Shivamogga News: ಜಲಸಂಪನ್ಮೂಲ ಸಂರಕ್ಷಣೆ ಎಲ್ಲರ ಕರ್ತವ್ಯ: ಈಶ್ವರಪ್ಪ

By Kannadaprabha NewsFirst Published Nov 16, 2022, 2:18 PM IST
Highlights
  • ಜಲಸಂಪನ್ಮೂಲ ಸಂರಕ್ಷಣೆ ಎಲ್ಲರ ಕರ್ತವ್ಯ: ಈಶ್ವರಪ್ಪ
  •  ಕುವೆಂಪು ರಂಗಮಂದಿರದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ‘ಜಲಯಾತ್ರಾ’ ವಿಶೇಷ ಕಾರ್ಯಕ್ರಮ

ಶಿವಮೊಗ್ಗ (ನ.16) ಜಲ ಸಂಪನ್ಮೂಲಗಳನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಸ್ಥಳೀಯ ಪ್ರದೇಶಗಳಲ್ಲಿ ನೀರಿನ ಮೂಲಗಳನ್ನು ರಕ್ಷಿಸಬೇಕಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಶಿವಮೊಗ್ಗ ಕ್ಷೇತ್ರ ಶಾಸಕ ಕೆ.ಎಸ್‌. ಈಶ್ವರಪ್ಪ ಹೇಳಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ರೋಟರಿ ಕ್ಲಬ್‌ ಶಿವಮೊಗ್ಗ ಸೆಂಟ್ರಲ್‌ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ‘ಜಲಯಾತ್ರಾ’ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನೀರಿನ ಮೂಲಗಳು ಬತ್ತಿಹೋದರೆ ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಯನ್ನು ನಾವೆಲ್ಲರೂ ಎದುರಿಸಬೇಕಾಗುತ್ತದೆ. ಆದ್ದರಿಂದ ಕೆರೆ-ಕಟ್ಟೆಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸುವ ಕೆಲಸ ಆಗಬೇಕಿದೆ. ರಾಜ್ಯ ಸರ್ಕಾರ ಕೂಡ ಪ್ರತಿ ಜಿಲ್ಲೆಗಳಲ್ಲೂ ಕೆರೆಗಳ ಸಂರಕ್ಷಣೆಗೆ ಪ್ರಾಮುಖ್ಯತೆ ನೀಡಿ ಅಭಿವೃದ್ಧಿಪಡಿಸಲು ಅನುದಾನ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.

ಈಶ್ವರಪ್ಪಗೆ ಸಚಿವ ಸ್ಥಾನ ನೀಡಿ: ಹಿಂದುಳಿದ ಒಕ್ಕೂಟ ಒತ್ತಾಯ

ದೇಶದ ಪ್ರತಿ ಹಳ್ಳಿಗಳ ಮನೆ ಮನೆಗೂ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರ ಜಲಜೀವನ್‌ ಮಿಷನ್‌ ಯೋಜನೆ ಅನುಷ್ಠಾನಗೊಳಿಸುತ್ತಿದೆ. ಕುಡಿಯುವ ನೀರು, ನೀರಿನ ಮೂಲಗಳ ಸಂರಕ್ಷಣೆ, ಕೆರೆಕಟ್ಟೆಗಳಲ್ಲಿ ನೀರಿನ ಸಂಗ್ರಹ ಹೀಗೆ ಎಲ್ಲ ವಿಷಯಗಳ ಬಗ್ಗೆ ಜಾಗೃತಿ ಹೊಂದಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್‌ ಶಿವಮೊಗ್ಗ ಸೆಂಟ್ರಲ್‌ ಅಧ್ಯಕ್ಷ ಚಂದ್ರು ಜೆ.ಪಿ. ಮಾತನಾಡಿ, ಮಕ್ಕಳಿಗೆ ನೀರಿನ ಸಂರಕ್ಷಣೆ ಮಹತ್ವದ ಅರಿವು ಮೂಡಿಸುವ ದೃಷ್ಟಿಯಿಂದ ರೋಟರಿ ಸಂಸ್ಥೆಯು ವಿಶೇಷ ಕಾರ್ಯಕ್ರಮ ಆಯೋಜಿಸಿದೆ. ಮುಂದಿನ ಪೀಳಿಗೆಗೆ ನೀರಿನ ಸಂಪನ್ಮೂಲ ಉಳಿಸಬೇಕಿರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಜಲಯಾತ್ರಾ ವಲಯ ಸಂಯೋಜಕ ರಮೇಶ್‌ ಎನ್‌. ಪ್ರಾಸ್ತಾವಿಕವಾಗಿ ಮಾತನಾಡಿ, ರೋಟರಿ ಸಂಸ್ಥೆ ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿಯೂ ಉತ್ತಮ ಕೆಲಸ ಮಾಡುತ್ತಿದೆ. ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವ ಕಾರ್ಯ ನಡೆಸುತ್ತಿದೆ. ನೀರಿನ ಬಗ್ಗೆ ಜಾಗೃತಿ ಮೂಡಿಸುವ ಆಶಯದಿಂದ ‘ಜಲಯಾತ್ರಾ’ ಎನ್ನುವ ವಿಶೇಷ ಕಾರ್ಯಕ್ರಮ ಆಯೋಜಿಸಿದೆ ಎಂದು ತಿಳಿಸಿದರು.

