ಫಲಿತಾಂಶ ಕುತೂಹಲಕ್ಕೆ ತೆರೆ : ಮೊದಲ ಸ್ಥಾದಲ್ಲಿ ಕೈ ಪಡೆ ವಿಜಯ - 2ನೇ ಸ್ಥಾನದಲ್ಲಿ JDS

By Kannadaprabha NewsFirst Published Nov 10, 2020, 11:24 AM IST
Highlights

ಭಾರೀ ಕುತೂಹಲ ಸೃಷ್ಟಿಸಿದ್ದ ಚುನಾವಣಾ ಫಲಿತಾಂಶಕ್ಕೆ ತೆರೆ ಬಿದ್ದಿದ್ದು ಹೆಚ್ಚು ಸ್ಥಾನದಲ್ಲಿ ಕೈ ಪಡೆ ವಿಜಯ ಸಾಧಿಸಿದೆ. 

 ಕೆ.ಆರ್‌. ನಗರ (ನ.10): ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 12 ನಿರ್ದೇಶಕ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಏಳು ಮಂದಿ ಕಾಂಗ್ರೆಸ್‌ ಮತ್ತು ಐದು ಮಂದಿ ಜೆಡಿಎಸ್‌ ಬೆಂಬಲಿತರು ಆಯ್ಕೆಯಾಗಿದ್ದಾರೆ.

ಕೃಷಿ ಪತ್ತಿನ ಸಹಕಾರ ಸಂಘದ ಕ್ಷೇತ್ರದಿಂದ ಐದು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಹೊಸೂರು ಸಂಘದ ಎಚ್‌.ಆರ್‌. ಮಹೇಶ್‌, ಚಿಬುಕಹಳ್ಳಿ ಸಂಘದ ಎಚ್‌.ಎಸ್‌. ಅಶೋಕ, ಹಂಪಾಪುರ ಸಂಘದ ಎಚ್‌.ಆರ್‌. ರಮೇಶ್‌, ಹೆಬ್ಬಾಳು ಸಂಘದ ಎಚ್‌.ಆರ್‌. ಬಾಲಕೃಷ್ಣ ಮತ್ತು ಮಿರ್ಲೆ ಸಂಘದ ಎಂ.ಆರ್‌. ಮಂಜುನಾಥ್‌ ಜೆಡಿಎಸ್‌ ಬೆಂಬಲದಿಂದ ಆಯ್ಕೆಯಾದರು.

ಪ. ಜಾತಿ ಮೀಸಲು ಸ್ಥಾನಕ್ಕೆ ಡೆಗ್ಗನಹಳ್ಳಿ ಗ್ರಾಮದ ಕೃಷ್ಣಮೂರ್ತಿ, ಪ. ಪಂಗಡ ಸ್ಥಾನಕ್ಕೆ ಗಳಿಗೆಕೆರೆಯ ಜಿ.ಎಸ್‌. ತೋಟಪ್ಪನಾಯಕ, ಮಹಿಳಾ ಮೀಸಲು ಕ್ಷೇತ್ರದಿಂದ ದೊಡ್ಡಕೊಪ್ಪಲು ಗ್ರಾಮದ ಪ್ರಮೀಳ ಜಯರಾಮ್‌ ಮತ್ತು ಜಿ.ಆರ್‌. ಸ್ವರೂಪ ಅವರು ಕಾಂಗ್ರೆಸ್‌ ಬೆಂಬಲಿತರಾಗಿ ಚುನಾಯಿತರಾದರು.

ಆರ್‌ಆರ್‌ ನಗರ, ಶಿರಾ ಬೈ ಎಲೆಕ್ಷನ್ ಮುಗಿಯುತ್ತಿದ್ದಂತೆಯೇ ಮತ್ತೆರೆಡು ಉಪಚುನಾವಣೆಗೆ ಸಿದ್ಧತೆ ..

ಉಳಿದಂತೆ ಸಂಘದ ಮಾಜಿ ಅಧ್ಯಕ್ಷ ಎಸ್‌. ಸಿದ್ದೇಗೌಡ, ಮಾಜಿ ಉಪಾಧ್ಯಕ್ಷ ಟಿ.ಎಲ್‌. ಪರಶಿವಮೂರ್ತಿ ಮತ್ತು ಗಿರೀಶ್‌ ಅವರು ಕಾಂಗ್ರೆಸ್‌ ಬೆಂಬಲದೊಂದಿಗೆ ಅವಿರೋಧ ಆಯ್ಕೆಯಾಗಿದ್ದರು.

12 ನಿರ್ದೇಶಕ ಬಲದ ಟಿಎಪಿಸಿಎಂಎಸ್‌ನಲ್ಲಿ ಕಾಂಗ್ರೆಸ್‌ ಬೆಂಬಲಿತರು ಏಳು ಮಂದಿ ಮತ್ತು ಜೆಡಿಎಸ್‌ ಬೆಂಬಲಿತ ಐದು ಮಂದಿ ಆಯ್ಕೆಯಾಗಿದ್ದು, ಇವರ ಜತೆಗೆ ಎಂಡಿಸಿಸಿ ಬ್ಯಾಂಕಿನ ಪ್ರತಿನಿಧಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರು ಮತ್ತು ಸರ್ಕಾರದಿಂದ ನಾಮಕರಣಗೊಳ್ಳುವ ಓರ್ವ ನಾಮನಿರ್ದೇಶಿತರು ಮತದಾನದ ಹಕ್ಕು ಹೊಂದಿರುತ್ತಾರೆ.

ಹಾಗಾಗಿ ಒಟ್ಟು 15 ನಿರ್ದೇಶಕ ಸ್ಥಾನಗಳನ್ನು ಒಳಗೊಳ್ಳುವ ಟಿಎಪಿಸಿಎಂಎಸ್‌ನ ಅಧಿಕಾರದ ಗದ್ದುಗೆಯನ್ನು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಬೆಂಬಲಿತರಲ್ಲಿ ಯಾರು ಹಿಡಿಯಲಿದ್ದಾರೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

click me!