್ಷಣಗಳಿಲ್ಲ ಹಾಗೂ ಆರೋಗ್ಯದ ಇತರೆ ಸಮಸ್ಯೆ ಇಲ್ಲದೆ ಇರುವುದರಿಂದ ಮನೆಯಲ್ಲಿಯೇ 12 ದಿನಗಳ ಕಾಲ ಇರುವ ಮೂಲಕ ತೀರಾ ಕನಿಷ್ಠ ಚಿಕಿತ್ಸೆಯನ್ನು ಪಡೆದರೆ ಸಾಕು ಎಂದು ವೈದ್ಯರು ಸಲಹೆ ನೀಡಿದ್ದಾರೆ| ಈ ಬಗ್ಗೆ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದರಲ್ಲದೆ, ಪಾಸಿಟಿವ್‌ ಬಂದಿರುವುದನ್ನು ಬಹಿರಂಗಪಡಿಸಿದ ಸಂಗಣ್ಣ ಕರಡಿ| 

ಕೊಪ್ಪಳ(ಆ.20):ಜಿಲ್ಲೆಯ ಜನಪ್ರತಿನಿಧಿಗಳನ್ನು ಕೊರೋನಾ ಬೆನ್ನಟ್ಟಿರುವಂತೆ ಕಾಣುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ, ಗಂಗಾವತಿ, ಕೊಪ್ಪಳ ಹಾಗೂ ಯಲಬುರ್ಗಾ ಶಾಸಕರಿಗೆ ಕೊರೋನಾ ಸೋಂಕು ಧೃಡಪಟ್ಟು ಗುಣಮುಖರಾಗುತ್ತದ್ದಂತೆಯೇ ಇದೀಗ ಬಿಜೆಪಿ ಸಂಸದ ಸಂಗಣ್ಣ ಕರಡಿ ಅವರೂ ಈಗ ಕೋವಿಡ್‌ -19 ಪಾಸಿಟಿವ್‌.

ಅಂಥ ಗಂಭೀರ ಲಕ್ಷಣಗಳಿಲ್ಲದೇ ಇದ್ದರೂ ಮುಂಜಾಗ್ರತೆಯಿಂದಾಗಿ ಸ್ವಾಬ್‌ ಟೆಸ್ಟ್‌ ಕೊಟ್ಟಿದ್ದರು. ಅದು ಪಾಸಿಟಿವ್‌ ಬಂದಿರುವ ಹಿನ್ನೆಲೆಯಲ್ಲಿ ಈಗ ಅವರು ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿಯೇ ಐಸೋಲೇಶನ್‌ ಆಗಿದ್ದಾರೆ.
ಯಾವುದೇ ಗುಣಲಕ್ಷಣಗಳಿಲ್ಲ ಹಾಗೂ ಆರೋಗ್ಯದ ಇತರೆ ಸಮಸ್ಯೆ ಇಲ್ಲದೆ ಇರುವುದರಿಂದ ಮನೆಯಲ್ಲಿಯೇ 12 ದಿನಗಳ ಕಾಲ ಇರುವ ಮೂಲಕ ತೀರಾ ಕನಿಷ್ಠ ಚಿಕಿತ್ಸೆಯನ್ನು ಪಡೆದರೆ ಸಾಕು ಎಂದು ವೈದ್ಯರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನು ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದರಲ್ಲದೆ, ಪಾಸಿಟಿವ್‌ ಬಂದಿರುವುದನ್ನು ಬಹಿರಂಗಪಡಿಸಿದ್ದಾರೆ.

ಸಚಿವ ಬಿ.ಸಿ. ಪಾಟೀಲ್‌ಗೆ ಕೊರೋನಾ ದೃಢ: ಆತಂಕದಲ್ಲಿ ಕೊಪ್ಪಳದ ಜನತೆ..!

ನನ್ನ ಜೊತೆಗೆ ನೇರವಾಗಿ ಸಂಪರ್ಕಕ್ಕೆ ಬಂದವರಿಗೆ ಕೊರೋನಾ ಲಕ್ಷಣಗಳಿದ್ದರೆ ಕೂಡಲೇ ಟೆಸ್ಟ್‌ ಮಾಡಿಸಿಕೊಳ್ಳಿ’ ಎಂದು ಸಲಹೆ ನೀಡಿದ್ದಾರೆ. ಇದೊಂದು ಸಾಮಾನ್ಯ ಕಾಯಿಲೆಯಾಗಿದ್ದು, ಯಾರೂ ಭಯಪಡುವ ಅಗತ್ಯವಿಲ್ಲ. ಆದ್ದರಿಂದ, ಕಳೆದ ನಾಲ್ಕಾರು ದಿನಗಳಿಂದ ನನ್ನ ಜೊತೆಗೆ ನೇರವಾಗಿ ಸಂಪರ್ಕಕ್ಕೆ ಬಂದವರು ತಮ್ಮ ಆರೋಗ್ಯದ ಕಡೆಗೂ ಗಮನ ಹರಿಸುವಂತೆ ಸಂಸದ ಸಂಗಣ್ಣ ಕರಡಿ ಕೋರಿದ್ದಾರೆ.

ಸಾಲಗಟ್ಟಿದ ಕೊರೋನಾ

ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು, ದಿನೇ ದಿನೆ ಅದು ಎಲ್ಲ ವರ್ಗದವರನ್ನು ಬಾಧಿಸುತ್ತಿದೆ. ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಕೊರೋನಾ ಪಾಸಿಟಿವ್‌ ಬರುವುದರೊಂದಿಗೆ ಜಿಲ್ಲೆಯಲ್ಲಿ ಶಾಸಕರಿಗೂ ಬರಲಾರಂಭಿಸಿತು. ಇದಾದ ಮೇಲೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೂ ಬಂತು. ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್‌ಗೂ ಕೊರೋನಾ ಸೋಂಕು ತಗು​ಲಿತ್ತು. ಇವರೆಲ್ಲರೂ ಈಗಾಗಲೇ ಗುಣಮುಖರಾಗಿ ಮತ್ತೆ ಕಾರ್ಯೋನ್ಮುಖರಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲರಿಗೂ ಕೊರೋನಾ ಪಾಸಿಟಿವ್‌ ಬಂದು, ಅವರು ಗುಣಮುಖರಾಗಿ ಮತ್ತೆ ಎರಡು ಬಾರಿ ಸಭೆಗಳನ್ನು ನಡೆಸಿದ್ದಾರೆ.

ನನಗೆ ಕೊರೋನಾ ದೃಢಪಟ್ಟಿದೆ. ಆದ್ದರಿಂದ ನನ್ನ ಸಂಪರ್ಕಕ್ಕೆ ಬಂದವರು ಲಕ್ಷಣಗಳಿದ್ದರೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ನಾನು ಆರೋಗ್ಯವಾಗಿಯೇ ಇದ್ದು, ಸಮಸ್ಯೆ ಇಲ್ಲ. ಹೋಮ್‌ ಐಸೋಲೇಶನ್‌ ಆಗಿರುವುದರಿಂದ ಸಾರ್ವಜನಿಕರು ತುರ್ತು ಅಗತ್ಯವಿದ್ದರೆ ನನ್ನ ಆಪ್ತ ಸಹಾಯಕರನ್ನು ಸಂಪರ್ಕಿಸಿ ಎಂದು ಸಂಸದ ಸಂಗಣ್ಣ ಕರಡಿ ಅವರು ತಿಳಿಸಿದ್ದಾರೆ. 

click me!