ರೋಟರಿ ಜಿಲ್ಲೆ 3182ರ ಜಲಯಾತ್ರಾ ಛೇರ್ಮನ್‌ ಪೊ›. ಕೆ.ನಾರಾಯಣ ಶೆಣೈ ನೀರಿನ ಸಂರಕ್ಷಣೆ ಹಾಗೂ ನೀರಿನ ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಜಲಸಂರಕ್ಷಣೆ ಕುರಿತ ಗೀತೆಗಳನ್ನು ಮಕ್ಕಳಿಗೆ ಹಾಡಿಸಿದರು. ರೋಟರಿ ಕ್ಲಬ್‌ ಶಿವಮೊಗ್ಗ ಸೆಂಟ್ರಲ್‌ ವತಿಯಿಂದ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಿವಮೊಗ್ಗ ನಗರದ ಶಾಲೆಯ ವಿದ್ಯಾರ್ಥಿಗಳಿಗೆ ಜಲಯಾತ್ರಾ ವಿಶೇಷ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ನೀಡಲಾಯಿತು. ಶಿವಮೊಗ್ಗ ನಗರದ ವಿವಿಧ ಶಾಲೆಯ ಐನೂರಕ್ಕೂ ಅಧಿಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಿದ್ದರಾಮಯ್ಯ ಅಲೆಮಾರಿ ರಾಜಕಾರಣಿ, ಎಲ್ಲೇ ನಿಂತ್ರೂ ಸೋಲ್ತಾರೆ: ಈಶ್ವರಪ್ಪ

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪರಮೇಶ್ವರಪ್ಪ ಸಿ.ಆರ್‌, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ…, ವಲಯ ಸಹಾಯಕ ಗವರ್ನರ್‌ ಡಾ. ಗುಡದಪ್ಪ ಕಸಬಿ, ವಲಯ ಸಹಾಯಕ ಗವನರ್ರ ಸುನೀತಾ ಶ್ರೀಧರ್‌, ವಲಯ ಲೆಫ್ಟಿನೆಂಟ್‌ ರವಿ ಕೋಟೋಜಿ, ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಸುಮತಿ ಕುಮಾರಸ್ವಾಮಿ, ರೋಟರಿ ಕ್ಲಬ್‌ ಶಿವಮೊಗ್ಗ ಸೆಂಟ್ರಲ್‌ ಕಾರ್ಯದರ್ಶಿ ಬಸವರಾಜ್‌ ಬಿ, ಜಿ.ವಿಜಯ್‌ಕುಮಾರ್‌, ಮಾಜಿ ಜಿಲ್ಲಾ ಗವನರ್ರ ಜಿ.ಎನ್‌. ಪ್ರಕಾಶ್‌, ರೋಟರಿ ಕ್ಲಬ್‌ ಕೋಣಂದೂರು ಅಧ್ಯಕ್ಷ ಪುಟ್ಟಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್‌, ಎಂ.ವಿ. ಭಟ್‌, ಗಣೇಶ್‌ ಅಂಗಡಿ ಮತ್ತಿತರರು ಉಪಸ್ಥಿತರಿದ್ದರು.

click me!