Bengaluru: ಒಂದು ಲಕ್ಷ ಮನೆ ನಿರ್ಮಾಣಕ್ಕೆ ಎಲ್ಲ ಇಲಾಖೆಗಳ ಸಹಕಾರ ಅಗತ್ಯ: ಸೋಮಣ್ಣ

By Kannadaprabha NewsFirst Published Jan 5, 2022, 6:36 AM IST
Highlights

*  ರಾಜೀವ್‌ ಗಾಂಧಿ ವಸತಿ ನಿಗಮದಿಂದ ಯೋಜನೆ
*  ಮಳೆ ನೀರು ನಿಲ್ಲುವುದರಿಂದ ರೈತರು, ವಾಹನ ಸಂಚಾರಕ್ಕೆ ಅಡಚಣೆ
*  ವಿವಿಧ ಕಾರಣಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಪರಿಹರಿಸಬೇಕು 

ಬೆಂಗಳೂರು(ಜ.05):  ರಾಜೀವ್‌ಗಾಂಧಿ ವಸತಿ ನಿಗಮದ ವತಿಯಿಂದ ಬೆಂಗಳೂರಿನಲ್ಲಿ(Bengaluru) ನಿರ್ಮಿಸುತ್ತಿರುವ ಒಂದು ಲಕ್ಷ ಮನೆಗಳನ್ನು(Home) ಶೀಘ್ರವಾಗಿ ಪೂರ್ಣಗೊಳ್ಳಲು ಬಿಡಿಎ(BDA) ಸೇರಿದಂತೆ ಇತರೆ ಇಲಾಖೆಗಳ ಸಹಕಾರ ಅತ್ಯಗತ್ಯ ಎಂದು ವಸತಿ ಸಚಿವ ವಿ. ಸೋಮಣ್ಣ(V Somanna) ಹೇಳಿದರು.

ಮಂಗಳವಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (ಬಿಡಿಎ) ಒಂದು ಲಕ್ಷ ಮನೆಗಳ ನಿರ್ಮಾಣಕ್ಕೆ ಅವಶ್ಯಕವಿರುವ ಅಂಶಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಕ್ಷೆ ಮಂಜೂರಾತಿ, ಕಟ್ಟಡ ನಿರ್ಮಾಣ, ಕಾನೂನು ತೊಡಕುಗಳ ಪರಿಹಾರ ಕ್ರಮಗಳಲ್ಲಿ ಬಿಡಿಎ ಪಾತ್ರ ಮಹತ್ವದ್ದಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಗೋವಿಂದರಾಜ ನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ವೇಗವಾಗಿ ಪೂರ್ಣಗೊಳಿಸಬೇಕು. ವಿವಿಧ ಕಾರಣಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಪರಿಹರಿಸಬೇಕು ಎಂದು ಸೂಚಿಸಿದರು.

Congress Padayatre: ಕಾಂಗ್ರೆಸ್‌ ಪಾದಯಾತ್ರೆ ಹಿಂದಿನ ಕಾರಣ ಬಿಚ್ಚಿಟ್ಟ ಸಚಿವ ಸೋಮಣ್ಣ

ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌(SR Vishwanath) ಮಾತನಾಡಿ, ಸಚಿವರು ಬಡವರಿಗಾಗಿ ಒಂದು ಲಕ್ಷ ಮನೆಗಳನ್ನು ನಿರ್ಮಿಸುವ ಯೋಜನೆ ಮಾಡಿದ್ದು, ಈ ಮಹತ್ವದ ಕಾರ್ಯದಲ್ಲಿ ಬಿಡಿಎ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು.

ಸಭೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ, ಬಿಡಿಎ ಆಯುಕ್ತ ಎಂ.ಬಿ.ರಾಜೇಶ್‌ಗೌಡ, ಎಂಜಿನಿಯರ್‌ ಸದಸ್ಯ ಶಾಂತರಾಜಣ್ಣ, ಆರ್ಥಿಕ ಸದಸ್ಯ ರಾಮಪ್ರಸಾದ್‌, ನಗರ ಯೋಜಕ ಧನಂಜಯ ರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ದೇವನಹಳ್ಳಿ ವ್ಯಾಪ್ತಿ ರೈಲ್ವೆ ಅಂಡರ್‌ಪಾಸಲ್ಲಿ ನೀರು ನಿಲ್ಲದಂತೆ ಕ್ರಮಕ್ಕೆ ಸಚಿವರ ಸೂಚನೆ

ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ(Devanahalli Assembly constituency) ಮಳೆಯಿಂದಾಗಿ(Rain) ರೈಲ್ವೆ ಸೇತುವೆಯ ಅಂಡರ್‌ಪಾಸ್‌ನಲ್ಲಿ ನೀರು ನಿಂತು ಸಾರ್ವಜನಿಕ ಸಂಚಾರಕೆ ಅಡಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಶೀಘ್ರವಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ವಸತಿ ಮತ್ತು ಮೂಲಸೌಕರ್ಯ ಸಚಿವ ವಿ.ಸೋಮಣ್ಣ ಸೂಚಿಸಿದ್ದಾರೆ.

ಮಂಗಳವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಇರಿಗೇನಹಳ್ಳಿ, ಹಾರೋಹಳ್ಳಿ, ಯರ್ಥಗಾನಹಳ್ಳಿ, ಐವಿಸಿ ರಸ್ತೆ ಮತ್ತು ಹಕ್ಕುಪೇಟೆ ಗ್ರಾಮದಲ್ಲಿನ ರೈಲ್ವೆ ರಸ್ತೆ ಕೆಳ ಸೇತುವೆಗಳ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ರೈಲ್ವೆ ಸೇತುವೆಯ ಅಂಡರ್‌ಪಾಸ್‌ನಲ್ಲಿ(Underpass) ನೀರು ನಿಲ್ಲದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

Karnataka Housing Projects : ಆದಿವಾಸಿಗಳ ಮನೆ ನಿರ್ಮಾಣಕ್ಕೆ ನೆರವು -ಮೊತ್ತವೆಷ್ಟು?

ರಾಜ್ಯದ(Karnataka) ಸರ್ವತೋಮುಖ ಅಭಿವೃದ್ಧಿಗೆ ಅದ್ವಿತೀಯ ಕೊಡುಗೆ ನೀಡಿದ ಮೈಸೂರಿನ ಮಹಾರಾಜರು ಮತ್ತು ಅವರ ದಿನರಾಗಿದ್ದ ಸರ್‌.ಎಂ.ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯ ಫಲವಾಗಿ ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಿತವಾಗಿದ್ದ ಯಲಹಂಕ-ಚಿಕ್ಕಬಳ್ಳಾಪುರ ರೈಲು ಮಾರ್ಗಗಳನ್ನು 1990ರ ದಶಕದಲ್ಲಿ ಬ್ರಾಡ್‌ಗೇಜ್‌ಗೆ ಪರಿವರ್ತಿಸಲಾಗಿದೆ. ನಂತರದ ದಿನದಲ್ಲಿ ರೈಲ್ವೆ ಇಲಾಖೆಯು ರೈಲುಗಳ ಸುರಕ್ಷತೆ ದೃಷ್ಟಿಯಿಂದ ರೈಲ್ವೆ ಲೆವಲ್‌ ಕ್ರಾಸಿಂಗ್‌ ಗೇಟ್‌ಗಳನ್ನು ತೆರವುಗೊಳಿಸಿ ಅವುಗಳ ಬದಲಿಗೆ ರಸ್ತೆ ಕೆಳ ಸೇತುವೆಗಳನ್ನು ನಿರ್ಮಿಸಿತು. ಮಳೆಗಾಲದಲ್ಲಿ ನೀರು ನಿಂತು ರೈತರು, ವಾಹನ ಸಂಚಾರರಿಗೆ ಅಡಚಣೆಯಾಗುತ್ತಿರುವ ಬಗ್ಗೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಬೆಳಗಾವಿ ಅಧಿವೇಶನದ ವೇಳೆ ಸರ್ಕಾರದ(Government of Karnataka) ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಖುದ್ದು ಪರಿಶೀಲನೆ ನಡೆಸಿ ಪರಿಹಾರಕ್ಕೆ ಸೂಚಿಸಲಾಗಿದೆ ಎಂದರು.

ಈ ಲೈನ್‌ನಲ್ಲಿ ಬರುವ ಬ್ಯಾಟರಾಯನಪುರ, ಚಿಕ್ಕಬಳ್ಳಾಪುರ, ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ ಮತ್ತು ಬಂಗಾರಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಸೇರಿದಂತೆ ರಾಜ್ಯಾದ್ಯಂತ ಹಲವು ಅಂಡರ್‌ಪಾಸ್‌ಗಳಲ್ಲಿ ಇದೇ ಸಮಸ್ಯೆ ಇದೆ. ಅವುಗಳನ್ನು ತುರ್ತಾಗಿ ಬಗೆಹರಿಸಲು ನೈರುತ್ಯ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಸೂಚಿಸಿ ಕೈಗೊಂಡ ಕ್ರಮಗಳ ಕುರಿತ ವರದಿಯನ್ನು 15 ದಿನದಲ್ಲಿ ಸಲ್ಲಿಸಬೇಕು ಎಂಬ ಸೂಚನೆ ನೀಡಲಾಗಿದೆ. ಮಹಾರಾಜರ ಕಾಲದಲ್ಲಿ ದೊಡ್ಡಜಾಲ, ಆಹುತಿ, ವೆಂಕಟಗಿರಿಕೋಟೆ ಮತ್ತು ನಂದಿಗ್ರಾಮದಲ್ಲಿ ನಿರ್ಮಿತವಾದ ರೈಲ್ವೆ ನಿಲ್ದಾಣಗಳು ಶಿಥಿಲಗೊಂಡಿವೆ. ಈ ಪಾರಂಪರಿಕ ಕಟ್ಟಡಗಳನ್ನು ಪಾರಂಪರಿಕತೆಗೆ ಧಕ್ಕೆಯಾಗದಂತೆ ನವೀಕರಿಸಲು ಸೋಮಣ್ಣ ಅವರು ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕರಾದ ನಿಸರ್ಗ ನಾರಾಯಣಸ್ವಾಮಿ ವೆಂಕಟರಮಣಯ್ಯ, ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಶ್ರೀಧರ್‌ ಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
 

click me!